ಬಿಜೆಪಿಗೆ ತಲೆನೋವಾದ ಬೆಂಗಳೂರು ಉತ್ತರ ಲೋಕಸಭಾ ಟಿಕೆಟ್ ಹಂಚಿಕೆ
ಬೆಂಗಳೂರು, ಫೆಬ್ರವರಿ 03: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರು ಸ್ಪರ್ಧಿಸಲಿ ಹಾಗೂ ಅವರ ವಿರುದ್ಧ ಸೆಣಸಬೇಕು ಎಂಬುದು ನನ್ನ ಇಚ್ಛೆ ಕೂಡ ಎಂದು ಹಾಲಿ ಸಂಸದ ಡಿವಿ ಸದಾನಂದ ಗೌಡ ಅವರು ಸವಾಲು ಹಾಕಿದ್ದಾರೆ. ಆದರೆ, ಬಿಜೆಪಿ ಮಾತ್ರ ಬೇರೆಯದ್ದೇ ಯೋಜನೆ ಹಾಕಿಕೊಂಡಿರುವಂತಿದೆ. ಈ ಕ್ಷೇತ್ರದಲ್ಲಿ ಸದಾನಂದ ಗೌಡರ ಬದಲಿಗೆ ಸ್ಥಳೀಯ ಅಭ್ಯರ್ಥಿಯೊಬ್ಬರಿಗೆ ಟಿಕೆಟ್ ನೀಡುವ ಬಗ್ಗೆ ಮಾತುಕತೆ ಶುರುವಾಗಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರ, ಟಿಕೆಟ್ ಹಂಚಿಕೆ, ಸಂಘಟನೆ ಕುರಿತಂತೆ ಪೂರ್ವಭಾವಿ ಸಭೆಯಲ್ಲಿ ಹಾಗೂ ಸಭೆಯ ನಂತರ ಕೇಂದ್ರ ಸಚಿವ ಸದಾನಂದಗೌಡರು ತಾವು ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.
ಲೋಕಸಭೆ ಚುನಾವಣೆ: ದೇವೇಗೌಡರ ವಿರುದ್ಧ ಸೆಣೆಸಲು ಸಿದ್ಧ: ಡಿವಿಎಸ್
ಆದರೆ, ಈಗ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಗಾಗಿ ಪೈಪೋಟಿ ಶುರುವಾಗಿದೆ. ಸ್ಥಳೀಯ ಮುಖಂಡರಾದ ಡಾ.ಎಚ್.ಎನ್. ಚಂದ್ರಶೇಖರ್ಅವರು ತಮಗೆ ಈ ಕ್ಷೇತ್ರದಿಂದ ಟಿಕೆಟ್ ನೀಡಬೇಕು ಎಂದು ಬಹಿರಂಗವಾಗಿ ಮನವಿ ಮಾಡಿದ್ದಾರೆ.
ಈಗ ಆರೆಸ್ಸೆಸ್ ಬೆಂಬಲಿತ ಅಭ್ಯರ್ಥಿಯಾಗಿ ಡಾ.ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಲಾಗಿದೆ. ಒಕ್ಕಲಿಗರಾಗಿರುವ ಚಂದ್ರಶೇಖರ್ ಹಾಗೂ ಸದಾನಂದ ಗೌಡರ ನಡುವೆ ಯಾರಿಗೆ ಟಿಕೆಟ್ ಸಿಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಸ್ಪರ್ಧೆ ಬಗ್ಗೆ ಮಾತನಾಡಿದ ಡಾ.ಚಂದ್ರಶೇಖರ್
ಸ್ಪರ್ಧೆ ಬಗ್ಗೆ ಮಾತನಾಡಿದ ಡಾ.ಚಂದ್ರಶೇಖರ್, 'ನಾನು ಕೂಡಾ ಬೆಂಗಳೂರು ಉತ್ತರದಲ್ಲಿ ಪ್ರಬಲ ಆಕಾಂಕ್ಷಿ. ಈ ಬಾರಿ ಯಾರಿಗೆ ಟಿಕೆಟ್ ನೀಡಬೇಕು ಎಂದು ವರಿಷ್ಠರು ತೀರ್ಮಾನ ಮಾಡ್ತಾರೆ. ನಾನು ಆಕಾಂಕ್ಷಿ ಎಂದು ಸದಾನಂದಗೌಡರಿಗೂ ಗೊತ್ತು. ಡಿ.ವಿ.ಸದಾನಂದಗೌಡರು ಹಾಲಿ ಸಂಸದರು ಹಾಗೂ ಸಚಿವರಿದ್ದಾರೆ. ಆದರೆ, ನಾನು ಕಳೆದ ಬಾರಿ ಕೂಡ ಪಕ್ಷದ ನಾಯಕರನ್ನು ಕೇಳಿದ್ದೆ. ಈ ಬಾರಿ ಯಡಿಯೂರಪ್ಪ ಅವರನ್ನೊಳಗೊಂಡಂತೆ ಎಲ್ಲ ನಾಯಕರನ್ನ ಭೇಟಿ ಮಾಡಿದ್ದೇನೆ. ರಾಷ್ಟ್ರೀಯ ನಾಯಕರನ್ನೂ ಭೇಟಿ ಮಾಡಿದ್ದೇನೆ, ನಾನು ರೈತ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ, ಪಕ್ಷದ ಹಿತಕ್ಕಾಗಿ ಯಾವುದೇ ಪಾತ್ರ ವಹಿಸಲು ಸಿದ್ಧ ಎಂದು ಹೇಳಿದರು.
