ತ್ಯಾಜ್ಯ ನಿರ್ವಹಣೆ ವಿಚಾರ, ಬಿಬಿಎಂಪಿಯಿಂದ ಜನಾಭಿಪ್ರಾಯ ಸಂಗ್ರಹ ಯಶಸ್ವಿ
ಬೆಂಗಳೂರು, ಮೇ 10: ಘನ ತ್ಯಾಜ್ಯ ನಿರ್ವಹಣೆ (Solid Waste Management) ವಿಚಾರದಲ್ಲಿ ವಿವಿಧ ವರ್ಗಗಳಿಂದ ಅಭಿಪ್ರಾಯ ಸಂಗ್ರಹಿಸುವ ಕಾರ್ಯದಲ್ಲಿ ಬಿಬಿಎಂಪಿ ಯಶಸ್ವಿಯಾಗಿದೆ. 2022ರ ಸ್ವಚ್ಛ ಸರ್ವೇಕ್ಷಣೆಗಾಗಿ ಬೆಂಗಳೂರಿನ 5 ಲಕ್ಷಕ್ಕೂ ಹೆಚ್ಚು ನಾಗರಿಕರಿಂದ ಬಿಬಿಎಂಪಿ ಅಭಿಪ್ರಾಯ ಸಂಗ್ರಹಿಸಿ ಕಳುಹಿಸುತ್ತಿದೆ.
ಕೇಂದ್ರ ಸರಕಾರ ದೇಶಾದ್ಯಂತ ಕೈಗೊಳ್ಳುವ ಸ್ವಚ್ಛ ಸರ್ವೇಕ್ಷಣೆ (Swachh Survekshan) ಯೋಜನೆಯಲ್ಲಿ ಪ್ರತೀ ವರ್ಷ ವಿವಿಧ ನಗರ, ಪಟ್ಟಣಗಳನ್ನ ಸ್ವಚ್ಛತೆಯ ಆಧಾರದ ಮೇಲೆ ಶ್ರೇಯಾಂಕದ ಪಟ್ಟಿ ಬಿಡುಗಡೆ ಮಾಡುತ್ತದೆ. ಎಲ್ಲಾ ವರ್ಷವೂ ಬೆಂಗಳೂರು ಉತ್ತಮ ಸ್ಥಾನ ಪಡೆಯಲು ವಿಫಲವಾಗುತ್ತಲೇ ಬಂದಿದೆ. ಕಸ ಸಂಗ್ರಹ ವಿಚಾರದಲ್ಲಿ ಜನರ ಅಭಿಪ್ರಾಯ ಸಂಗ್ರಹ ಮಾಡಿ ಸಲ್ಲಿಸದೇ ಹೋಗುತ್ತಿದ್ದು ಬೆಂಗಳೂರಿನ ರ್ಯಾಂಕಿಂಗ್ಗೆ ಹೊಡೆತ ಬಿದ್ದಿತ್ತು.
ಮಸೀದಿ ಮುಂದೆಯೇ ಮಾರಮ್ಮನ ಜಾತ್ರೆ: ಮುಸ್ಲಿಮರಿಂದ ತಂಪು ಪಾನೀಯ ವಿತರಣೆ
ಈ ಹಿನ್ನೆಲೆಯಲ್ಲಿ ಈ ಬಾರಿ ಜನರ ಅಭಿಪ್ರಾಯ ಸಂಗ್ರಹಕ್ಕೆ ಬಿಬಿಎಂಪಿ ಗಮನ ಕೊಟ್ಟಿದೆ. ಇದಕ್ಕಾಗಿ ಬಿಬಿಎಂಪಿಯ ವಿಶೇಷ ಆಯುಕ್ತ (ಘನ ತ್ಯಾಜ್ಯವಸ್ತು ನಿರ್ವಹಣೆ) ಹರೀಶ್ ಕುಮಾರ್ ಅವರನ್ನು ಮುಂಚೂಣಿಗೆ ಬಿಡಲಾಯಿತು. 210 ಕಿರಿಯ ಆರೋಗ್ಯ ನಿರೀಕ್ಷಕರು, 262 ಮಾರ್ಷಲ್ಗಳು, 282 ಲಿಂಕ್ ವರ್ಕರ್ಸ್, ಮತ್ತು 13 ಕಾಲೇಜು ವಿದ್ಯಾರ್ಥಿಗಳನ್ನು ಈ ಕೆಲಸಕ್ಕಾಗಿ ನಿಯೋಜಿಸಲಾಯಿತು. ನಗರದ ವಿವಿಧ ವರ್ಗ ಮತ್ತು ಪ್ರದೇಶಗಳಲ್ಲಿ ಕಸ ನಿರ್ವಹಣೆ ಬಗ್ಗೆ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಹೀಗೆ 5 ಲಕ್ಷಕ್ಕೂ ಹೆಚ್ಚು ಜನರ ಅಭಿಪ್ರಾಯ ಕಲೆಹಾಕಿ ಸ್ವಚ್ಛ ಸರ್ವೇಕ್ಷಣೆ 2022ಗೆ ಕಳುಹಿಸಿಕೊಡುತ್ತಿದೆ.
ವಿಶೇಷ ಎಂದರೆ, ಕಸ ನಿರ್ವಹಣೆ ವಿಚಾರದಲ್ಲಿ ಜನರ ಬಳಿ ಅಭಿಪ್ರಾಯ ಸಂಗ್ರಹಿಸಲು ಗೂಗಲ್ ಫಾರ್ಮ್ ಬಳಸಲಾಗಿತ್ತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೂಗಲ್ ಫಾರ್ಮ್ಸ್ ಲಭ್ಯವಾಗಿತ್ತು.
ಯಾವ್ಯಾವುದರ ಮೇಲೆ ಅಭಿಪ್ರಾಯ ಸಂಗ್ರಹ?; ಮನೆ ಮನೆ ಬಳಿ ಕಸ ಸಂಗ್ರಹಣೆ, ಮೂಲದಲ್ಲೇ ಕಸ ವರ್ಗೀಕರಣ, ಸಾರ್ವಜನಿಕ ಶೌಚಾಲಯ ಇತ್ಯಾದಿ ಕಸ ನಿರ್ವಹಣೆಯ ವಿವಿಧ ವಿಚಾರಗಳ ಬಗ್ಗೆ ಜನರಿಂದ ಅಭಿಪ್ರಾಯ ಕಲೆಹಾಕಲಾಗಿತ್ತು.
ಪತ್ರಕರ್ತೆ ಶೃತಿ ನಾರಾಯಣನ್ ಆತ್ಮಹತ್ಯೆ ಪ್ರಕರಣ: ತಿಂಗಳಾದರೂ ಪತಿ ಸಿಗಲಿಲ್ಲ!
"ಜನಾಭಿಪ್ರಾಯವನ್ನು ತಿರುಚುವ ಸಾಧ್ಯತೆ ಕಡಿಮೆ ಮಾಡಲು ಜನಾಭಿಪ್ರಾಯ ಸಂಗ್ರಹಿಸಲಾದ ಪ್ರತಿಯೊಬ್ಬ ವ್ಯಕ್ತಿಯ ಮೊಬೈಲ್ ಫೋನ್ ನಂಬರ್ಗಳನ್ನು ಪಡೆಯಲಾಯಿತು. ಸರ್ವೆಯಲ್ಲಿ ಪಾಲ್ಗೊಂಡ ವ್ಯಕ್ತಿಯ ಮೊಬೈಲ್ ನಂಬರ್ ಹಾಕದಿದ್ದರೆ ಜನಾಭಿಪ್ರಾಯವನ್ನು ಅಪ್ಲೋಡ್ ಮಾಡಲು ಸಾಧ್ಯವಾಗುವುದಿಲ್ಲ" ಎಂದು ಬಿಬಿಎಂಪಿಗೆ ನೆರವಾಗುತ್ತಿರುವ ತ್ಯಾಜ್ಯ ನಿರ್ವಹಣೆ ತಜ್ಞ ವಿ ರಾಮಪ್ರಸಾದ್ ಹೇಳಿದ್ದಾರೆ.
