ಬೆಂಗಳೂರು-ಮೈಸೂರು ನಡುವೆ ಬುಲೆಟ್ ರೈಲು

ಬೆಂಗಳೂರು - ಮೈಸೂರು ನಡುವೆ ಬುಲೆಟ್ ಟ್ರೈನ್ ಸಂಚಾರ ವ್ಯವಸ್ಥೆಗೆ ತಾಂತ್ರಿಕ ಸಹಕಾರದ ಜತೆಗೆ ಬಂಡವಾಳ ಹೂಡಿಕೆ ಮಾಡುವಂತೆಯೂ ಜಪಾನ್ ನಿಯೋಗವನ್ನು ಕೋರಿರುವ ಮುಖ್ಯಮಂತ್ರಿ, ಯೋಜನೆ ಕುರಿತು ಚರ್ಚಿಸಲು ಬೆಂಗಳೂರಿಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ.
ಸೋಮವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ, ಚೀನಾ ಪ್ರವಾಸದ ಬಗ್ಗೆ ಮಾಹಿತಿ ನೀಡಿದರು. ಬೆಂಗಳೂರಿನ ಒತ್ತಡ ಕಡಿಮೆ ಮಾಡಿ, ಮೈಸೂರಿನತ್ತ ಜನರನ್ನು ಆಕರ್ಷಿಸಲು ಬುಲೆಟ್ ರೈಲು ಸಂಚಾರ ವ್ಯವಸ್ಥೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಅರ್ಧ ತಾಸಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸಬಹುದಾದ ವ್ಯವಸ್ಥೆ ಇದ್ದರೆ ಉದ್ಯಮಿಗಳು ಹಾಗೂ ಸಾರ್ವಜನಿಕರು ಮೈಸೂರಿನತ್ತ ಮುಖ ಮಾಡುತ್ತಾರೆ. ಆಗ ಬೆಂಗಳೂರಿನ ಒತ್ತಡ ಕಡಿಮೆಯಾಗಲಿದೆ ಎಂದರು.
ಚೀನಾದಲ್ಲಿ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಜಪಾನ್ ನಿಯೋಗದೊಂದಿಗೆ ಬುಲೆಟ್ ಟ್ರೈನ್ ಸಂಚಾರ ವ್ಯವಸ್ಥೆಯನ್ನು ಬೆಂಗಳೂರಿನಲ್ಲಿ ಅನುಷ್ಠಾನಕ್ಕೆ ತರಲು ನೆರವು ಕೋರಿದ್ದೇವೆ. ಜಪಾನ್ ಶಿಕ್ಷಣ ಸಚಿವ ಹಕೂಬನ್ ಶಿವೋಮೂರ ಅವರನ್ನು ಈ ಸಂಬಂಧ ಬೆಂಗಳೂರಿಗೆ ಬರುವಂತೆ ಆಹ್ವಾನ ನೀಡಿದ್ದೇನೆ ಎಂದು ತಿಳಿಸಿದರು.
ರೈಲ್ವೆ ಇಲಾಖೆಯಿಂದಲೂ ಈಗಾಗಲೇ ಬೆಂಗಳೂರು - ಮೈಸೂರು, ಬೆಂಗಳೂರು - ಚೆನ್ನೈ ನಡುವೆ ಹೈಸ್ಪೀಡ್ ರೈಲು ಸಂಚಾರ ವ್ಯವಸ್ಥೆಯ ಪ್ರಸ್ತಾವನೆ ಇದೆ. ಜತೆಗೆ ಬುಲೆಟ್ ಟ್ರೈನ್ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.
ದೇವನಹಳ್ಳಿ ಬಳಿ ಸಭಾಂಗಣ : ದೇವನಹಳ್ಳಿ ಸಮೀಪ ಅಂತಾರಾಷ್ಟ್ರೀಯ ಸಮ್ಮೇಳನ ಸಭಾಂಗಣ ನಿರ್ಮಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಖಾಸಗಿ ಸಹಭಾಗಿತ್ವದಲ್ಲಿ 400ರಿಂದ 500 ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ ನಿರ್ಮಾಣವಾಗಲಿದೆ ಎಂದರು.
ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ, ವಿಚಾರ ಸಂಕಿರಣ, ಸಮಾವೇಶಗಳಿಗೆ ಸುವ್ಯವಸ್ಥಿತ ಸಭಾಂಗಣದ ಅವಶ್ಯಕತೆ ಇದೆ. ವಿಮಾನ ನಿಲ್ದಾಣ ಸಮೀಪ ಅದನ್ನು ನಿರ್ಮಿಸಿದರೆ ವಿದೇಶಿ ಪ್ರತಿನಿಧಿಗಳು, ಗಣ್ಯರು ಪಾಲ್ಗೊಳ್ಳಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.












Click it and Unblock the Notifications