ರವಿಗೆ ಹಳ್ಳಿಗೆ ಹೋಗಿ ಹಣ್ಣು ಬೆಳೆಯುವ ಕನಸು!
ಪ್ರತಿದಿನ ಬಸವನಗುಡಿ ಕ್ಷೇತ್ರದಲ್ಲಿ 4 ರಿಂದ 6 ಗಂಟೆ ಓಡಾಟ ನಡೆಸಿ ಜನರ ಕುಂದುಕೊರತೆ ಆಲಿಸುವ ರವಿ ಸುಬ್ರಮಣ್ಯ ಅವರು ಕಳೆದ 10 ವರ್ಷಗಳಿಂದ 'ಸಂಕಲ್ಪ' ಎಂಬ ಸಂಸ್ಥೆಯನ್ನು ಕಟ್ಟಿದ್ದು, ಅದರ ಮುಖಾಂತರ ಸಮಾಜಸೇವೆಯಲ್ಲೂ ತೊಡಗಿದ್ದಾರೆ. ಸಂಸ್ಥೆಯ ಮುಖಾಂತರ ಮಹಿಳೆಯರಿಗೆ, ಮಕ್ಕಳ ಅಭ್ಯುದಯಕ್ಕಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲಿ ಉಚಿತ ಪಾಠ ಹೇಳಿಕೊಡುವುದು, ಮಹಿಳೆಯರಿಗಾಗಿ ವಿಶೇಷ ವಸ್ತು ಪ್ರದರ್ಶನ ಮುಂತಾದವನ್ನು ನಡೆಸಲಾಗುತ್ತದೆ.
ಇದಲ್ಲದೆ, ಹದಿನೈದು ದಿವಸಗಳಿಗೊಮ್ಮೆ ರೆವೆನ್ಯೂ ಅದಾಲತ್ ನಡೆಸುವುದು, ಪ್ರತಿ ತಿಂಗಳ ಮೂರನೇ ಶನಿವಾರ 'ಅಭಯ' ಎಂಬ ನಿವಾಸಿಗಳ ಕ್ಷೇಮಾಭ್ಯುದಯ ಸಂಸ್ಥೆಯ ಸಹಯೋಗದೊಂದಿಗೆ ಜನರ ಕುಂದುಕೊರತೆ ಆಲಿಸುವ ಕಾರ್ಯಕ್ರಮ ಕೂಡ ರವಿ ಸುಬ್ರಮಣ್ಯ ಪಾಲಿಸಿಕೊಂಡು ಬರುತ್ತಿದ್ದಾರೆ.
ಮನೆಗಳಿಂದ ಕಸಗಳನ್ನು ಸಂಗ್ರಹಿಸಲು ಗರ್ಭಿಣಿಯನ್ನು, ಅಶಕ್ತ ಮಹಿಳೆಯರನ್ನು ಬಿಬಿಎಂಪಿ ನಿಯೋಜಿಸಿದ್ದಕ್ಕೆ ಭಾರೀ ಬೇಸರ ವ್ಯಕ್ತಪಡಿಸುತ್ತಾರೆ ರವಿ ಸುಬ್ರಮಣ್ಯ. ಮಾನವೀಯತೆ ಇರುವವರು ಯಾರೂ ಇಂಥ ಕೆಲಸ ಮಾಡುವುದಿಲ್ಲ. ಮನೆಗಳಿಂದ ಕಸ ಸಂಗ್ರಹಿಸಲು ಟಿಪ್ಪರ್ ಅಥವಾ ಆಟೋಗಳನ್ನು ಬಳಸಬೇಕು. ನಂತರ ದೊಡ್ಡ ಲಾರಿಗೆ ವರ್ಗಾಯಿಸಬೇಕು. ಅಲ್ಲದೆ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ಕನ್ನು ಸಂಪೂರ್ಣವಾಗಿ ಬಸವನಗುಡಿಯಲ್ಲಿ ನಿಷೇಧಿಸಬೇಕು ಎಂಬುದು ರವಿಯವರ ಸಲಹೆ.
ಇಷ್ಟೆಲ್ಲ ಚಟುವಟಿಕೆಗಳಲ್ಲಿ ತೊಡಗಿರುತ್ತೀರಲ್ಲ, ಬಿಡುವಿನ ಸಮಯಕ್ಕಾದರೂ ಸಮಯ ಮೀಸಲಿಡುತ್ತೀರಾ ಅಂತ ಮಾನವ ಸಂಪನ್ಮೂಲ ವಿಷಯದಲ್ಲಿ ಎಂಬಿಎ ಪದವಿ ಪಡೆದಿರುವ ರವಿಯವರಿಗೆ ಕೇಳಿದರೆ, ಅಯ್ಯೋ ಅದಕ್ಕೆಲ್ಲ ಎಲ್ಲಿ ಸಮಯ, ಬಿಡುವಿಲ್ಲದ ರಾಜಕೀಯ ಜೀವನದಲ್ಲಿ ನಾನೇ ಕಳೆದುಹೋಗಿದ್ದೇನೆ ಎಂದು ನಗುತ್ತಾರೆ ರವಿ.
ಅಂದ ಹಾಗೆ ನಿಮಗೆ ಗೊತ್ತಿರಲಿ, ರವಿ ಸುಬ್ರಮಣ್ಯ ಅವರು ವೀಣಾ ಪಾರಂಗತರು. ಅಲ್ಲದೆ, ವೇದ (ಋಗ್ವೇದ) ಪಠಿಸುವ ಪರಿಪಾಠವೂ ಅವರಿಗಿದೆ. ಸಂಪೂರ್ಣವಾಗಿ ರಾಜಕೀಯದಲ್ಲಿ ಅವರು ಕಳೆದುಹೋಗಿದ್ದರೂ, ಮನದಲ್ಲೆಲ್ಲೋ ಬಿತ್ತನೆ ಮಾಡುತ್ತ ರೈತನಾಗುವ ಕನಸಿನ ಬೀಜವನ್ನು ಬಿತ್ತುತ್ತಿದ್ದಾರೆ. ಅಂದಹಾಗೆ, ಅವರ ಪಿತ್ರಾರ್ಜಿತ ಆಸ್ತಿ ಚಿಕ್ಕಮಗಳೂರಿನಲ್ಲಿದೆ. ಅಲ್ಲಿ, ಕಾಫಿ, ಮಾವು, ನಿಂಬೆ, ಸಪೋಟ, ಸೀಬೆ ಮುಂತಾದ ಹಣ್ಣಿನ ತೋಟವನ್ನು ಅಭಿವೃದ್ಧಿಪಡಿಸುವ ಚಿಂತೆಯಲ್ಲಿದ್ದಾರೆ. [ಫೇಸ್ ಬುಕ್ | ಟ್ವಿಟ್ಟರ್]