ಶೋಭಾ ಕರಂದ್ಲಾಜೆ ಸ್ಪರ್ಧೆ
ಎಚ್.ಡಿ.ದೇವೇಗೌಡರು ಕಣಕ್ಕಿಳಿಯುವುದರಿಂದ ಡಿವಿ ಸದಾನಂದ ಗೌಡ ಅವರು ಕಣದಿಂದ ಹಿಂದಕ್ಕೆ ಸರಿದು, ಮಹಿಳಾ ಅಭ್ಯರ್ಥಿ(ಶೋಭಾ ಕರಂದ್ಲಾಜೆ?)ಗೆ ಅವಕಾಶ ನೀಡುವ ಸಾಧ್ಯತೆ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ, ದೇವೇಗೌಡರ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದು ಸದಾನಂದ ಗೌಡ ಅವರು ಹೇಳಿದ್ದರು.
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಸದಾನಂದ ಗೌಡರನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಸದಾನಂದ ಗೌಡರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚು
ಕರ್ನಾಟಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರ ಬಹಳ ಪ್ರಮುಖವಾದ ಕ್ಷೇತ್ರ. ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಪ್ರತಿನಿಧಿಸುವ ಕ್ಷೇತ್ರವಾಗಿರುವುದರಿಂದ ಕೊಂಚ ಮಹತ್ವ ಹೆಚ್ಚು. ಆರ್ ಟಿ ನಗರ, ಇಂದಿರಾನಗರ, ಜಾಲಹಳ್ಳಿ, ಮಲ್ಲೇಶ್ವರ, ಯಶವಂತಪುರ ಸೇರಿದಂತೆ ಪ್ರಮುಖ ಬಡಾವಣೆಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಈ ಬಾರಿಯೂ ಸದಾನಂದ ಗೌಡರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರ
2004 ರಲ್ಲಿ ಭಾರತೀಯ ಜನತಾ ಪಕ್ಷದಿಂದ ಹೆಚ್ ಟಿ ಸಾಂಗ್ಲಿಯಾನ ಅವರು ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದರು. ಆದರೆ ಅವರು ಬಿಜೆಪಿಯನ್ನು ತೊರೆದ ನಂತರ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಿ ಬಿ ಚಂದ್ರೇಗೌಡ ಅವರು ಸ್ಪರ್ಧಿಸಿ ಗೆಲುವು ಸಾಧಿಸಿದರು. 2014 ರಲ್ಲಿ ಡಿವಿ ಸದಾನಂದಗೌಡ ಅವರು ಗೆಲುವು ಸಾಧಿಸುವ ಮೂಲಕ ಸತತ ಮೂರು ಬಾರಿಗೆ ಬಿಜೆಪಿಯೇ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಗಳಿಸುವಂತೆ ಮಾಡಿದರು.