ಜಯನಗರ ತ್ರಿವಳಿ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
ಬೆಂಗಳೂರು, ಜು.24: ಜಯನಗರ 4ನೇ ಟಿ ಬ್ಲಾಕ್ ತ್ರಿವಳಿ ಕೊಲೆ ಪ್ರಕರಣದ ಆರೋಪಿ ಗೋವಿಂದರಾಜುಗೆ 14ನೇ ತ್ವರಿತ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2009ರ ಈ ಕೊಲೆ ಪ್ರಕರಣ ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿತ್ತು. ಮೂವರು ಮಹಿಳೆಯರನ್ನು ಕೊಂದ ಪಾತಕಿಗೆ ಕೊನೆಗೂ ಶಿಕ್ಷೆ ಸಿಕ್ಕಿದೆ.
ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾಗಿ ಬಾಲಕೃಷ್ಣ ವಾದ ಮಂಡಿಸಿದ್ದರು. 2009ರ ಜನವರಿ 20 ರಂದು ಬೆಳಗ್ಗೆ ಮನೆಯಲ್ಲಿದ್ದ ಜಯಶ್ರೀ(45), ಅತ್ತೆ ಸತ್ಯಭಾಮ(80), ಸತ್ಯಭಾಮ ಅವರ ಮಗಳು ವಿಜಯಲಕ್ಷ್ಮೀ(59) ಎಂಬುವರನ್ನು ಅವರ ಮನೆಯಲ್ಲೇ ತಲೆಗೆ ತೆಂಗಿನಕಾಯಿಯಿಂದ ಹೊಡೆದು ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ತಿಲಕನಗರ ಪೊಲೀಸರು ಜ. 28ರಂದು ನಂದಿನಿ ಬಡಾವಣೆ ನಿವಾಸಿ ಶಿವಮೊಗ್ಗ ಮೂಲದ ಗೋವಿಂದರಾಜುನನ್ನು ಬಂಧಿಸಿದ್ದರು.[ಜಯನಗರದಲ್ಲಿ ಚಿನ್ನಕ್ಕಾಗಿ ವೃದ್ಧೆ ಭೀಕರ ಕೊಲೆ]
ಜಯಶ್ರೀ ಅವರ ಅಗ್ರಿ ಗೋಲ್ಡ್ ಫಾರ್ಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಕೊಲೆಯಾಗುವ ಕೆಲವೇ ತಿಂಗಳು ಮುನ್ನಾ ಕೆಲಸ ತೊರೆದಿದ್ದರು. ಕೆಲಸದಲ್ಲಿದ್ದಾಗ ನಂದಿನಿ ಬಡಾವಣೆ ನಿವಾಸಿ ಗೋವಿಂದರಾಜು ಪರಿಚಯವಾಗಿದ್ದ. ಮನೆಯಲ್ಲಿ ಉಪನಯನ ಕಾರ್ಯ ಇದ್ದ ಕಾರಣ ಕೆಲಸಗಳಿವೆ ಎಂದು ಪರಿಚಯವಿದ್ದ ಗೋವಿಂದರಾಜುನನ್ನು ಜಯಶ್ರೀ ಮನೆಗೆ ಕರೆಸಿಕೊಂಡಿದ್ದರು. ಎನ್ ಎಸ್ ವಿಕೆ ಶಾಲೆಯಲ್ಲಿ ಓದುತ್ತಿದ್ದ ಮಗ ಶ್ರೇಯಸ್ ನ ಉಪನಯನಕ್ಕಾಗಿ ಎಲ್ಲರೂ ತಯಾರಿ ನಡೆಸುತ್ತಿದ್ದರು.

ಜ.20ರಂದು ಬೆಳಗ್ಗೆ ಮನೆಗೆ ಬಂದ ಗೋವಿಂದರಾಜು, ಅಡುಗೆ ಮನೆಯಲ್ಲಿದ್ದ ಜಯಶ್ರೀ ತಲೆಗೆ ತೆಂಗಿನಕಾಯಿಯಿಂದ ಬಲವಾಗಿ ಹೊಡೆದು ನಂತರ ಕಾಟ್ ಮೇಲೆ ಮಲಗಿಸಿ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿದ್ದ. ಮನೆಯಲ್ಲೇ ಇದ್ದ ವಿಜಯಲಕ್ಷ್ಮೀ ಇದನ್ನು ಗಮನಿಸಿದ ಕಾರಣ ಅವರನ್ನು ತೆಂಗಿನಕಾಯಿಯಿಂದ ಹೊಡೆದು, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಸತ್ಯಭಾಮ ಅವರನ್ನು ಅವರು ಮಲಗಿದ ಕೊಠಡಿಯಲ್ಲೇ ಅದೇ ರೀತಿಯಲ್ಲಿ ಕೊಲೆ ಮಾಡಿ 10 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.
ಮಧ್ಯಾಹ್ನದ ವೇಳೆಗೆ ಜಯಶ್ರೀ ಅವರ ಸಂಬಂಧಿ ಶ್ರೀರಂಜಿನಿ ಎಂಬುವರು ಹೊಸ ಬಟ್ಟೆಗಳನ್ನು ತೆಗೆದುಕೊಂಡು ಮನೆಗೆ ಬಂದಿದ್ದಾರೆ. ಮೂರು ಹೆಣಗಳನ್ನು ನೋಡಿ ತತ್ತರಿಸಿ ತಕ್ಷಣವೇ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪ್ರಕರಣ ದಾಖಲಿಸಿಕೊಂಡಿದ್ದ ತಿಲಕ್ ನಗರ ಪೊಲೀಸರು ಆರೋಪಿಯನ್ನು ಸೆರೆ ಹಿಡಿದ್ದರು.ಹಣಕಾಸಿನ ಸಮಸ್ಯೆ ಹಿನ್ನೆಲೆಯಲ್ಲಿ ಚಿನ್ನಾಭರಣ ದೋಚುವ ಉದ್ದೇಶದಿಂದ ಕೊಲೆ ಮಾಡಿದ್ದಾಗಿ ಗೋವಿಂದರಾಜು ತಿಳಿಸಿದ್ದ.
ಅಂದಿನ ಎಸಿಪಿ ಎನ್.ನಾಗರಾಜ, ತಿಲಕನಗರ ಇನ್ಸ್ಪೆಕ್ಟರ್ ಶ್ರೀನಿಧಿ ಹಾಗೂ ಎಸ್ಸೈ ನಿರಂಜನ್ ಕುಮಾರ್ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.












Click it and Unblock the Notifications