2ನೇ ಪ್ರಶ್ನೋತ್ತರ ಮುಗಿಯುವ ಹೊತ್ತಿಗೆ ಗದ್ದಲ ಶುರು
ಬಿಪ್ಯಾಕ್ 2ನೇ ಪ್ರಶ್ನೆ : ಬೆಂಗಳೂರು ಮತ್ತು ಭಾರತಕ್ಕೆ ಸಂಬಂಧಿಸಿದಂತೆ ಯಾವ್ಯಾವ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಚರ್ಚಿಸುತ್ತೀರಿ?
ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ನೀಡಿದ ಉತ್ತರಗಳು
* ನಗರಗಳಿಗೆ ಬಂಡವಾಳದ ಹರಿವು : ಎಲ್ಲ ನಗರಗಳ ಸಂಸದರು ಒಂದು ತಂಡ ಕಟ್ಟಿ ನಗರಾಭಿವೃದ್ಧಿ ಯೋಜನೆ ರೂಪಿಸಬೇಕು. ನೀರು ಸರಬರಾಜು, ತ್ಯಾಜ್ಯ ವಿಲೇವಾರಿ, ಸಂಚಾರ ವ್ಯವಸ್ಥೆ ಸುಧಾರಿಸಬೇಕು.
* ಭ್ರಷ್ಟಾಚಾರದ ವಿರುದ್ಧ ಹೋರಾಟ : ಜನರಿಗೆ ಸೇರಬೇಕಾದ ಹಣ ನೇರವಾಗಿ ಬ್ಯಾಂಕಿಗೆ ಜಮಾ ಆಗುವಂತೆ ಆಗಬೇಕು. ಇದನ್ನೆಲ್ಲ ಅತ್ಯಂತ ವ್ಯವಸ್ಥಿತವಾಗಿ ಮಾಡುವ ಜವಾಬ್ದಾರಿ ನಾನು ಹೊರಲು ಸಿದ್ಧನಿದ್ದೇನೆ.
* ಉದ್ಯೋಗ ಸೃಷ್ಟಿ : ಹತ್ತು ಕೋಟಿ ಜನರಿಗೆ ಉದ್ಯೋಗ ದೊರಕುವಂತಾಗಬೇಕು. ಇದಕ್ಕಾಗಿ ಕಂಪನಿ ಮತ್ತು ಕಾರ್ಮಿಕ ಕಾನೂನು ಸುಧಾರಣೆ ಮಾಡಬೇಕಾದ ಅಗತ್ಯವಿದೆ.
ಜೆಡಿಎಸ್ ಅಭ್ಯರ್ಥಿ ರುತ್ ಮನೋರಮಾ ನೀಡಿದ ಉತ್ತರಗಳು
* ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ದೇಶದಲ್ಲಿ ಶೇ.50ರಷ್ಟು ಮಹಿಳೆಯರಿದ್ದರೂ ಎಲ್ಲ ಸ್ತರಗಳಲ್ಲಿ ಅಷ್ಟು ಮೀಸಲಾತಿ ಸಿಗುತ್ತಿಲ್ಲ. ಇದು ಎಲ್ಲ ಮಹಿಳಾ ನಾಗರಿಕರ ಹಕ್ಕು. ಇನ್ನು ಹದಿನೈದು ವರ್ಷಗಳಲ್ಲಿ ಇದು ಜಾರಿಯಾಗುವಂತೆ ನೋಡಿಕೊಳ್ಳುತ್ತೇನೆ.
ಆಮ್ ಆದ್ಮಿ ಪಕ್ಷದ ನೀನಾ ನಾಯಕ್ ನೀಡಿದ ಉತ್ತರಗಳು
* ಆಮ್ ಆದ್ಮಿ ಪಕ್ಷದ ಮೂಲ ಹೋರಾಟ ಜನ ಲೋಕಪಾಲ್ ಮಸೂದೆ ಮಂಡನೆಗಾಗಿ. ಕೇಂದ್ರ ಜಾರಿ ಮಾಡಿದ ಲೋಕಪಾಲ್ ಮಸೂದೆ ಆಪ್ ಎಂದೂ ಒಪ್ಪಿಲ್ಲ.
