ಕೋವಿಡ್ ಪರೀಕ್ಷೆ ಹೆಚ್ಚಿಸಿ- ಜನರನ್ನು ಜಾಗೃತಗೊಳಿಸಿ ಎಂದ ಮುಖ್ಯ ಆಯುಕ್ತರು
ಬೆಂಗಳೂರು, ಜೂನ್ 08: ಬೆಂಗಳೂರು ನಗರದಲ್ಲಿ ಕಾಲರಾ, ಡೆಂಗ್ಯೂ ಹಾಗೂ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಯಾ ವಲಯ ವ್ಯಾಪ್ತಿಯಲ್ಲಿ ತಕ್ಷಣ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಎಲ್ಲಾ ಆರೋಗ್ಯಧಿಕಾರಿಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರಾ, ಡೆಂಗ್ಯೂ ಹಾಗೂ ಕೋವಿಡ್-19ಗೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ''ನಗರದಲ್ಲಿ ಕಾಲರಾಗೆ ಸಂಬಂಧಿಸಿದಂತೆ ಆಯಾ ವಲಯ ವ್ಯಾಪ್ತಿಯಲ್ಲಿ ಎಲ್ಲಾ ಬೋರ್ವೆಲ್ಗಳು ಹಾಗೂ ಶುದ್ಧ ಕುಡಿಯುವ ನೀರಿನ ಘಟಕ(ಆರ್.ಒ ಪ್ಲಾಂಟ್)ಗಳಲ್ಲಿ ನೀರಿನ ಮಾದರಿ ಸಂಗ್ರಹಿಸಿ ಜಲಮಂಡಳಿಯ ಲ್ಯಾಬ್ಗಳಿಗೆ ಕಳುಹಿಸಿ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ನೀರು ಕುಡಿಯಲು ಯೋಗ್ಯವಿಲ್ಲದಿದ್ದಲ್ಲಿ ಅಂತಹ ಬೋರ್ವೆಲ್ ಹಾಗೂ ಆರ್.ಒ ಪ್ಲಾಂಟ್ಗಳನ್ನು ಕೂಡಲೆ ನಿಲ್ಲಿಸಿ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.'' ಎಂದರು
ಹೋಟೆಲ್ಗಳು, ಬೀದಿ ಬದಿ ಮಾರಾಟ ಮಾಡುವ ತಿನಿಸುಗಳು, ಕಟ್ ಫ್ರೂಟ್ಸ್(ಹಣ್ಣುಗಳನ್ನು ಕತ್ತರಿಸಿ ಮಾರಾಟ ಮಾಡುವ) ಸ್ಥಳಗಳಲ್ಲಿ ಕಡ್ಡಾಯವಾಗಿ ಶುಚಿತ್ವ ಕಾಪಾಡಿಕೊಳ್ಳಬೇಕು. ಜೊತೆಗೆ ಎಲ್ಲಾ ಹೋಟೆಲ್ಗಳಲ್ಲಿ ಕುದಿಸಿ ಆರಿಸಿದ ನೀರನ್ನು ಕೊಡಲು ತಿಳಿಸಿರಬೇಕು. ಈ ಸಂಬಂಧ ಎಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳು ಹೋಟೆಲ್ಗಳು, ಬೀದಿ ಬದಿಗಳಲ್ಲಿ ಮಾರಾಟ ಮಾಡುವ ತೆರೆದಿಟ್ಟು ವ್ಯಾಪಾರ ಮಾಡುವಂತಹ ಸ್ಥಳಗಳಿಗೆ ಭೇಟಿ ನೀಡಿ ಶುಚಿತ್ವ ಕಾಪಾಡಿಕೊಳ್ಳದಿದ್ದವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು. ಜೊತೆಗೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಅವಶ್ಯ ಔಷಧಿಗಳ ಸಂಗ್ರಹವಿರಬೇಕೆಂದು ತಿಳಿಸಲಾಗಿದೆ.

ಕಾಲರಾ, ಡೆಂಗ್ಯೂ ಹರಡುವ ಬಗ್ಗೆ ಭಿತ್ತಿಪತ್ರಗಳನ್ನು ಸಿದ್ದಪಡಿಸಿ
ಬೆಂಗಳೂರಿನಲ್ಲಿ ಕಾಲರಾ ಹರಡುವ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಈ ಸಂಬಂಧ ಕಾಲರಾ, ಡೆಂಗ್ಯೂ ಹರಡುವ ಬಗ್ಗೆ ಭಿತ್ತಿಪತ್ರಗಳನ್ನು ಸಿದ್ದಪಡಿಸಿ ಎಲ್ಲಾ ಹೋಟೆಲ್ಗಳು, ತಿನಿಸು ಮಳಿಗೆಗಳ ಮುಂಭಾಗ ಅಂಟಿಸಬೇಕು ಅಧಿಕಾರಿಗಳ ಸಭೆಯಲ್ಲಿ ಸೂಚನೆಯನ್ನು ನೀಡಲಾಗಿದೆ. ಮಳೆಯ ನೀರು ನಿಲ್ಲದಂತೆ ಕ್ರಮವನ್ನು ವಹಿಸಲು ಸಹ ಸಭೆಯಲ್ಲಿ ತಿಳಿಸಲಾಗಿದೆ.

ನಾಗರಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ
ನಗರದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ನಿಧಾನಗತಿಯಲ್ಲಿ ಹೆಚ್ಚುತ್ತಿದ್ದು, ಈ ಪೈಕಿ ಆಯಾ ವಲಯಗಳಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ಅವಶ್ಯಕ ಕೋವಿಡ್ ಪರೀಕ್ಷಾ ತಂಡಗಳನ್ನು ನಿಯೋಜಿಸಿಕೊಂಡು, ಪರೀಕ್ಷಾ ಪ್ರಮಾಣವನ್ನು 16 ಸಾವಿರದಿಂದ 20 ಸಾವಿರಕ್ಕೆ ಹೆಚ್ಚಿಸಬೇಕು. ಐಎಲ್ಐ ಹಾಗೂ ಸಾರಿ ಪ್ರಕರಣಗಳು ಕಂಡುಬಂದರೆ ಕೂಡಲೆ ಕೋವಿಡ್ ಪರೀಕ್ಷೆ ಮಾಡಬೇಕು. ನಾಗರಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡೆಂಗ್ಯೂ ಹರಡದಂತೆ ಕ್ರಮವನ್ನು ವಹಿಸಿ
ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪಾಲಿಕೆಯ ಆಶಾ ಕಾರ್ಯಕರ್ತೆಯರು, ಎಎನ್ಎಂಗಳನ್ನು ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿ ಲಾರ್ವಾ ಉತ್ಪತ್ತಿಯಾಗುವ ತಾಣಗಳನ್ನು ಪತ್ತೆಹಚ್ಚಿ ನಾಶ ಮಾಡುವ ಕೆಲಸ ಮಾಡಬೇಕು ಆ ಮೂಲಕ ಡೆಂಗ್ಯೂ ಹರಡದಂತೆ ಕ್ರಮವನ್ನು ವಹಿಸಬೇಕೆಂದು ಖಡಕ್ ಸೂಚನೆಯನ್ನು ನೀಡಿದ್ದಾರೆ.

ವರ್ಚುವಲ್ ಸಭೆಯಲ್ಲಿ ಖಡಕ್ ಸೂಚನೆ
ಬೆಂಗಳೂರು ಜನಸಂಖ್ಯೆ ಹೆಚ್ಚಾಗಿರುವ ನಗರ ದೇಶದಲ್ಲಿ ಕೋವಿಡ್ ಸಂಖ್ಯೆಯು ಹೆಚ್ಚಾಗುತ್ತಿರುವುದರಿಂದ ಜಾಗೃತಿ ಅತ್ಯಗತ್ಯಯ. ಕೋವಿಡ್ ಪರೀಕ್ಷೆಯನ್ನು ಹೆಚ್ಚು ಮಾಡುವ ಜೊತೆಗೆ ಕೋವಿಡ್, ಕಾಲರಾ, ಮತ್ತು ಡೆಂಗ್ಯೂ ಹರಡದಂತೆ ಬಿಬಿಎಂಪಿ ಜಾಗೃತವಾಗಿ ಕೆಲಸ ಮಾಡಬೇಕೆಂದು ವರ್ಚುವಲ್ ಸಭೆಯಲ್ಲಿ ಮುಖ್ಯ ಆಯುಕ್ತರು ಖಡಕ್ ಸೂಚನೆಯನ್ನು ನೀಡಿದ್ದಾರೆ. ಇನ್ನು ವರ್ಚುವಲ್ ಸಭೆಯಲ್ಲಿ ಎಲ್ಲಾ ವಲಯ ಆಯುಕ್ತರು, ಎಲ್ಲಾ ವಲಯ ಜಂಟಿ ಆಯುಕ್ತರು, ಎಲ್ಲಾ ವಲಯ ಮುಖ್ಯ ಅಭಿಯಂತರರು, ಮುಖ್ಯ ಆರೋಗ್ಯಾಧಿಕಾರಿ, ಎಲ್ಲಾ ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications