ಕೊವಿಡ್-19 ನಿಯಂತ್ರಣದಲ್ಲಿ ಬೆಂಗಳೂರೇ ಸೈ, ವಾರಿಯರ್ಸ್ ಗೆ ಜೈ!
ಬೆಂಗಳೂರು, ಮೇ.26: ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವಲ್ಲಿ ಭಾರತದ ನಾಲ್ಕು ನಗರಗಳು ಭೇಷ್ ಎನಿಸಿಕೊಂಡಿವೆ. ಈ ಪಟ್ಟಿಯಲ್ಲಿ ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು ಕೂಡಾ ಸ್ಥಾನ ಪಡೆದುಕೊಂಡಿದೆ.
ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಬೆಂಗಳೂರು ಸೈ ಎನಿಸಿಕೊಳ್ಳುವಂತೆ ಮಾಡಿದ ಕೊರೊನಾ ವಾರಿಯರ್ಸ್ ಗೆ ಕಂದಾಯ ಸಚಿವ ಆರ್.ಅಶೋಕ್ ತುಂಬು ಹೃದಯದ ಧನ್ಯವಾದವನ್ನು ಅರ್ಪಿಸಿದ್ದಾರೆ.
ಕೋವಿಡ್-19 ಸೋಂಕು ಪ್ರಪಂಚದಾದ್ಯಂತ ಹರಡಿ ಜನಜೀವನ ಅಸ್ತವ್ಯಸ್ತವಾಗಿಸಿದೆ. ಈ ಮಹಾಮಾರಿ ನಿಯಂತ್ರಣದಲ್ಲಿ ಬೆಂಗಳೂರು ದೇಶದಲ್ಲೇ ನಂ.1 ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ. ಈ ಹೋರಾಟದಲ್ಲಿ ಶ್ರಮಿಸುತ್ತಿರುವ ವೈದ್ಯರು-ವೈದ್ಯಕೀಯ ಸಿಬ್ಬಂದಿ, ಪೋಲೀಸರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಹಾಗೂ ಇತರರಿಗೆ ನಮ್ಮ ತುಂಬು ಹೃದಯದ ಧನ್ಯವಾದಗಳು ಎಂದು ಸಚಿವ ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.

ಕೊರೊನಾ ವೈರಸ್ ನಿಯಂತ್ರಣದಲ್ಲಿ ಬೆಂಗಳೂರು ಬೆಸ್ಟ್:
ಭಾರತದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ನಾಲ್ಕು ನಗರಗಳನ್ನು ಕೇಂದ್ರ ಸರ್ಕಾರವು ಗುರುತಿಸಿದೆ. ಈ ಪಟ್ಟಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ತಮಿಳುನಾಡಿನ ಚೆನ್ನೈ, ರಾಜಸ್ಥಾನದ ಜೈಪುರ್ ಹಾಗೂ ಮಧ್ಯಪ್ರದೇಶದ ಇಂದೋರ್ ನಗರಗಳು ಕೂಡ ಕೊವಿಡ್-19 ನಿಯಂತ್ರಿಸುವಲ್ಲಿ ಸೈ ಎನಿಸಿಕೊಂಡಿವೆ. ಇನ್ನು, ಕರ್ನಾಟಕದಲ್ಲಿ ಪತ್ತೆಯಾಗಿರುವ ಬಹುತೇಕ ಸೋಂಕಿತ ಪ್ರಕರಣಗಳು ನೆರೆ ರಾಜ್ಯ ಅಥವಾ ಸೋಂಕಿತ ಪ್ರದೇಶಗಳಿಂದ ಆಗಮಿಸಿದ ವ್ಯಕ್ತಿಗಳಲ್ಲಿಯೇ ಕಾಣಿಸಿಕೊಂಡಿದೆ.












Click it and Unblock the Notifications