ಬಿಬಿಎಂಪಿ ಆಯುಕ್ತರ ವರ್ಗಾವಣೆ; ಸರ್ಕಾರದ ದ್ವೇಷ ರಾಜಕೀಯ?
ಬೆಂಗಳೂರು, ಫೆಬ್ರವರಿ 13 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ, ಐಎಎಸ್ ಅಧಿಕಾರಿ ಬಿ. ಎಚ್. ಅನಿಲ್ ಕುಮಾರ್ ವರ್ಗಾವಣೆಯಾಗಿದೆ. 2019ರ ಆಗಸ್ಟ್ನಲ್ಲಿ ಅವರು ಬಿಬಿಎಂಪಿ ಆಯುಕ್ತರಾಗಿ ನೇಮಕಗೊಂಡಿದ್ದರು.
ಗುರುವಾರ ಕರ್ನಾಟಕ ಸರ್ಕಾರ ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಗೌರವ್ ಗುಪ್ತಾರನ್ನು ನೂತನ ಆಯುಕ್ತರಾಗಿ ನೇಮಕ ಮಾಡಲಾಗಿದೆ.
2019ರ ಆಗಸ್ಟ್ನಲ್ಲಿ ಬಿ. ಎಚ್. ಅನಿಲ್ ಕುಮಾರ್ ಬಿಬಿಎಂಪಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರನ್ನು ಆರೋಗ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರು ನಗರಾಭಿವೃದ್ಧಿ ಖಾತೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೈಯಲ್ಲಿಯೇ ಇದೆ. ಬಿಬಿಎಂಪಿಯಲ್ಲಿ ಬಿಜೆಪಿಯ ಅಧಿಕಾರವೇ ಇದೆ. ಆದರೂ ಎರಡು ವರ್ಷಕ್ಕೆ ಮೊದಲೇ ಸರ್ಕಾರ ಆಯುಕ್ತರ ವರ್ಗಾವಣೆ ಮಾಡಿದೆ.
ಕಸದ ವಿಲೇವಾರಿ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ನಲ್ಲಿ ಸರ್ಕಾರ ಮತ್ತು ಬಿಬಿಎಂಪಿಗೆ ಕಳೆದ ಕೆಲವು ದಿನಗಳಿಂದ ಮುಖಭಂಗವಾಗಿತ್ತು. ಹಲವಾರು ಬಾರಿ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು. ಆದ್ದರಿಂದ, ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಇವೆ.
ಆಯುಕ್ತ ವಿರುದ್ಧ ಹಲವು ಆರೋಪಗಳು ಸಹ ಕೇಳಿ ಬಂದಿದ್ದವು. ಜನರ ಕೈಗೆ ಸಿಗುವುದಿಲ್ಲ ಎಂಬ ಆರೋಪವೋ ಇತ್ತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಅವರು ಸಕ್ರಿಯರಾಗಿದ್ದರು.
ಜನರು ಸಮಸ್ಯೆಗಳ ಬಗ್ಗೆ ಟ್ವೀಟ್ ಮಾಡಿದರೆ ತಕ್ಷಣ ಪ್ರತಿಕ್ರಿಯೆಯನ್ನು ನೀಡುತ್ತಿದ್ದರು. ಬೆಂಗಳೂರಲ್ಲಿ ಕಸ ವಿಂಗಡನೆ, ವಿಲೇವಾರಿಯಲ್ಲಿ ಹಲವಾರು ದಿಟ್ಟ ಕ್ರಮಗಳನ್ನು ಬಿ. ಎಚ್. ಅನಿಲ್ ಕುಮಾರ್ ಕೈಗೊಂಡಿದ್ದರು.












Click it and Unblock the Notifications