ಬೆಂಗಳೂರಿನಲ್ಲಿ ಆಟೋಗಳಿಗೆ ಪ್ರತ್ಯೇಕ ಪಥ
ಬೆಂಗಳೂರು, ಅ.7 : ಬೆಂಗಳೂರಿನಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಆಟೋಗಳಿಗೆ ಪ್ರತ್ಯೇಕ ಪಥವನ್ನು ರಚಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಪ್ರಾಯೋಗಿಕವಾಗಿ ಕಸ್ತೂರಬಾ ರಸ್ತೆಯಲ್ಲಿ ಪ್ರತ್ಯೇಕ ಮಾರ್ಗ ಮಾಡಲಾಗಿದ್ದು, ಇದನ್ನು ಆಟೋ ಚಾಲಕರು ಉಲ್ಲಂಘಿಸಿದರೆ ದಂಡ ವಿಧಿಸಲು ಪೊಲೀಸರು ಸಜ್ಜಾಗಿದ್ದಾರೆ.
ಸೋಮವಾರದಿಂದ ಆಟೋಗಳಿಗೆ ಪ್ರತ್ಯೇಕ ಮಾರ್ಗ ನೀಡುವ ಯೋಜನೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಕಸ್ತೂರಬಾ ರಸ್ತೆಯಲ್ಲಿ ಹಡ್ಸನ್ ವೃತ್ತದಿಂದ ವಿಠಲ್ ಮಲ್ಯ ರಸ್ತೆ ಮತ್ತು ರಿಚ್ಮಂಡ್ ವೃತ್ತದ ಕಡೆಗೆ ಹೋಗುವ ಆಟೋಗಳು ರಸ್ತೆಯ ಬಲ ಪಥದಲ್ಲಿ ಚಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ನಾಮಫಲಕಗಳನ್ನು ಅಳವಡಿಸಲಾಗಿದೆ.

ಹಾಗೆಯೇ ಹಡ್ಸನ್ ವೃತ್ತದಿಂದ ಸಿದ್ದಲಿಂಗಯ್ಯ ವೃತ್ತ, ಕ್ವೀನ್ಸ್ ವೃತ್ತ, ಎಂ.ಜಿ.ರಸ್ತೆ, ಶಿವಾಜಿನಗರ ಕಡೆಗೆ ಹೋಗುವ ಆಟೋಗಳಿಗೆ ರಸ್ತೆಯ ಎಡ ಪಥದಲ್ಲಿ ಜಾಗ ಮೀಸಲಿಡಲಾಗಿದೆ. ಕ್ವೀನ್ಸ್ ವೃತ್ತದಿಂದ ಸಿಟಿಒ ಜಂಕ್ಷನ್, ರಾಜಭವನ ರಸ್ತೆ ಕಡೆಗೆ ಹೋಗುವ ಆಟೋಗಳು ರಸ್ತೆಯ ಎಡ ಪಥದಲ್ಲಿ ಚಲಿಸಬೇಕಾಗಿದೆ. [ಆಟೋ ದರದ ಬಗ್ಗೆ ಮಾಹಿತಿ ಬೇಕೆ ಎಸ್ ಎಂಎಸ್ ಮಾಡಿ]
ಆಟೋಗಳು ನಿಗದಿಪಡಿಸಿದ ಪಥದಲ್ಲಿ ಚಲಿಸಬೇಕು ಎಂದು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆಟೋ ಚಾಲಕರು ರಸ್ತೆ ಮಧ್ಯೆ ಬರಬಾರದು, ನಿಗದಿಪಡಿಸಿದ ಪಥದಲ್ಲೇ ಸಾಗಬೇಕು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಪಥದ ನಿಯಮವನ್ನು ಉಲ್ಲಂಘಿಸುವ ಆಟೋ ಚಾಲಕರ ವಿರುದ್ಧ ದೂರು ದಾಖಲಿಸಿ, ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನೂತನ ವ್ಯವಸ್ಥೆ ಕುರಿತು ಮಾಹಿತಿ ನೀಡಿರುವ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಮತ್ತು ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಹಲಸೂರು ಗೇಟ್ ಹಾಗೂ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಯಶಸ್ವಿಯಾದರೆ ನಗರದಲ್ಲಿ ಹಂತ-ಹಂತವಾಗಿ ಆಟೋಗಳಿಗೆ ಪ್ರತ್ಯೇಕ ಪಥ ಆರಂಭಿಸಲಾಗುತ್ತದೆ ಎಂದು ದಯಾನಂದ ಅವರು ಮಾಹಿತಿ ನೀಡಿದ್ದಾರೆ. [ಮಹಿಳೆ ಮುಖಕ್ಕೆ ಉಗಿದ ಆಟೋ ಚಾಲಕ]












Click it and Unblock the Notifications