ಬಸವನಗುಡಿ ಹೆರಿಟೇಜ್ ಕಾರಿಡಾರ್, ಏನಿದು?
ಮಲ್ಲೇಶ್ವರದಂತೆ ಬಸವನಗುಡಿ ಕೂಡ ಬೆಂಗಳೂರಿನ ಅತ್ಯಂತ ಪುರಾತನ ಪ್ರದೇಶ. ಜಯನಗರ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಬಸವನಗುಡಿ, ಬೆಂಗಳೂರಿನ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿ. ಮಾಸ್ತಿ, ನಿಸಾರ್, ಅನಕೃ, ಲಂಕೇಶ್, ಡಿವಿಜಿಯಂಥ ಘಟಾನುಘಟಿ ಲೇಖಕರು ಜೀವಿಸಿದ ಪ್ರದೇಶ ಒಂದೆಡೆಯಾದರೆ, ವೆಸ್ಟ್ ಆಂಜನೇಯ, ದೊಡ್ಡ ಗಣೇಶ, ಪರಿಷೆ ಬಸವಣ್ಣ, ರಾಮಾಂಜನೇಯ, 700 ವರ್ಷ ಹಳೆಯ ಗವಿಗಂಗಾಧರೇಶ್ವರ, ಕುಮಾರಸ್ವಾಮಿ ಮುಂತಾದ ದೇವರುಗಳಿಗೆ ಆಲಯವಾಗಿದೆ ಬಸವನಗುಡಿ. ಇನ್ನು ಬಂಡಿಮಹಾಕಾಳಿ, ಗಂಗಮ್ಮನಂಥ ಗುಡಿಗಳು ಲೆಕ್ಕವಿಲ್ಲದಷ್ಟು ಗಲ್ಲಿಗಲ್ಲಿಗಳಲ್ಲಿ ಸಿಗುತ್ತವೆ.
ಹೀಗಾಗಿ, ಬಸವನಗುಡಿಯನ್ನು ಹೆರಿಟೇಜ್ ಕಾರಿಡಾರ್ ಮಾಡಬೇಕೆಂಬುದು ರವಿ ಸುಬ್ರಮಣ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆ. ಐಟಿಬಿಟಿಗಾಗಿ ಬೆಂಗಳೂರು ಹೆಸರಾದಂತೆ, ವೆಸ್ಟ್ ಆಂಜನೇಯನಿಂದ ಹಿಡಿದು 44ರಿಂದ 5 ಎಕರೆಗೆ ಇಳಿದಿರುವ ಕೆಂಪಾಂಬುದಿ ಕೆರೆಯವರೆಗೆ ಬಸವನಗುಡಿ ಕ್ಷೇತ್ರವನ್ನು ಹೆರಿಟೇಜ್ ಕಾರಿಡಾರ್ ಅನ್ನಾಗಿ ಮಾಡಿ ಜನಪ್ರಿಯಗೊಳಿಸಬೇಕು ಎಂಬುದು ಅವರು ಕನಸು. ಇಂಥ ಐತಿಹಾಸಿಕ ಸ್ಥಳಗಳನ್ನು ಬ್ಯೂಗಲ್ ರಾಕ್ ನಿಂದ ಹಿಡಿದು ಎಲ್ಲ ಪ್ರದೇಶಗಳನ್ನು ಪ್ರವಾಸಿಗರು ಸುತ್ತಲು ಅನುವಾಗುವಂತೆ ವ್ಯವಸ್ಥೆ ಮಾಡುವ ಯೋಜನೆಗೆ ರವಿ ಮುಂದಾಗಿದ್ದಾರೆ.
ಐಟಿಬಿಟಿ ಸಿಟಿಯಾದ ಬೆಂಗಳೂರಿಗೆ ವಿದೇಶಿಯರು ಮತ್ತು ದೇಶದ ಎಲ್ಲಕಡೆಯಿಂದ ಜನರು ಬರುತ್ತಾರೆ. ಅವರಿಗೆ ಬೆಂಗಳೂರು ಅಂದರೆ ಕಮರ್ಶಿಯಲ್ ಪ್ರದೇಶದ ಪರಿಚಯ ಮಾಡುವಂಥದ್ದಲ್ಲ. ಅವರಿಗೆ ನಮ್ಮ ಸಾಂಸ್ಕೃತಿಕ, ಧಾರ್ಮಿಕ ಬೆಂಗಳೂರಿನ ಪರಿಚಯ ಕೂಡ ಮಾಡಿಕೊಡಬೇಕು. ಅದಕ್ಕಾಗಿ ಬಸವನಗುಡಿಯನ್ನು ಹೆರಿಟೇಜ್ ಕಾರಿಡಾರನ್ನಾಗಿ ಪರಿವರ್ತಿಸಬೇಕೆಂಬ ಯೋಜನೆ ಹಾಕಿಕೊಳ್ಳಲಾಗಿದೆ.
ಬಿಬಿಎಂಪಿ ಆಯುಕ್ತರಾಗಿದ್ದಾಗ ಭರತ್ ಲಾಲ್ ಮೀನಾ ಅವರು ಕೂಡ ಈ ಕನಸಿಗೆ ಚಾಲನೆ ನೀಡಿದ್ದರು. ಅದನ್ನು ಸಾಕಾರಗೊಳಿಸುವ ಕೆಲಸಕ್ಕೆ ರವಿ ಸುಬ್ರಮಣ್ಯ ಮುಂದಾಗಿದ್ದಾರೆ. ಅಲ್ಲದೆ, ಕಾರ್ತೀಕ ಮಾಸದ ಕೊನೆಯ ಸೋಮವಾರ ನಡೆಯುವ ಐತಿಹಾಸಿಕ ಕಡ್ಲೆಕಾಯಿ ಪರಿಷೆಗೆ ಹೊಸ ರೂಪುರೇಷೆ ನೀಡುವ ಕುರಿತು ಕೂಡ ಚಿಂತನೆ ನಡೆದಿದೆ. ಬೆಂಗಳೂರು ದಕ್ಷಿಣ ಲೋಕಸಭೆ ಸಂಸದ ಅನಂತಕುಮಾರ್ ಅವರು ಕೂಡ ಕಡ್ಲೆಕಾಯಿ ಪರಿಷೆಗೆ ಅಂತಾರಾಷ್ಟ್ರೀಯ ಮಾನ್ಯತೆ ನೀಡುವ ಕುರಿತು ಮಾತನಾಡಿದ್ದಾರೆ. ಅನಂತ್ ಕುಮಾರ್ ಆಹ್ವಾನದ ಮೇರೆಗೆ ಸದ್ಯದಲ್ಲೆ ದೆಹಲಿಗೆ ಹೋಗುತ್ತಿದ್ದೇನೆ. ಹೆರಿಟೇಜ್ ಕಾರಿಡಾರಿಗೆ ಕೇಂದ್ರದ ಬೆಂಬಲ ಮತ್ತು ಸಹಕಾರ ಕುರಿತು ಚರ್ಚಿಸುವವರಿದ್ದೇವೆ.