ಮಾ. 15, 16ರಂದು ಮುಷ್ಕರ; ಬ್ಯಾಂಕ್ ವಹಿವಾಟು ಬಂದ್
ಬೆಂಗಳೂರು, ಮಾರ್ಚ್ 04: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ಗಳ ಖಾಸಗೀಕರಣವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಎರಡು ದಿನ ಬ್ಯಾಂಕ್ ನೌಕರರು ಮುಷ್ಕರ ನಡೆಸಲಿದ್ದಾರೆ. 9 ಬ್ಯಾಂಕ್ ಯೂನಿಯನ್ಗಳ ಒಕ್ಕೂಟ ಮುಷ್ಕರಕ್ಕೆ ಕರೆ ನೀಡಿದೆ.
ಗುರುವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬ್ಯಾಂಕ್ ಯೂನಿಯನ್ಗಳ ಸಂಯುಕ್ತ ವೇದಿಕೆ ಕರ್ನಾಟಕದ ರಾಜ್ಯ ಸಂಚಾಲಕ ಎಸ್. ಕೆ. ಶ್ರೀನಿವಾಸ್ ಈ ಕುರಿತು ಮಾಹಿತಿ ನೀಡಿದರು.
"ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ (ಎಐಬಿಇಎ) ಸೇರಿದಂತೆ 9 ಬ್ಯಾಂಕ್ ಯೂನಿಯನ್ಗಳ ಒಕ್ಕೂಟ ಈ ಮುಷ್ಕರಕ್ಕೆ ಕರೆ ನೀಡಿದೆ. ಮಾರ್ಚ್ 15 ಮತ್ತು 16ರಂದು ಮುಷ್ಕರ ನಡೆಯಲಿದೆ" ಎಂದು ಹೇಳಿದರು.

"ಎರಡು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ" ಎಂದು ವಿವರಣೆ ನೀಡಿದರು.
"ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ನಲ್ಲಿ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಭಾಗವಾಗಿ ಸಾರ್ವಜನಿಕ ರಂಗದ ಎರಡು ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವುದಾಗಿ ಘೋಷಣೆ ಮಾಡಿರುವುದು ಸೂಕ್ತವಾದ ಕ್ರಮವಲ್ಲ" ಎಂದು ದೂರಿದರು.
"ಈಗಾಗಲೇ ಸರ್ಕಾರ ಐಡಿಬಿಐ ಬ್ಯಾಂಕ್ನಲ್ಲಿದ್ದ ತನ್ನ ಷೇರುಗಳನ್ನು ಎಲ್ಐಸಿಗೆ 2019ರಲ್ಲಿಯೇ ಮಾರಾಟ ಮಾಡಿದೆ. 14 ಸಾರ್ವಜನಿಕ ರಂಗದ ಬ್ಯಾಂಕ್ಗಳನ್ನು ವಿಲೀನಗೊಳಿಸಿದೆ. ಆದರೂ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವ ತೀರ್ಮಾನ ಖಂಡನೀಯ" ಎಂದು ಎಸ್. ಕೆ. ಶ್ರೀನಿವಾಸ್ ತಿಳಿಸಿದರು.
"ಆಕ್ರಮಣಕಾರಿ ಬಂಡವಾಳ ಹಿಂತೆಗೆತ, ಸಾರ್ವಜನಿಕ ರಂಗದ ಸಂಸ್ಥೆಗಳ ಮಾರಾಟ ಹೀಗೆ ವಿವಿಧ ತೀರ್ಮಾನಗಳನ್ನು ಖಂಡಿಸಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಬ್ಯಾಂಕ್ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ" ಎಂದರು.












Click it and Unblock the Notifications