ಬಿಬಿಎಂಪಿ ಪಾಪಗಳನ್ನೆಲ್ಲ ತೊಳೆಯಬೇಕಿದೆ : ರವಿ
ಬಿಬಿಎಂಪಿಯಲ್ಲಿರುವ ಸದ್ಯದ ವ್ಯವಸ್ಥೆ, ಭ್ರಷ್ಟಾಚಾರ, ಶಾಸಕನಿಗೆ ಏನೂ ಮಾಡಲಾಗದಂಥ ಸ್ಥಿತಿ ನೋಡಿ ಬೇಸತ್ತು ಹೋಗಿರುವ ರವಿ ಸುಬ್ರಮಣ್ಯ ಅವರು, ಆಡಳಿತ ಯಂತ್ರವನ್ನು ಸರಿದಾರಿಗೆ ತರಲು ಇಡೀ ಬಿಬಿಎಂಪಿಯನ್ನು ಬೇಲೌಟ್ ಮಾಡಿ ಹೊಸ ತಂಡವನ್ನು ಕಟ್ಟಬೇಕು, ಭ್ರಷ್ಟತೆ ತಡೆಯಲು ಹೊಸ ಕಾನೂನನ್ನು ರೂಪಿಸಬೇಕು, ಎಲ್ಲ 28 ಶಾಸಕರಿಗೆ ಅಭಿವೃದ್ಧಿ ಕೈಗೊಳ್ಳಲು ಮುಕ್ತಹಸ್ತ ಕೊಡಬೇಕು ಎಂದು ಹೇಳಿದರು.
ವಸ್ತುಸ್ಥಿತಿ ಏನೆಂದರೆ, ಬೆಂಗಳೂರಿನ ಸಮಸ್ಯೆಗಳು ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆಯೇ ಆಗುವುದಿಲ್ಲ. ಅಕ್ಷರಶಃ ಶಾಸಕರ ಮಾತಿಗೆ ಕಿಮ್ಮತ್ತಿಲ್ಲ. ಹೀಗಾಗಿ, ನವೆಂಬರ್ 25ರಂದು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಈ ಕುರಿತು ಮನವಿ ಸಲ್ಲಿಸಿದ್ದೇನೆ. ಡಿಸೆಂಬರ್ 9ರಿಂದ ಬೆಳಗಾವಿ ಸುವರ್ಣ ವಿಕಾಸಸೌಧದಲ್ಲಿ ಆರಂಭವಾಗುವ ಹನ್ನೆರಡು ದಿನಗಳ ಚಳಿಗಾಲದ ಅಧಿವೇಶನದಲ್ಲಿ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಚರ್ಚೆಯಾಗುವ ಸಂಭವವಿದೆ ಎಂದರು.

ಇಡೀ ಬೆಂಗಳೂರಿನ ಸಮಸ್ಯೆಯ ಮೂಲ ಅಡಗಿರುವುದೇ ಬಿಬಿಎಂಪಿಯಲ್ಲಿ. ಬಿಬಿಎಂಪಿಗೆ ಎರಡೂವರೆ ಸಾವಿರ ಕೋಟಿ ಆದಾಯವಿರುವಾಗ ಒಂಬತ್ತು ಸಾವಿರ ಕೋಟಿ ರು. ಬಜೆಟ್ ಮಂಡಿಸುತ್ತದೆ. ಅಭಿವೃದ್ಧಿಗೆ ಎಲ್ಲಿಂದ ಬಂಡವಾಳ ತರುತ್ತದೆ? ಇಡೀ ವ್ಯವಸ್ಥೆಯಲ್ಲಿ ಗಬ್ಬುವಾಸನೆ ತುಂಬಿಕೊಂಡಿದೆ, ಉಸಿರುಗಟ್ಟುವ ವಾತಾವರಣ ಮನೆಮಾಡಿದೆ. ಬೆಂಗಳೂರಿನ ಅಭಿವೃದ್ಧಿ ಬಿಬಿಎಂಪಿಯ ಸ್ಥಾಯಿ ಸಮಿತಿಯ ಹಿಡಿತದಲ್ಲಿದೆ. ಬೆಂಗಳೂರಿನ 198 ವಾರ್ಡುಗಳ ಪ್ರತಿನಿಧಿಗಳ ಜೇಬಿನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.
ಪರಿಸ್ಥಿತಿ ಹೀಗಿರುವಾಗ, ಗೃಹ ನಿರ್ಮಾಣ ಅಕ್ರಮ, ನಕಲಿ ಪ್ರಮಾಣಪತ್ರಗಳ ಹಾವಳಿ, ಆಸ್ತಿ ತೆರಿಗೆ ಅಕ್ರಮಗಳು ಬೆಂಗಳೂರನ್ನು ಅಭಿವೃದ್ಧಿ ಪಥದಿಂದ ಹಿಂದಕ್ಕೆ ಎಳೆಯುತ್ತಿವೆ. ಇದು ಯಾವ ಸ್ಥಿತಿ ತಲುಪಿದೆಯೆಂದರೆ, 'ಮಾಮೂಲು' ಕೊಡದಿದ್ದರೆ ಇಲ್ಲಿ ಯಾವ ಕೆಲಸವೂ ನಡೆಯುವುದಿಲ್ಲ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಭ್ರಷ್ಟಾಚಾರ ತಡೆಯಲು ಸಹಕರಿಸಬೇಕು. ಆದರೆ, ಅದಾಗುತ್ತಿಲ್ಲ, ಇದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದು ಶಾಸಕರೇ ಬೇಸರದಿಂದ ತಲೆ ಅಲ್ಲಾಡಿಸಿದರು.
ಮತ್ತೊಂದು ಸಂಗತಿಯೆಂದರೆ, ಮೂರು ಬಾರಿ ಟೆಂಡರ್ ಕರೆದರೂ ಬಿಬಿಎಂಪಿಯ ಯಾವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕಾಂಟ್ರಾಕ್ಟರುಗಳು ಮುಂದೆ ಬರುತ್ತಿಲ್ಲ. ಮಾರಾಟ ತೆರಿಗೆ, ಆಸ್ತಿ ತೆರಿಗೆ ಮತ್ತಿತರ ಹಾಳುಮೂಳು ತೆರಿಗೆಗಳನ್ನು ಕಟ್ಟಿ ಲಾಭ ಮಾಡಿಕೊಳ್ಳಲು ಯಾರು ತಾನೆ ಮುಂದೆ ಬರುತ್ತಾನೆ ಎಂದು ರವಿ ಪ್ರಶ್ನಿಸುತ್ತಾರೆ. ಕಾಮಗಾರಿ ಪೂರ್ತಿಗೊಳಿಸಿದ್ದಕ್ಕೆ ಹಣ ಕೂಡ ಸರಿಯಾಗಿ ಕಾಂಟ್ರಾಕ್ಟರುಗಳಿಗೆ ಸಂದಾಯವಾಗುತ್ತಿಲ್ಲ ಎಂದು ಅವರು ಸಮಸ್ಯೆಯ ಗಂಟನ್ನು ಬಿಚ್ಚಿಟ್ಟರು.












Click it and Unblock the Notifications