BBMP: "ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಮಿನಿಸ್ಟರ್ನಿಂದ ಬಿಬಿಎಂಪಿಗೆ ಈ ಸ್ಥಿತಿ"
ಬೆಂಗಳೂರಿನಲ್ಲಿ ಸಣ್ಣ ಸಣ್ಣ ನಿರ್ಲಕ್ಷ್ಯದಿಂದ ನಾಗರಿಕರು ಸಾವನ್ನಪ್ಪುವುದು ವರದಿಯಾಗುತ್ತಿದೆ. ಇದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಕಾರಣ. ಬಿಬಿಎಂಪಿಯ ಸಣ್ಣ ತಪ್ಪುಗಳಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಇದೀಗ ಬೆಂಗಳೂರಿನ ಮಲ್ಲೇಶ್ವರದಲ್ಲೂ ಇದೇ ರೀತಿ ಆಗಿದೆ. ಮಲ್ಲೇಶ್ವರದ ಬಿಬಿಎಂಪಿ ಆಟದ ಮೈದಾನ ಕಬ್ಬಿಣದ ಗೇಟ್ ಮೈಮೇಲೆ ಬಿದ್ದು 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇದಕ್ಕೆಲ್ಲ ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಮಂತ್ರಿಯೇ ಕಾರಣ....
ಬೆಂಗಳೂರಿನಲ್ಲಿ ಈ ರೀತಿ ಅವಘಡ ಸಂಭವಿಸುತ್ತಿರುವುದಕ್ಕೆ ಬಿಬಿಎಂಪಿ ನಿರ್ಲಕ್ಷದೊಂದಿಗೆ ಬೆಂಗಳೂರಿನ ಪಾರ್ಟ್ ಟೈಂ ಮಂತ್ರಿಯೂ ಕಾರಣ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ಅವರು, ಮಲ್ಲೇಶ್ವರದ ಬಿಬಿಎಂಪಿ ಆಟದ ಮೈದಾನ ಕಬ್ಬಿಣದ ಗೇಟ್ ಬಿದ್ದು 11 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ತೀವ್ರ ನೋವುಂಟು ಮಾಡಿದೆ. ಹೆತ್ತ ಕಂದಮ್ಮನನ್ನು ಕಳೆದುಕೊಂಡ ಪೋಷಕರ ದುಃಖದಲ್ಲಿ ನಾನೂ ಭಾಗಿ ಎಂದು ಹೇಳಿದ್ದಾರೆ.

ಮುಂದುವರಿದು ಫುಲ್ ಟೈಂ ಕೆಪಿಸಿಸಿ ಅಧ್ಯಕ್ಷರು ಹಾಗೂ ಪಾರ್ಟ್ ಟೈಂ ಬೆಂಗಳೂರು ಅಭಿವೃದ್ಧಿ ಮಂತ್ರಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ, ಬೆಂಗಳೂರು ನಗರದ ಆಡಳಿತ ಹಳ್ಳ ಹಿಡಿದಿದೆ. ಆಟವಾಡಲು ಪಾರ್ಕ್ಗೆ ಹೋದ ಮಕ್ಕಳು, ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋದವರು ಸುರಕ್ಷಿತವಾಗಿ ಮನೆಗೆ ಮರಳುವ ನಂಬಿಕೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯ ಎಲ್ಲ ಪಾರ್ಕ್ಗಳಲ್ಲಿರುವ ಮಕ್ಕಳ ಆಟದ ಉಪಕರಣಗಳು, ಜಿಮ್ ಉಪಕರಣಗಳು, ಆಸನಗಳು, ಗೇಟ್ಗಳನ್ನು ಕೂಡಲೇ ಸಮೀಕ್ಷೆ ನಡೆಸಿ, ದುರಸ್ತಿ ಅವಶ್ಯಕತೆ ಇರುವ ಭಾಗದಲ್ಲಿ ಕೂಡಲೇ ದುರಸ್ತಿ ಕಾರ್ಯ ಪ್ರಾರಂಭಿಸಬೇಕು ಎಂದು ಹೇಳಿದ್ದಾರೆ.
ದುರಾಡಳಿತದಿಂದ ಮಸಣವಾಗುತ್ತಿದೆ
ಕರ್ನಾಟಕದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಮಸಣವಾಗಿ ಬದಲಾಗುತ್ತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ನಿಯಂತ್ರಿಸುವವರು ಯಾರೆಂದೇ ತಿಳಿಯುತ್ತಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಆಡಳಿತದ ನಿರ್ಲಕ್ಷ್ಯದಿಂದ ಅಮಾಯಕ ಬಾಲಕನ ಪ್ರಾಣ ಪಕ್ಷಿಯೇ ಹಾರಿಹೋಗಿದೆ. ಸರ್ಕಾರದ ಬಳಿ ಇದಕ್ಕೆ ಉತ್ತರವಿದೆಯೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರ್ಕಾರ ಅಕ್ರಮಗಳಲ್ಲಿ ಮುಳುಗಿದೆ. ಸರ್ಕಾರದಲ್ಲಿ ಸಿಎಂನಿಂದ ಸಚಿವರು, ಶಾಸಕರುಗಳು ಅಕ್ರಮಗಳನ್ನು ಮುಚ್ಚಿಹಾಕುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. ರಾಜ್ಯದ ಜನರ ಜೀವದ ಬಗ್ಗೆ ಕಾಳಜಿಯೇ ಇಲ್ಲದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲೇಕೆ ಇರಬೇಕು ಎಂದು ಬಿಜೆಪಿ ಪ್ರಶ್ನೆ ಮಾಡಿದೆ.
ಘಟನೆಯ ಹಿನ್ನೆಲೆ ಏನು ?
ಬೆಂಗಳೂರಿನ ಮಲ್ಲೇಶ್ವರದ ಆಟದ ಮೈದಾನ ಕಬ್ಬಿಣದ ಗೇಟ್ 11 ವರ್ಷದ ಯುವಕನ ಮೇಲೆ ಬಿದ್ದಿದ್ದು. ಯುವಕ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಇಲ್ಲಿನ ಮಲ್ಲೇಶ್ವರದ ಬಿಬಿಎಂಪಿ ಆಟದ ಮೈದಾನದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾವನ್ನಪ್ಪಿದ ಯುವಕನನ್ನು ನಿರಂಜನ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಆಟವಾಡುವುದಕ್ಕೆ ಯುವಕ ಹೊರಗೆ ಹೋಗಿದ್ದು, ಮಲ್ಲೇಶ್ವರ ಆಟದ ಮೈದಾನದ ಬಳಿ ಬಂದಿದ್ದಾನೆ. ಆಟದ ಮೈದಾನದ ಗೇಟ್ ತೆಗೆಯುತ್ತಿದ್ದಂತೆಯೇ ಗೇಟ್ ಯುವಕನ ಮೇಲೆ ಬಿದ್ದಿದೆ.
ಇದರಿಂದ ಯುವಕನಿಗೆ ಗಂಭೀರವಾದ ಗಾಯಗಳಾಗಿವೆ. ಕಬ್ಬಿಣದ ಗೇಟ್ ತಲೆಯ ಮೇಲೆ ಬಿದ್ದು, ತೀವ್ರ ರಕ್ತಸ್ರಾವವಾಗಿದೆ. ಸ್ಥಳದಲ್ಲಿ ಇದ್ದವರು ಬಾಲಕನನ್ನು ಕೂಡಲೇ ಸಮೀಪದ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಯುವಕ 5ನೇ ತರಗತಿಯಲ್ಲಿ ಬಿಬಿಎಂಪಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ.












Click it and Unblock the Notifications