ಜನರ ಈ ಅಭಿಪ್ರಾಯವನ್ನು ಸ್ವಚ್ಛ ಸರ್ವೇಕ್ಷಣೆಗೆ ಕಳುಹಿಸಿಕೊಟ್ಟ ಬಳಿಕ ಬಿಬಿಎಂಪಿ ಇದರ ಪರಾಮರ್ಶೆ ನಡೆಸಲಿದೆ. ಜನರು ಯಾವುದಾದರೂ ಲೋಪದೋಷ, ದೂರುಗಳನ್ನು ನೀಡಿದ್ದರೆ ಅದರ ಕಡೆ ಗಮನ ಕೊಟ್ಟು ಅದನ್ನು ಬಗೆಹರಿಸುವ ಕೆಲಸ ಮಾಡುವ ಆಲೋಚನೆ ಬಿಬಿಎಂಪಿಯದ್ದಾಗಿದೆ.
ಮುಂದಿನ ದಿನಗಳಲ್ಲಿ ಇದೇ ರೀತಿ ಜನಾಭಿಪ್ರಾಯ ಕಲೆಹಾಕುವ ವ್ಯವಸ್ಥೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಯೋಜಿಸಲಾಗುತ್ತಿದೆ. "ಫೂಡ್ ಡೆಲಿವರಿ ಆ್ಯಪ್ಗಳು ಪ್ರತೀ ಬಾರಿ ಸೇವೆ ನೀಡಿದಾಗಲೂ ಗ್ರಾಹಕರಿಂದ ಪ್ರತಿಕ್ರಿಯೆ ಪಡೆಯುತ್ತವೆ. ಬಿಬಿಎಂಪಿ ಕೂಡ ಅದೇ ರೀತಿ ಯಾಕೆ ಮಾಡಬಾರದು?" ಎಂಬುದು ವಿ. ರಾಮಪ್ರಸಾದ್ ಕೇಳುತ್ತಾರೆ.
ಕೇಂದ್ರ ಸರಕಾರ ನಡೆಸುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ಜನರ ಅನಿಸಿಕೆಯೂ ಮಾನದಂಡವಾಗಿರುತ್ತದೆ. ಬೆಂಗಳೂರಿನಲ್ಲಿ ಹಿಂದೆ ಸಮರ್ಪಕವಾಗಿ ಜನಾಭಿಪ್ರಾಯ ಸಂಗ್ರಹಿಸುವ ಕೆಲಸ ಆಗದೇ ಹೋದ್ದರಿಂದ ಸ್ವಚ್ಛ ಸರ್ವೇಕ್ಷಣೆ ಪಟ್ಟಿಯಲ್ಲಿ ಬೆಂಗಳೂರಿನದ್ದು ಕೆಳಗಿನ ಸ್ಥಾನ ಇರುತ್ತಿತ್ತು.
ಕಳೆದ ವರ್ಷದ ಸರ್ವೇಕ್ಷಣೆಯಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 48 ನಗರಗಳ ಪಟ್ಟಿಯಲ್ಲಿ ಬೆಂಗಳೂರು 28ನೇ ಸ್ಥಾನ ಪಡೆದಿತ್ತು. ನಗರದಲ್ಲಿ ಹಲವು ವರ್ಷಗಳಿಂದ ಬಹುತೇಕ ಕಟ್ಟುನಿಟ್ಟಾಗಿ ಕಸ ಸಂಗ್ರಹಣೆ ಕೆಲಸ ಆಗುತ್ತಿದ್ದರೂ ಸ್ವಚ್ಛ ಸರ್ವೇಕ್ಷಣೆ ಪಟ್ಟಿಯಲ್ಲಿ ಮಾತ್ರ ಮೇಲಿನ ಕ್ರಮಾಂಕಕ್ಕೆ ಬರಲು ಬೆಂಗಳೂರಿಗೆ ಸಾಧ್ಯವಾಗುತ್ತಿಲ್ಲ ಎಂಬುದು ಅಚ್ಚರಿ ಮೂಡಿಸಿತ್ತು.
(ಒನ್ಇಂಡಿಯಾ ಸುದ್ದಿ)
Recommended Video