ಚುನಾವಣೆ ಮುಗಿದ ನಂತರವೂ ಧರಣಿ: ರವಿಕೃಷ್ಣಾ ರೆಡ್ಡಿ
ಬೆಂಗಳೂರು, ಏಪ್ರಿಲ್ 18: ಕಾಂಗ್ರೆಸ್ ಪಕ್ಷದ ಬೆಂಬಲಿಗರ ಗೂಂಡಾವರ್ತನೆಯನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಅವರು ಕ್ಷೇತ್ರದಲ್ಲಿ ಮರುಚುನಾವಣೆಗೆ ಆಗ್ರಹಿಸಿದ್ದಾರೆ. ರಾಮನಗರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಇಂದು ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆದರೆ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರು ಎರಡು ಮತಗಟ್ಟೆಗಳಲ್ಲಿ ಮಾತ್ರ ಮರು ಮತದಾನಕ್ಕೆ ಆದೇಶಿಸಿದ್ದು, ಅದರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಯಾವುದೇ ಮತಗಟ್ಟೆಯೂ ಇಲ್ಲ ಎಂಬುದು ಗಮನಾರ್ಹ.
ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಗೂಂಡಾಗಳು ತಮ್ಮ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮುನಿಸಿಕೊಂಡು ರವಿಕೃಷ್ಣಾ ರೆಡ್ಡಿ ರಸ್ತೆಯ ನಟ್ಟನಡುವೆ ನಿನ್ನೆಯಿಂದ ಧರಣಿ ಕುಳಿತಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ಬಾಬು ಮ್ಯಾಥ್ಯೂ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಎಎಪಿ ಅಭ್ಯರ್ಥಿ ಅರ್ಕೇಶ್ ಸಹ ಇಂದು ರವಿಗೆ ಬೆಂಬಲ ಸೂಚಿಸಿ, ಧರಣಿಗೆ ಕುಳಿತಿದ್ದಾರೆ. ಈ ಮಧ್ಯೆ, ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ರವಿಕೃಷ್ಣಾ ರೆಡ್ಡಿ ಪ್ರಕಟಿಸಿದ್ದಾರೆ.
ಬಿಡದಿ ಬಳಿ ಮಾಯಾಂಗಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟರು ಮತದಾರರಿಗೆ ಹಣ ಹಂಚುತ್ತಿದ್ದು ಅದನ್ನು ತಡೆಯಲು/ವಿಡಿಯೋ ಚಿತ್ರೀಕರಣ ಮಾಡಲು ನಮ್ಮ ಪ್ರತಿನಿಧಿಗಳು ಮುಂದಾದಾಗ ಅವರ ಮೇಲೆ ಹಲ್ಲೆ ನಡೆದಿದೆ ಎಂಬುದು ರವಿಕೃಷ್ಣಾ ರೆಡ್ಡಿ ಅವರ ಆರೋಪ.
'ಹಲ್ಲೆಕೋರ ಗೂಂಡಾಗಳನ್ನು ತಕ್ಷಣ ಬಂಧಿಸಿಬೇಕು. ತಮ್ಮ ಪಕ್ಷದ ಕಾರ್ಯಕರ್ತರಿಗೆ ರಕ್ಷಣೆ ನೀಡಬೇಕು ಎಂದು ಎಎಪಿ ಕಾರ್ಯಕರ್ತರೊಂದಿಗೆ ನಿನ್ನೆ ಮಧ್ಯಾಹ್ನದಿಂದ ರವಿಕೃಷ್ಣಾ ರೆಡ್ಡಿ ಧರಣಿ ಹೂಡಿದ್ದಾರೆ.
'ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿಕೆ ಸುರೇಶ್ ಮತ್ತು ಅವರ ಸೋದರ ಡಿಕೆ ಶಿವಕುಮಾರ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಅಕ್ರಮಗಳನ್ನು ಎಸಗಿದ್ದಾರೆ. ಸೋದರರಿಬ್ಬರೂ ಅಪಾರ ಅಕ್ರಮ ಸಂಪಾದಿಸಿದ್ದಾರೆ. ಅದನ್ನೆಲ್ಲಾ ಕ್ಷೇತ್ರದ ಜನತೆಗೆ ಹಂಚಬೇಕು' ಎಂದು ರವಿಕೃಷ್ಣಾ ರೆಡ್ಡಿ ಆಗ್ರಹಿಸಿದ್ದಾರೆ.












Click it and Unblock the Notifications