ಬೆಂಗಳೂರು: ಫೀಸ್ ಕಟ್ಟದ ಮಕ್ಕಳಿಗೆ ಪರೀಕ್ಷೆ ನಿರಾಕರಣೆ: ಪೋಷಕರ ಆಕ್ರೋಶ
ಬೆಂಗಳೂರು ಮಾರ್ಚ್ 14: ಫೀಸ್ ಕಟ್ಟಿಲ್ಲ ಎಂದು ನೂರಕ್ಕೂ ಹೆಚ್ಚು ಮಕ್ಕಳನ್ನು ಪರೀಕ್ಷೆಯಿಂದ ಹೊರಗಿಟ್ಟ ಘಟನೆಗೆ ಬೆಂಗಳೂರಿನ ಇಂದಿರಾನಗರದ ಕಾವೇರಿ ಶಾಲೆಯಲ್ಲಿ ನಡೆದಿದೆ. ನಿನ್ನೆಯಿಂದ ಒಂದರಿಂದ ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆ ನಡೆದಿದೆ. ಇಂದು ಪರೀಕ್ಷೆ ಆರಂಭವಾಗುತ್ತಿದ್ದಂತೆ ಶಾಲೆಯ ಸಿಬ್ಬಂದಿ ಸುಲಿಗೆ ಮುಂದಾಗಿದ್ದಾರೆ. ಫೀಸ್ ಕಟ್ಟಲು ಇಪ್ಪತ್ತು ನಿಮಿಷ ಸಮಯ ನೀಡಿ ಪರೀಕ್ಷೆಯಿಂದ ನಿರಾಕರಣೆ ಮಾಡಿದೆ. ಹೀಗಾಗಿ ಶಾಲೆಯ ಮುಂದೆ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಜನಜೀವನ ರಾಜ್ಯದಲ್ಲಿ ಸಹಜ ಸ್ಥಿತಿಯತ್ತ ಮರುಕಳಿಸುತ್ತಿದೆ. ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಕಳೆದ ಎರಡು ವರ್ಷದಿಂದ ದುಡಿಮೆಯಿಲ್ಲದೆ ಜೀವನ ಸಾಗಿಸಲು ಕಷ್ಟಪಡುತ್ತಿದ್ದ ಅದೆಷ್ಟೋ ಕುಟುಂಬಗಳಿಗೆ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಆರ್ಥಿಕ ಜೀವನ ಹದಗೆಡುತ್ತಿರುವ ಈ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಲು ಶಾಲೆಗಳು ಕರುಣೆಯಿಲ್ಲದೆ ವರ್ತಿಸುತ್ತಿವೆ. ಫೀಸ್ ಕೊಡಲಾಗದ ಮಕ್ಕಳಿಗೆ ಪರೀಕ್ಷೆಗಳನ್ನು ಬರೆಯಲು ಅನುಮತಿಸದೇ ಹೊರಗಿಡುತ್ತಿವೆ. ಇಂಥಹ ಸುಲಿಗೆಗಿಳಿದ ಶಾಲೆಗಳ ಪಟ್ಟಿ ದಿನಗಳೆದಂತೆ ದೊಡ್ಡದಾಗುತ್ತಿದೆ.
ಪರೀಕ್ಷೆ ಬರೆಯೋ ಮುನ್ನ ಫುಲ್ ಫೀಸ್ ಕಟ್ಟಿ ಅಂತ ಖಾಸಗಿ ಶಾಲೆಗಳಲ್ಲಿ ಮತ್ತೆ ಕ್ಯಾತೆ ತೆಗೆದಿವೆ. ಒಂದರಿಂದ 10ನೇ ತರಗತಿ ಮಾತ್ರವಲ್ಲ, LKGಗೂ ಹಾಲ್ಟಿಕೆಟ್ ಮಾಡಿ, ಶುಲ್ಕ ಕಟ್ಟಿ ಎಂದು ಕಿರಿಕ್ ಮಾಡ್ತಿವೆ. ಕೊರೊನಾ ಮೂರನೆ ಅಲೆಯಲ್ಲಿ ಕೇಸ್ ಕಡಿಮೆಯಾಗುತ್ತಿದ್ದಂತೆ ಶಾಲೆಗಳು ಶುರುವಾದವು. ಈ ವರುಷವೂ ಹಲವು ತಿಂಗಳು ಆನ್ಲೈನ್ಕ್ಲಾಸ್ ಮಾಡಬೇಕಾಯಿತು. ಇದೀಗ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಪರೀಕ್ಷೆಗಳು ಬಂದಿರುವುದರಿಂದ ಮತ್ತೆ ಖಾಸಗಿ ಶಾಲೆಗಳು ತಮ್ಮ ಧನದಾಹಿತನಕ್ಕೆ ಮುಂದಾಗಿವೆ.
