ಬಿಬಿಎಂಪಿ: ಪೂರ್ವ ವಲಯದಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಆಯುಕ್ತ ಸೂಚನೆ
ಬೆಂಗಳೂರು, ಅಕ್ಟೋಬರ್ 17: ಬಿಬಿಎಂಪಿ ವ್ಯಾಪ್ತಿಯ ಪೂರ್ವ ವಲಯದಲ್ಲಿನ ರಸ್ತೆಗುಂಡಿಗಳ ಸಮಸ್ಯೆ, ನೇತಾಡುವ ಒಎಫ್ಸಿ ಕೇಬಲ್, ರಸ್ತೆ ಬದಿಯಲ್ಲಿ ಹಾಕಿರುವ ಕಸ, ಕಟ್ಟಡದ ಅವಶೇಷಗಳು, ಸಂಚಾರ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳ ಪರಿಹಾರಕ್ಕೆ ಇಂದಿನಿಂದ ಕ್ರಮ ವಹಿಸಿ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೋಮವಾರ ನಗರದ ಪೂರ್ವ ವಲಯದಲ್ಲಿ 9ಕಿ.ಮೀ.ಗೂ ಹೆಚ್ಚು ದೂರು ನಡೆದು (ಕಾಲ್ನಡಿಗೆ) ವಿವಿಧ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿದರು.
ಬೆಳಗ್ಗೆ 6.30ಗಂಟೆಯಿಂದ 10.15ರವರೆಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಕಾಲ್ನಡಿಗೆ ಆರಂಭಿಸಿದರು. ಪೂರ್ವ ವಲಯದ ಹೊರ ವರ್ತುಲ ರಸ್ತೆ ಹೆಣ್ಣೂರು ಮೇಲು ಸೇತುವೆಯಿಂದ ಆರಂಭವಾದ ಪರಿಶೀಲನೆ ಕಾಚರಕನಹಳ್ಳಿ ಕೆರೆ, ಲಿಂಗರಾಜಪುರ ಮೇಲುಸೇತುವೆ, ಲಿಂಗರಾಜಪುರ ವಾರ್ಡ್ನ ಮಯೂರ ರಸ್ತೆ, ಗುಂಡಪ್ಪ ಮಠ ರಸ್ತೆ, ಜಾನಕಿ ರಾಮ್ ಲೇಔಟ್ ಮೂಲಕ ಕಮ್ಮನಹಳ್ಳಿ ಮೆಲ್ಸೇತುವೆವರೆಗೆ ಪರಿಶೀಲಿಸಿ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ''ಮೊದಲು ಹೆಣ್ಣೂರು ಮೆಲ್ಸೇತುವೆ ಭಾಗದಲ್ಲಿರುವ ತ್ಯಾಜ್ಯ ವಿಲೇವಾರಿ ಮಾಡಿ. ಮೇಲುಸೇತುವೆ ಜಂಕ್ಷನ್ನಲ್ಲಿ ರಸ್ತೆ ದುರಸ್ತಿ ಕಾರ್ಯ ಕೂಡಲೇ ಕೈಗೆತ್ತಿಕೊಳ್ಳಿ. ಹೊರ ವರ್ತುಲ ರಸ್ತೆಯಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದರ ಜೊತೆಗೆ ಅಲ್ಲಲ್ಲಿ ರಸ್ತೆ ಬದಿಯಿರುವ ಮರದ ಕೊಂಬೆಗಳನ್ನು ಕತ್ತರಿಸಿ ಸಂಚಾರಕ್ಕೆ ಅನುವು ಮಾಡಬೇಕು. ಜೀವಕ್ಕೆ ಕಂಟಕವಾಗುವಂತೆ ನೇತಾಡುವ ಓಎಫ್ಸಿ ಕೇಬಲ್ ತೆರವುಗೊಳಿಸಿ ಹೊರ ವರ್ತುಲ ರಸ್ತೆಗಳನ್ನು ವಾರ್ಷಿಕ ನಿರ್ವಹಣೆ ಗುತ್ತಿಗೆ ನೀಡಿ'' ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾದಚಾರಿ ಒತ್ತುವರಿ ತೆರವು ಮಾಡಲು ಸೂಚನೆ
