ಗಾಯಕಿ ಸಂಗೀತಾ ಕಟ್ಟಿ, ಅನನ್ಯ ಭಟ್ ತಂಡದಿಂದ ಗಾನ ವೈಭವ
ಬೆಂಗಳೂರು, ಆಗಸ್ಟ್ 30: ಇತಿಹಾಸ ಪ್ರಸಿದ್ಧ ಬೆಂಗಳೂರು ಗಣೇಶ ಉತ್ಸವದ ಸಂಪ್ರದಾಯವನ್ನು ಜೀವಂತವಾಗಿಟ್ಟುಕೊಂಡು, 11 ದಿನಗಳ ಉತ್ಸವದ 58 ನೇ ಆವೃತ್ತಿಯನ್ನು ಈ ವರ್ಷ ವರ್ಚುವಲ್ ಆಗಿ ನಡೆಸಲಾಗುತ್ತಿದೆ. ಬೆಂಗಳೂರು ಗಣೇಶ ಉತ್ಸವ ಪ್ರತಿ ವರ್ಷವೂ ಶ್ರೀ ವಿದ್ಯಾರಣ್ಯ ಯುವ ಸಂಘದಿಂದ ಗಣೇಶ ಚತುರ್ಥಿ ಸಮಯದಲ್ಲಿ ಸಂಘಟಿಸುವ ಅತಿ ದೊಡ್ಡ ಸಾಂಸ್ಕೃತಿಕ ಉತ್ಸವ. ಇಲ್ಲಿ ಹಲವಾರು ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸಿಸಲು ಉತ್ತಮ ವೇದಿಕೆಯನ್ನು ಒದಗಿಸಿ ಕೊಡಲಾಗುತ್ತಿದೆ.
Recommended Video
ಬೆಂಗಳೂರು ಗಣೇಶ ಉತ್ಸವದ ( ಬಿಜಿಯು) 9ನೇ ದಿನದಂದು ವಿಶೇಷ ಕಾರ್ಯಕ್ರಮ "ಪರಂಪರಾ, ದಿ ಎರಾ"(ಭಾರತೀಯ ಸಂಗೀತದ ವಿವಿಧ ಪ್ರಕಾರಗಳ ಬೆಳವಣಿಗೆ) ನಡೆಯಲಿದೆ. ಆಗಸ್ಟ್ 30, 2020ರ ಭಾನುವಾರದಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ 12 ಗಂಟೆಗಳ ಕಾಲ ನಿರಂತರ ಗಾಯನ ಕಾರ್ಯಕ್ರಮ ನೆರವೇರಲಿದೆ.ಖ್ಯಾತ ಹಿನ್ನಲೆ ಗಾಯಕಿ ಸಂಗೀತಾ ಕಟ್ಟಿ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲಿದ್ದಾರೆ.
ಆನ್ಲೈನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ
ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ' ಕ್ಲಾಸಿಕಲ್ ಪರಂಪರಾ' ನಡೆಯಲಿದ್ದು ಸಂಗೀತಾ ಕಟ್ಟಿ, ಜಯಂತಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. 12 ಗಂಟೆಯಿಂದ 2 ಗಂಟೆಯವರೆಗೆ ಭಕ್ತಿ ಪರಂಪರಾ' ಖ್ಯಾತ ಗಾಯಕ ನರಸಿಂಹ ನಾಯಕ್ ಪುತ್ತೂರು ಹಾಗೂ ಸಂಗೀತಾ ಕಟ್ಟಿ ಅವರಿಂದ ಕಾರ್ಯಕ್ರಮ ನಡೆಯಲಿದೆ. 2 ಗಂಟೆಯಿಂದ 4 ಗಂಟೆಗಳವರೆಗೆ ಭಾವ ಸಂಗೀತ ಪರಂಪರಾ' ವನ್ನು ಸಿದ್ಧಾರ್ಥ್ ಬೆಳ್ಮಣ್ಣು ಹಾಗೂ ಚಂದನ ಅವರು ಪ್ರಸ್ತುತ ಪಡಿಸಲಿದ್ದಾರೆ.
ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಸೂಫಿ ಮತ್ತು ಲೋಕ್ ಸಂಗೀತಾ ಪರಂಪರಾ' ಇರಲಿದೆ. ಕಾರ್ಯಕ್ರಮದಲ್ಲಿ ಅನನ್ಯ ಭಟ್, ಶುಭ ರಾಘವೇಂದ್ರ,ಮನೋಜ್ ವಸಿಷ್ಠ ಅವರ ಹಾಡುಗಾರಿಕೆ ಇರಲಿದೆ. 7ರಿಂದ 9 ಗಂಟೆಗಳ ಕಾಲ ಸಿನಿಮಾ ಪರಂಪರಾ' ಸಂಗೀತಾ ಕಟ್ಟಿ, ಸಂಗೀತ ರವೀಂದ್ರ ನಾಥ್, ಅಂಜನ ಪದ್ಮನಾಭನ್ ಅವರ ಕಂಠ ಸಿರಿಯಲ್ಲಿ ಹಾಡುಗಳ ಹಬ್ಬ ಸಂಗೀತ ಪ್ರಿಯರ ಮನ ಸೆಳೆಯಲಿದೆ. ಕೊನೆಯದಾಗಿ 9 ರಿಂದ 'ದೇಶ ಭಕ್ತಿ ಪರಂಪರಾ' ದಲ್ಲಿ ಬದರಿ ಪ್ರಸಾದ್,ಸಂತೋಷ್ ವೆಂಕಿ,ಚೈತ್ರ ಹೆಚ್.ಜಿ ಅವರಿಂದ ಮಧುರ ಗೀತೆಗಳನ್ನು ಆಲಿಸಬಹುದು.
ಸೆಪ್ಟೆಂಬರ್ 1ರ ತನಕ ಜರುಗಲಿರುವ ಬೆಂಗಳೂರು ಗಣೇಶ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್ ಬುಕ್ , ಯೂ ಟ್ಯೂಬ್ , ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಲೈವ್ ಆಗಿ ಮೂಡಿ ಬರುತ್ತಿದೆ.