ಪರೀಕ್ಷೆ ಬರೆಯಬೇಕೆಂದರೆ ಫುಲ್ ಫೀಸ್ ಕಟ್ಟಲೇಬೇಕು. ಇಲ್ಲವಾದಲ್ಲಿ 1-10ನೇ ತರಗತಿ ಹಾಲ್ ಟಿಕೆಟ್ ಇಲ್ಲ, ಪರೀಕ್ಷೆಗೆ ಅವಕಾಶವೂ ಕೊಡುತ್ತಿಲ್ಲ. ಹಾಲ್ ಟಿಕೆಟ್ ಕೊಡುವ ನೆಪದಲ್ಲಿ ಬಾಕಿ ಶುಲ್ಕ ವಸೂಲಿ ಮಾಡುತ್ತಿವೆ. ಹಲವು ಪ್ರತಿಷ್ಟಿತ ಶಾಲೆಗಳಲ್ಲಿ 10ನೇ ತರಗತಿ ಮಾತ್ರವಲ್ಲ, ಯುಕೆಜಿ , ಎಲ್ ಕೆ.ಜಿ ಸೇರಿದಂತೆ ಎಲ್ಲ ತರಗತಿ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡಿ, ಶುಲ್ಕ ಕಟ್ಟದ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ಕೊಡದೇ ಬೆಂಗಳೂರಿನ ಕೆಲ ಖಾಸಗಿ ಶಾಲೆಗಳು ಪರೀಕ್ಷೆ ಕೂರಿಸಿಲ್ಲ.
ಖಾಸಗಿ ಶಾಲೆಗಳ ಶುಲ್ಕ ಟಾರ್ಚರ್ ಗೆ ಬೇಸತ್ತ ಪೋಷಕರ ಸಮನ್ವಯ ಸಮಿತಿ ಈ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದೆ. ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರಗಿಸುವಂತೆ ಪೋಷಕರಿಂದ ಒತ್ತಾಯಿಸಲಾಗಿದೆ. ಪೋಷಕರ ಸಮನ್ವಯ ಸಮಿತಿಯ ದೂರಿನ ಮೇರೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಕುರಿತು ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ. LKG ಇಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಈ ಕುರಿತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಎಂದು ಇಲಾಖೆಗೆ ಪತ್ರ ಬರೆಯಲಾಗಿದೆ.
ಕೊರೊನಾ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವುದೇ ಹೆಚ್ಚಾಗಿದೆ. ಜೀವನ ಸಾಗಿಸುವುದು ಕಷ್ಟವಾಗಿದೆ. ಹೀಗಿರುವಾಗ ಹಣದ ದಾಹಕ್ಕೆ ಬಿದ್ದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಶುಲ್ಕ ನೀಡುವಂತೆ ಕಿರುಕುಳ ನೀಡುವ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಕೇವಲ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಮೈಸೂರಲ್ಲೂ ವಿದ್ಯಾರ್ಥಿಗಳಿಗೆ ಫೀಸ್ ಟಾರ್ಚರ್ ಮಾಡಲಾಗಿದೆ. ಖಾಸಗೀ ಶಾಲೆಯ ಆಡಳಿತ ಮಂಡಳಿಯಿಂದ ವರ್ತನೆಗೆ ಪೋಷಕರು ಬೇಸತ್ತಿದ್ದಾರೆ.
Recommended Video