ಬಾಕಿ ಕೊಡದ ಬಿಬಿಎಂಪಿ: ಮತ್ತೆ ಮುಷ್ಕರಕ್ಕೆ ಮುಂದಾದ ಗುತ್ತಿಗೆದಾರರು
ಬೆಂಗಳೂರು, ಜೂನ್ 27: ಬಾಕಿ ಬಿಲ್ ಹಣ ಪಾವತಿ ನೀಡದಿದ್ದರೆ ಶನಿವಾರ ಜೂನ್ 30ರಿಂದ ಕೆಲಸ ನಿಲ್ಲಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ತ್ಯಾಜ್ಯ ಗುತ್ತಿಗೆದಾರರು ಆಗ್ರಹಿಸಿದ್ದಾರೆ.
ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ನೀಡಿರುವ ಗಡುವು ಮುಗಿದರೂ ಬಾಕಿ ಇರುವ 219 ಕೋಟಿ ಬಿಲ್ ಹಣವನ್ನೂ ಇನ್ನೂ ಪಾವತಿ ಮಾಡಿಲ್ಲ, ಬಿಬಿಎಂಪಿ ಘನತ್ಯಾಜ್ಯ ವಿಲೇವಾರಿ ಮಾಡುವ ಆಟೋ ಮತ್ತು ಲಾರಿ ಮಾಲೀಕರು, ಗುತ್ತಿಗೆದಾರರು ವಾರಾಂತ್ಯದವರೆಗೂ ಕಾದು ನಂತರ ಕಸ ವಿಲೇವಾರಿ ಸ್ಥಗಿತಕ್ಕೆ ನಿರ್ಧರಿಸಿದ್ದಾರೆ.
ಬಾಕಿ ಬಿಲ್ ಪಾವತಿ, ಬಾಡಿಗೆ ದರ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂನ್ 11ರಂದು ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡದೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪರಮೇಶ್ವರ್ ಅವರು ಗುತ್ತಿಗೆದಾರರೊಂದಿಗೆ ಸಭೆ ನಡೆಸಿ 10 ದಿನದಲ್ಲಿ ಬಾಕಿ ಬಿಲ್ ಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು.

ಆದರೆ 10 ದಿನ ಕಳೆದರೂ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಕಸ ವಿಲೇವಾರಿ ಸ್ಥಗಿತಗೊಳಿಸಲು ಗುತ್ತಿಗೆದಾರರ ಸಂಘ ಮುಂದಾಗಿದೆ.
ಮೇಯರ್ ಸಂಪತ್ರಾಜ್ ಅವರು ತಾಜ್ಯ ವಿಲೇವಾರಿ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಮತ್ತೆ 10 ದಿನಗಳ ಸಮಯ ಕೇಳಿದ್ದಾರೆ. ಮೇಯರ್ ಅವರ ಈ ನಡೆಗೆ ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಾರಾಂತ್ಯದೊಳಗೆ ಬಾಕಿ ಬಿಲ್ ಪಾವತಿ ಮಾಡದಿದ್ದರೆ ಕಸ ವಿಲೇವಾರಿ ಸ್ಥಗಿತಗೊಳಿಸಲಾಗುತ್ತದೆ. ಕಸ ವಿಲೇವಾರಿಗೆ ಬದಲಿ ವಯವಸ್ಥೆ ಮಾಡಿಕೊಳ್ಳುವಂತೆಯೂ ಬಿಬಿಎಂಪಿಗೆ ತಿಳಿಸಿದ್ದಾರೆ.












Click it and Unblock the Notifications