ಒತ್ತುವರಿದಾರರಿಗೆ ಬಿಗ್ ಶಾಕ್: ರಾಜಕಾಲುವೆ ಒತ್ತುವರಿ ತೆರವು ಸಂಬಂಧ ನಾಳೆ ಮಹತ್ವದ ಸಭೆ
ಬೆಂಗಳೂರು, ಜೂನ್ 12: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ಸೂಚನೆ ನೀಡಿದ ನಂತರ ಎಚ್ಚೆತ್ತಿರುವ ಬೆಂಗಳೂರು ಜಿಲ್ಲಾಡಳಿತ, ಒತ್ತುವರಿ ತೆರವು ಮಾಡಲು ಮುಂದಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಚರ್ಚೆ ನಡೆಸಲು, ಜೂನ್ 13ರಂದು ಮಹತ್ವದ ಸಭೆ ಕರೆಯಲಾಗಿದೆ.
ಈ ಸಭೆ ಬಗ್ಗೆ ಜಿಲ್ಲಾಧಿಕಾರಿ ದಯಾನಂದ ಅವರು ಟಿವಿ 9ಗೆ ಮಾಹಿತಿ ನೀಡಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮತ್ತು ಜಿಲ್ಲಾಧಿಕಾರಿ ದಯಾನಂದ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಸಭೆಯಲ್ಲಿ ಸರ್ವೆ ಅಧಿಕಾರಿಗಳು, ಬಿಬಿಎಂಪಿ ಎಸ್ಡಬ್ಲ್ಯುಡಿ ಇಂಜಿನಿಯರ್ ಗಳು, ಬೆಂಗಳೂರು ನಗರದ ತಹಶೀಲ್ದಾರ್ ಭಾಗವಹಿಸಲಿದ್ದಾರೆ. ರಾಜಕಾಲುವೆ ಒತ್ತುವರಿ ಸರ್ವೆ ಕೆಲಸ ಮುಗಿದಿದ್ದು, ಸದ್ಯದಲ್ಲೇ ಒತ್ತುವರಿಯನ್ನು ಗುರುತಿಸುವ ಕೆಲಸ ಶುರುವಾಗಲಿದೆ ಎಂದು ಹೇಳಿದ್ದಾರೆ.

ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಕೆ ಶಿವಕುಮಾರ್ ಇತ್ತೀಚೆಗೆ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುವ ಮೂಲಕ ವಿವಿಧ ಕಾಮಗಾರಿಗಳು, ಸಮಸ್ಯೆಗಳನ್ನು ಗುರುತಿಸಿದ್ದರು. ಇನ್ನೇನು ಮಳೆ ಶುರುವಾಗಲಿದ್ದು, ನಗರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲನೆ ಮಾಡಿದ್ದರು. ನಂತರ ಮಾತನಾಡಿದ್ದ ಅವರು, ಒಳಚರಂಡಿ, ರಾಜಕಾಲುವೆಗಳನ್ನು ವೀಕ್ಷಿಸಿದ್ದು, ಮಳೆಯಿಂದಾಗಿ ಆಗುವ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದರು.
ಮಳೆಯಿಂದಾಗಿ ತುಂಬಿದ್ದ ಅಂಡರ್ ಪಾಸ್
ಇನ್ನು ಇತ್ತೀಚೆಗೆ ತಾನೆ ನಗರದಲ್ಲಿ ಸುರಿದ ಮಳೆಯಿಂದಾಗಿ ಅಂಡರ್ ಪಾಸ್ನಲ್ಲಿ ನೀರು ನಿಂತು ಮಹಿಳೆಯೊಬ್ಬರು ಮೃತಪಟ್ಟಿದ್ದರು. ನಗರದ ಕೆಆರ್ ಸರ್ಕಲ್ ಬಳಿ ಇರುವ ಅಂಡರ್ ಪಾಸ್ನಲ್ಲಿ ನೀರು ತುಂಬಿ ಕಾರು ಮುಳುಗಡೆಯಾದ ಪರಿಣಾಮ ಆಂಧ್ರ ಮೂಲಕ ಮಹಿಳೆ ಮೃತಪಟ್ಟಿದ್ದರು. ನಂತರ ಎಚ್ಚೆತ್ತಿದ್ದ ಬಿಬಿಎಂಪಿ ಅಧಿಕಾರಿಗಳು ವಿವಿಧ ಅಂಡರ್ ಪಾಸ್ಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ಕ್ರಮ ವಹಿಸಿದ್ದರು.
ಸಿಎಂ ಸಿದ್ದರಾಮಯ್ಯ ಅವರು ಕೂಡ ಮಳೆಗಾಲದಲ್ಲಿ ಆಗುವ ತೊಂದರೆಗಳನ್ನು ತಪ್ಪಿಸುವಂತೆ ಸೂಚನೆ ನೀಡಿದ್ದರು. ಡಿಕೆ ಶಿವಕುಮಾರ್ ಬೆಂಗಳೂರು ಉಸ್ತುವಾರಿ ಸಚಿವರಾದ ಬಳಿಕ ನಗರದಲ್ಲಿ ಮಳೆಯಿಂದ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕಳೆದ ಬಾರಿ ಮಳೆಯಿಂದಾಗಿ ಅವಾಂತರ
ಕಳೆದ ವರ್ಷ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರಿನಲ್ಲಿ ಜಲ ಪ್ರವಾಹ ಉಂಟಾಗಿತ್ತು. ಹಲವು ಬಡಾವಣೆಗಳು, ಅಪಾರ್ಟ್ಮೆಂಟ್ಗಳಿಗೂ ನೀರು ನುಗ್ಗಿತ್ತು, ಹೊರ ವರ್ತುಲ ರಸ್ತೆಗಳಲ್ಲಿ ವಾರಗಟ್ಟಲೆ ನೀರು ನಿಂತು ಕೆರೆಗಳಂತಾಗಿದ್ದವು. ನಗರದಲ್ಲಿ ಈ ಅವಸ್ಥೆಗೆ ರಾಜಕಾಲುವೆ ಒತ್ತುವರಿಯೇ ಕಾರಣ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಎಚ್ಚೆತ್ತಿದ್ದ ಸರ್ಕಾರ, ರಾಜಕಾಲುವೆ ಒತ್ತುವರಿಗೆ ಸೂಚನೆ ನೀಡಿತ್ತು, ನಂತರ ರಾಜಕಾಲುವೆ ಮತ್ತು ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿತ್ತು, ಮಳೆಗಾಲದ ನಂತರ ತೆರವು ಕಾರ್ಯಾಚರಣೆ ನಿಂತಿತ್ತು.
ಈಗ ಮಳೆಗಾಲ ಆರಂಭವಾಗಲಿದ್ದು ಮೊದಲೇ ಎಚ್ಚೆತ್ತಿರುವ ಅಧಿಕಾರಿಗಳು ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಂದಾಗಿದ್ದಾರೆ. ರಾಜಧಾನಿಯಲ್ಲಿ ಮತ್ತೆ ಜೆಸಿಬಿ ಅಬ್ಬರಿಸಲಿದ್ದು, ಒತ್ತುವರಿದಾರರಿಗೆ ಶಾಕ್ ಕಾದಿದೆ.












Click it and Unblock the Notifications