ಕೊರೊನಾ; ಗಾಳಿಯಲ್ಲಿ ಔಷಧ ಸಿಂಪಡಣೆ, ಸುಳ್ಳು ಸುದ್ದಿ
ಬೆಂಗಳೂರು, ಮಾರ್ಚ್ 18; ಕೊರೊನಾ ವೈರಸ್ ಭಯಕ್ಕೆ ಜನ ತತ್ತರಿಸಿ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ.
ಆದರೆ, ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವಂತೆ ಕೆಲವರು ಕೊರೊನಾ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಜನರನ್ನು ಭಯ ಭೀತರನ್ನಾಗಿಸುತ್ತಿದ್ದಾರೆ.
ಇಂದು ಬೆಳಿಗ್ಗೆಯಿಂದ ಒಂದು ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ''ಬಿಬಿಎಂಪಿ ವತಿಯಿಂದ ಬುಧವಾರ ರಾತ್ರಿ 10 ರಿಂದ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು, ಬೆಂಗಳೂರಿನಲ್ಲಿ ಗಾಳಿಯಲ್ಲಿ ಔಷಧ ಸಿಂಪಡಣೆ ಮಾಡಲಾಗುತ್ತದೆ. ಈ ಸಮಯದಲ್ಲಿ ಯಾರೂ ಮನೆಯಿಂದ ಹೊರಗೆ ಬರಬಾರದು'' ಎಂಬ ಸಂದೇಶ ಹರಿದಾಡುತ್ತಿದೆ.

ಈನ ಬಗ್ಗೆ ಭಯ ಭೀತರಾದ ಜನ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಬಳಿ ಕೇಳಿದ್ದಾರೆ. ಒನ್ ಇಂಡಿಯಾ ಕನ್ನಡ ಸಹ, ಗೌತಮ್ ಅವರ ಬಳಿ ಸ್ಪಷ್ಟನೆ ಪಡೆಯಿತು. "ನಾವು ನಮ್ಮ ಔಷಧಿ ಸಿಂಪಡಣೆ ಮಾಡುತ್ತಿಲ್ಲ. ಇದು ಸುಳ್ಳು ಸುದ್ದಿ. ಯಾರೂ ನಂಬಬೇಡಿ. ಅನುಮಾನ ಇದ್ದರೆ 104 ಕ್ಕೆ ಕರೆ ಮಾಡಿ ಬಗೆಹರಿಸಿಕೊಳ್ಳಿ. ಕೊರೊನಾ ವೈರಸ್ ಬಗ್ಗೆ ಗಾಳಿ ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ಎಚ್ಚರಿಕೆ ನೀಡಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಒಟ್ಟು 14 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರ ಮಾರ್ಚ್ 31 ರವೆರೆಗೆ ಸಾರ್ವಜನಿಕ ನಿರ್ಭಂಧಗಳನ್ನು ಮುಂದುವರೆಸಿದೆ.












Click it and Unblock the Notifications