ಹೆಣ್ಣೂರು ಮೇಲುಸೇತುವೆಯಿಂದ ಲಿಂಗರಾಜಪುರ ಕಡೆಗೆ ಹೋಗುವ ಮುಖ್ಯ ರಸ್ತೆಯನ್ನು ಪರಿಶೀಲಿಸಿ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಬದಿಯಿರುವ ತ್ಯಾಜ್ಯ ಕಟ್ಟಡ ಭಗ್ನಾವಶೇಷಗಳನ್ನು ಶಿಲ್ಟ್ ಅಂಡ್ ಟ್ರ್ಯಾಕ್ಟರ್ ಹಾಗೂ ಪೌರಕಾರ್ಮಿಕರನ್ನು ಬಳಸಿಕೊಂಡು ತೆರವುಗೊಳಿಸಬೇಕು. ನೇತಾಡುವ ಒ.ಎಫ್.ಸಿ ಕೇಬಲ್ ಗಳನ್ನು ತೆರವುಗೊಳಿಸಬೇಕು. ಜೊತೆಗೆ ಮುಖ್ಯ ರಸ್ತೆ ಬದಿಯ ಅಂಗಡಿಗಳ ಮುಂಭಾಗ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವುದನ್ನು ಕೂಡಲೆ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಣ್ಣೂರು ಮುಖ್ಯರಸ್ತೆ ಎಚ್.ಬಿ.ಆರ್ ಲೇಔಟ್ ಹಾಗೂ ಇನ್ನಿತರ ಕಡೆಗಳಲ್ಲಿ ಆದ ಪಾದಾಚಾರಿ ಒತ್ತುವರಿಯನ್ನು ತೆರವು ಮಾಡಿ. ಒತ್ತುವರಿ ಜಾಗದಲ್ಲಿ ಕಾರು ನಿಲ್ಲಿಸಿದವರಿಗೆ ನೋಟಿ ಜಾರಿ ಮಾಡಿ. ಕೆಲವೆಡೆ ರಸ್ತೆ ಬದಿ ಅಳವಡಿಸಿದ ಕಸದ ಬಿನ್ ಗಳನ್ನು ಪರಿಶೀಲಿಸಿ ಸ್ವಿಚ್ಚವಾಗಿಟ್ಟುಕೊಳ್ಳಬೇಕು. ಸಾಯಿಬಾಬಾ ದೇವಸ್ಥಾನದ ಬಳಿ ರಾಜಕಾಲುವೆ ಪರಿಶೀಲನೆ ನಡೆಯಿತು. ಈ ವೇಳೆ ಖಾಲಿ ಜಾಗದಲ್ಲಿ ಇರುವ ನರ್ಸರಿಯನ್ನು ತೆಗೆದು ಹಾಕಿ ಪಾದಾಚಾರಿ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಸೂಚಿಸಿದರು.

ರಸ್ತೆ ತೆರೆದು ಸಂಚಾರಕ್ಕೆ ಅನುವು ಮಾಡಿ
ಹೆಣ್ಣೂರು ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ಎಚ್.ಪಿ ಪೆಟ್ರೋಲ್ ಬಂಕ್ ಮುಂಭಾಗದ ಒಂದು ಬೀದಿಯ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಅದನ್ನು ಕೂಡಲೇ ತೆರವು ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಿ. ಚರಂಡಿಗೆ ಅಳವಡಿಸಿರುವ ಸ್ಲ್ಯಾಬ್ಗಳನ್ನು ದುರಸ್ತಿ ಮಾಡಿ, ಅಕ್ಕಪಕ್ಕದ ತ್ಯಾಜ್ಯ ವಿಲೇವಾರಿ ಮಾಡಿ, ರಸ್ತೆ ಮೇಲೆ ಬಿಳುವ ಬೀಳುವ ಮಳೆ ನೀರು ಶೋಲ್ಡರ್ ಡ್ರೈನ್ಗಳ ಮೂಲಕ ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಮಾಡಿ ಎಂದರು.

ಕಾಚರಕನಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿ
ಕಾಚರಕನಹಳ್ಳಿಯ ಸುಮಾರು 16 ಎಕರೆ 8 ಗುಂಟೆ ಕೆರೆ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಿಬಿಎಂಪಿಗೆ ಹಸ್ತಾಂತರಿಸಿದೆ. ಕೆರೆಯ ಅಂಗಳದಲ್ಲಿರುವ ಕೊಳಗೇರಿ ಪ್ರದೇಶದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳು ಇವೆ. ಅವರನ್ನು ಬೇರೆಡೆ ಸ್ಥಳಾಂತರಿಸಲು ಸ್ಲಂ ಬೋರ್ಡ್ನಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಹಸ್ತಾಂತರವಾಗಿರುವ ಜಾಗವನ್ನು ಅಭಿವೃದ್ಧಿಪಡಿಸಲು 7.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಸರ್ವೇ ಮಾಡಿ ಗುರುತಿಸಿ ಕೆರೆಯ ಜಾಗಕ್ಕೆ ಮೊದಲು ಫೆನ್ಸಿಂಗ್ ಅಳವಡಿಸಬೇಕು. ಬಳಿಕ ಕೆರೆಯ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಲಿಂಗರಾಜಪುರ ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ತೊಂದರೆ
ಲಿಂಗರಾಜಪುರ ಮೇಲುಸೇತುವೆಯ ಕೆಳಭಾಗದಲ್ಲಿ ಸ್ವಚ್ಛತೆ ಕಾಪಾಡಿ. ಲಿಂಗರಾಜಪುರ ವಾರ್ಡ್ನ ಮಯೂರ ರಸ್ತೆ, ಗುಂಡಪ್ಪ ಮಠ ರಸ್ತೆ, ಜಾನಕಿ ರಾಮ್ ಲೇಔಟ್ಗಳಲ್ಲಿನ ಪಾದಚಾರಿ ಮಾರ್ಗ ಒತ್ತುವರಿ ತೆರವು ಮಾಡಿ. ಕಮ್ಮನಹಳ್ಳಿ ಮುಖ್ಯ ರಸ್ತೆ ಮೇಲುಸೇತುವೆಯ ಕೆಳಭಾಗದಲ್ಲಿ ಮಳೆ ನೀರು ನಿಲ್ಲುತ್ತದೆ. ಇದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಿ, ನೀರು ನಿಲ್ಲದಂತೆ ಅಗತ್ಯ ಕ್ರಮ ವಹಿಸಿ ಎಂದರು.
ಇದೇ ಸ್ಥಳದಲ್ಲಿ ಬಾಣಸವಾಡಿ ಕಡೆಯಿಂದ ನಗರದೊಳಗೆ ಬರುವ ಮೇಲ್ಸೇತುವೆ ರ್ಯಾಂಪ್ ಬಳಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತದೆ. ಆ ಸ್ಥಳ ಅಗಲೀಕರಣ ಮಾಡಿ ಸೂಕ್ತ ಸಂಚಾರಕ್ಕೆ ಅನುಕೂಲ ಮಾಡಿ. ಇಂದು ಪರಿಶೀಲನೆ ನಡೆಸಿರುವ ಎಲ್ಲಾ ಕಡೆಗಳಲ್ಲಿ ವಲಯದ ಹಿರಿಯ ಅಧಿಕಾರಿಗಳು ಮರು ಪರಿಶೀಲನೆ ನಡೆಸಿ ಕೆಲಸ ಆಗಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಈ ವೇಳೆ ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ಮಲಯ ಜಂಟಿ ಆಯುಕ್ತರಾದ ಶಿಲ್ಪಾ, ಪ್ರಧಾನ ಎಂಜಿನಿಯರ್ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್, ವಲಯ ಮುಖ್ಯ ಎಂಜಿನಿಯರ್ ಸುಗುಣಾ ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications