ವಾಹನಗಳಿಂದಾಗುವ ಮಾಲಿನ್ಯ ಕುರಿತು ಚಿತ್ರಸ್ಪರ್ಧೆ
ಬೆಂಗಳೂರು, ನವೆಂಬರ್ 18 : ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ ಅದರ ಜತೆಗೆ ಮಾಲಿನ್ಯ ಕೂಡ ಮಿತಿ ಮೀರುತ್ತಿದೆ, ವಾಹನಗಳ ನಿಯಂತ್ರಣದಿಂದ ಮಾತ್ರ ಮಾಲಿನ್ಯ ತಡೆಗಟ್ಟಲು ಸಾಧ್ಯ ಎಂದು ಯಶವಂತಪುರ ಉಪ ಸಾರಿಗೆ ಆಯುಕ್ತ ಎಸ್. ಬಾಲಕೃಷ್ಣ ಹೇಳಿದರು.
ಬೆಂಗಳೂರಿನ ಬಿ.ಇ.ಎಲ್. ಪ್ರೌಢಶಾಲೆಯಲ್ಲಿ ಸಾರಿಗೆ ಇಲಾಖೆ ಶನಿವಾರ (ನ.18) ರಂದು ಆಯೋಜಿಸಿದ್ದ ವಾಹನಗಳಿಂದಾಗುವ ಮಾಲಿನ್ಯದ ಬಗ್ಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಹನ ಬಳಕೆಯಿಂದ ಆಗುವ ಸಮಸ್ಯೆಯಲ್ಲಿ ವಾಯು ಮಾಲಿನ್ಯ ಕೂಡ ಒಂದಾಗಿದ್ದು ಪರಿಸರ ಸಂರಕ್ಷಣೆ ಹಾಗೂ ಶುದ್ಧ ಗಾಳಿಯನ್ನು ಹೊಂದಲು ವಾಹನಗಳ ಮಿತಬಳಕೆ ಮಾಡಿ ಎಂದರು.

ವಾಹನಗಳನ್ನು ಸುಸ್ಥಿತಿಯಲ್ಲಿಡುವುದು, ಅಗತ್ಯ ದುರಸ್ತಿ ಕೆಲಸಗಳಾದ ಎಂಜಿನ್ ಏರ್ ಫಿಲ್ಟರ್ ಸ್ವಚ್ಛಗೊಳಿಸುವುದು, ಅತಿ ವೇಗದ ಚಾಲನೆ ಮಾಡದಿರುವುದು, ವಾಹನದಲ್ಲಿ ಅಧಿಕ ಭಾರ ಸಾಗಿಸುವುದನ್ನು ತಡೆಗಟ್ಟುವುದು, ಟ್ರಾಫಿಕ್ ಸಿಗ್ನಲ್ ಬಳಿ ಹೆಚ್ಚು ಸಮಯ ನಿಂತಾದ ಎಂಜಿನ್ ಆಫ್ ಮಾಡಿಕೊಳ್ಳಬೇಕು ಎಂದು ಹೇಳಿದರು.
ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನ ನಿರೀಕ್ಷಕರಾದ ಎಚ್. ರಾಜಣ್ಣ, ಸಹಾಯಕ ಸಾರಿಗೆ ಅಧಿಕಾರಿಗಳಾದ ಎಸ್. ಮಂಜುನಾಥ್, ಬಿ.ಇ.ಎಲ್. ಪ್ರೌಢಶಾಲೆ ಉಪಪ್ರಾಂಶುಪಾಲರಾದ ಬಿ.ಎಸ್. ಶ್ರೀಕಂಠಾಚಾರ್ ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.











Click it and Unblock the Notifications