* ನಗರಕ್ಕೆ ಸಾಕಷ್ಟು ಬಂಡವಾಳ ಬರುತ್ತಿದ್ದರೂ ಅಸಂಘಟಿತ ಉದ್ಯೋಗಿಗಳೇ ಜಾಸ್ತಿ ಇದ್ದಾರೆ ಮತ್ತು ಅವರಿಗೆ ಸವಲತ್ತು ಸಿಗುತ್ತಿಲ್ಲ. ಶೇ.90ರಷ್ಟು ಉದ್ಯೋಗಿಗಳಿಗೆ ನೈಪುಣ್ಯತೆಯೇ ಇಲ್ಲ. 10 ಕ್ಲಾಸ್ ಫೇಲ್ ಆದವನ ಜೀವನಮಟ್ಟವೂ ಸಾಫ್ಟ್ ವೇರ್ ಇಂಜಿನಿಯರ್ ನಂತೆ ಸುಧಾರಿಸಬೇಕು.
* ಮಕ್ಕಳಿಗೆ ಸರಿಯಾಗ ಶಿಕ್ಷಣ ಸಿಗುತ್ತಿಲ್ಲ. ಕೇಂದ್ರೀಯ ವಿದ್ಯಾಲಯದ ಮಾದರಿಯಲ್ಲಿ ಎಲ್ಲ ಮಕ್ಕಳಿಗೂ ಉತ್ತರ ದರ್ಜೆಯ ಶಿಕ್ಷಣ ದೊರಕಬೇಕು. ಮಕ್ಕಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ.
ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ನೀಡಿದ ಉತ್ತರಗಳು
* ಭಾರತ ಇಂದು ಆರ್ಥಿಕ, ರಕ್ಷಣೆ ಮತ್ತು ಆಡಳಿತ ಸಂಕಟ ಎದುರಿಸುತ್ತಿದೆ. ವಾಜಪೇಯಿ ಕಾಲದಲ್ಲಿ ಭಾರದ ಜಿಡಿಪಿ ಶೇ.8.4ರಷ್ಟಿತ್ತು, ಮನಮೋಹನ್ ಕಾಲದಲ್ಲಿ ಅದು ಶೇ.4.8ಕ್ಕೆ ಇಳಿದಿದೆ. ಬೆಲೆ ಏರಿಕೆಯಿಂದಾಗಿ ದೇಶದ ಸಂಕಷ್ಟದಲ್ಲಿದೆ. ದೇಶಕ್ಕೆ ಮನಮೋಹನ ಸಿಂಗ್ ಸರಕಾರದ ಕೊಡುಗೆ ಸೊನ್ನೆ. (ಸಿಂಗ್ ಬಗ್ಗೆ ಪ್ರಸ್ತಾಪವಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು.)
* ಕಳೆದ ನಾಲ್ಕು ವರ್ಷದಲ್ಲಿ 3 ಬಾರಿ ಪಾಕಿಸ್ತಾನ ಲೈನ್ ಆಫ್ ಕಂಟ್ರೋಲ್ ಉಲ್ಲಂಘನೆ ಮಾಡಿದೆ. ಬಾಂಗ್ಲಾದೇಶದ ಉಗ್ರರು ಭಾರತದೊಳಗೆ ನುಸುಳಿ ಬರುತ್ತಿದ್ದಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಪಾಕ್ ಮತ್ತು ಬಾಂಗ್ಲಾ ಗಡಿಯನ್ನು ಮುಚ್ಚಲಾಗುವುದು.
* (ಉಳಿದ ಅಭ್ಯರ್ಥಿಗಳು ಹೊರಟ ನಂತರ) ಭಾರತ ಬೇರೆಯಲ್ಲ ಬೆಂಗಳೂರು ಬೇರೆಯಲ್ಲ. ದೇಶದ ಆರ್ಥಿಕ ಪರಿಸ್ಥಿತಿ ಮತ್ತು ರಕ್ಷಣಾ ವ್ಯವಸ್ಥೆ ಹದಗೆಟ್ಟರೆ ಬೆಂಗಳೂರಿಗೂ ಅದು ತಟ್ಟುತ್ತದೆ. ಬೆಂಗಳೂರಿಗೆ ಏನೂ ಆಗುವುದಿಲ್ಲ ಎನ್ನುವುದು ಮೂರ್ಖತನದ ಪರಮಾವಧಿ. ಆದ್ದರಿಂದ ದೇಶದ ರಕ್ಷಣೆ ಮತ್ತು ಆರ್ಥಿಕ ಪರಿಸ್ಥಿತಿ ಬಗ್ಗೆ ಪ್ರಸ್ತಾಪಿಸಿದೆ. ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಅರ್ಥವಾಗಲಿಲ್ಲ.