Bengaluru: ಬಕ್ರೀದ್ಗೆ ಕೆಲವೇ ದಿನ ಮುನ್ನವೇ ಪ್ರಾಣಿವಧೆ ನಿಷೇಧಿಸಿದ ಬಿಬಿಎಂಪಿ
ಬೆಂಗಳೂರು, ಜೂನ್ 26: ಮುಸಲ್ಮಾನರ ಬಕ್ರೀದ್ ಹಬ್ಬದಾಚರಣೆಗೆ ಕೆಲವೇ ದಿನಗಳು ಬಾಕಿ ಇವೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಪ್ರಾಣಿವಧೆ, ಬಲಿ ಕೊಡುವ ಪ್ರಕ್ರಿಯೆಗೆ ನಿಷೇಧ ಹೇರಿ ಸೋಮವಾರ ಆದೇಶಿಸಲಾಗಿದೆ.
ಪ್ರತಿ ಬಕ್ರೀದ್ ಹಬ್ಬ ಆಚರಣೆ/ ಧಾರ್ಮಿಕ ಚಟುವಟಿಕೆ ಸಂದರ್ಭಗಳಲ್ಲಿ ಹಾಗೂ ಜಾತ್ರೆ ಮತ್ತು ಹಬ್ಬ ಹರಿದಿನಗಳಲ್ಲಿ ಪ್ರಾಣಿವಧೆ ಮತ್ತು ಬಲಿ ಮಾಡುವ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಪ್ರಕಟಣೆ ಹೊರಡಿಸಲಾಗುತ್ತದೆ. ಅದರಂತೆ ಸಾರ್ವಜನಿಕ ಸ್ಥಳಗಳಾದ ರಸ್ತೆಗಳು, ಪಾದಚಾರಿ ಮಾರ್ಗಗಳು, ಎಲ್ಲಾ ರೀತಿಯ ಆಸ್ಪತ್ರೆ ಆವರಣಗಳು, ನರ್ಸಿಂಗ್ ಹೋಂ ಒಳ ಮತ್ತು ಹೊರ ಆವರಣಗಳು, ಶಾಲೆ ಕಾಲೇಜುಗಳ ಒಳ ಮತ್ತು ಹೊರ ಆವರಣಗಳು.

ಅಷ್ಟೇ ಅಲ್ಲದೇ ಆಟದ ಮೈದಾನಗಳಲ್ಲಿ, ದೇವಸ್ಥಾನಗಳು/ಮಸೀದಿಗಳು ಹಾಗೂ ಇತರೆ ಧಾರ್ಮಿಕ ಸ್ಥಳಗಳ ಆವರಣಗಳಲ್ಲಿ, ಉದ್ಯಾನವನಗಳ ಒಳಗೆ ಮತ್ತು ಹೊರಗೆ ಅಥವಾ ಬೇರಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ಸಂದರ್ಭಗಳಲ್ಲಿ ಅನಧಿಕೃತ ಪ್ರಾಣಿವಧೆ ಮತ್ತು ಬಲಿ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಕಾನುನೂ ಉಲ್ಲಂಘಿಸಿದರೆ ಕ್ರಮ
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ 2020ರ ಪ್ರಕಾರ ಅನಧಿಕೃತವಾಗಿ ಪ್ರಾಣಿವಧೆ ನಿರ್ಭಂಧಿಸಲಾಗಿದೆ ಮತ್ತು ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು.
* ಕರ್ನಾಟಕ ರಾಜ್ಯ ಪ್ರಾಣಿ ಬಲಿ ತಡೆ ಕಾಯ್ದೆ 1959ರ ಸೆಕ್ಷನ್ 3ರ ಪ್ರಕಾರ ಪ್ರಾಣಿ ಬಲಿ ಶಿಕ್ಷಾರ್ಹ ಅಪರಾಧವಾಗಿದೆ. ಅಪರಾಧ ಎಸಗರಿದವರಿಗೆ 06 ತಿಂಗಳ ಸಜೆ ಅಥವಾ ದಂಡ ಎರಡೂ ವಿಧಿಸಬಹುದಾಗಿದೆ.
* ಸಾರ್ವಜನಿಕರು ಪ್ರಾಣಿವಧೆ ಕಾಯ್ದೆಯ ಪ್ರಕಾರ ವಧೆಗೆ ಅರ್ಹವಾದ ಮತ್ತು ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧೆ ಮಾಡಲು ಅವಕಾಶ ನೀಡಲಾಗಿರುತ್ತದೆ.
* ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 429ರ ಪ್ರಕಾರ ಯಾವುದೇ ಪ್ರಾಣಿಗಳನ್ನು ಅನಧಿಕೃತವಾಗಿ ಕೊಂದರೆ 05 ವರ್ಷ ಜೈಲು ಶಿಕ್ಷೆ ಇದೆ.
ಅಪರಾಧ ಕಂಡು ಬಂದಲ್ಲಿ ಕರೆ ಮಾಡುವಂತೆ ಮನವಿ
ಇನ್ನೂ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರಂತೆ ಯಾವುದೇ ವಯಸ್ಸಿನ ದನ, ಆಕಳು, ಎತ್ತು ಹೋರಿ, ಕರುಗಳನ್ನು ಬಲಿ/ಕುರ್ಬಾನಿ/ವಧೆ ಕೊಡುವುದನ್ನು ನಿಷೇಧಿಸಲಾಗಿದೆ. ಬಲಿ/ ಕುರ್ಬಾನಿ/ ವಧೆಗಾಗಿ ಯಾವುದೇ ವಯಸ್ಸಿನ ದನ, ಆಕಳು, ಎತ್ತು, ಹೋರಿ, ಕರುಗಳನ್ನು ಸಾಗಾಟ ಮಾಡುವುದೂ ಸಹ ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಸಾರ್ವಜನಿಕರು ಈ ಬಗ್ಗೆ ಎಲ್ಲಾ ರೀತಿಯ ಸಹಕಾರ ನೀಡುವಂತೆ ಕೋರಲಾಗಿದೆ. ಜೊತೆಗೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ಸಂಖ್ಯೆ 8277100200 ಗೆ ಕರೆ ಮಾಡಿ ದೂರು/ಮಾಹಿತಿ ನೀಡಬಹುದಾಗಿದೆ ಎಂದು ಪಶುಪಾಲನಾ ವಿಭಾಗದ ಜಂಟಿ ನಿರ್ದೇಶಕರಾದ ಡಾ. ಕೆ.ಪಿ. ರವಿಕುಮಾರ್ ಅವರು ಕೋರಿದ್ದಾರೆ.












Click it and Unblock the Notifications