ಆಟೋ ಮುಷ್ಕರ : ಮಧ್ಯರಾತ್ರಿಯಿಂದ ಮಧ್ಯರಾತ್ರಿ ತನಕ
ಬೆಂಗಳೂರು, ಜ.5: ಆಟೋರಿಕ್ಷಾಗಳಿಗೆ ತುಂಬುವ ಎಲ್ ಪಿಜಿ ಗ್ಯಾಸ್ ದರ ಹೆಚ್ಚಳ ಖಂಡಿಸಿ ಜ.5 ರ ಮಧ್ಯರಾತ್ರಿಯಿಂದ ಜ.6ರ ಮಧ್ಯರಾತ್ರಿ ತನಕ 24 ಗಂಟೆಗಳ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಆಟೋ ರಿಕ್ಷಾ ಚಾಲಕರ ಸಂಘಟನೆ ಗಳ ಐಕ್ಯ ಹೋರಾಟ ಸಮಿತಿ ತಿಳಿಸಿದೆ.
ಶನಿವಾರ ನಗರದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆದರ್ಶ ಆಟೊ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಎಂ.ಮಂಜುನಾಥ್, ಬೆಂಗಳೂರು ನಗರದಲ್ಲಿ ಸುಮಾರು ಒಂದು ಲಕ್ಷ ಆಟೊರಿಕ್ಷಾಗಳಿದ್ದು, ನಾವು ಆಟೋಗಳನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಅಟೋಗ್ಯಾಸ್ ಬೆಲೆ ಏರಿಕೆ ಅವೈಜ್ಞಾನಿಕವಾಗಿದ್ದು, ಆಟೋ ಚಾಲಕರ ದೈನಂದಿನ ಹೊಟ್ಟೆಪಾಡಿಗೆ ಮಾರಕವಾಗಿದೆ ಎಂದರು.
ಕೇಂದ್ರ ಸರ್ಕಾರ ದಿಢೀರನೆ 54.58ರೂ. ಇದ್ದ ಎಲ್ ಪಿಜಿ ಗ್ಯಾಸಿನ ಬೆಲೆಯನ್ನು 11.14 ರೂ. ಹೆಚ್ಚಳ ಮಾಡಿದೆ. ಪ್ರಸ್ತುತ ದರ 65.58ರೂ. ಜಾಸ್ತಿಯಾಗಿದೆ. ಬೆಲೆ ಏರಿಕೆಯಿಂದ ಜೀವನೋಪಾಯ ಕಷ್ಟವಾಗಿದ್ದು, ಸರ್ಕಾರ ಕೂಡಲೇ ಗ್ಯಾಸ್ ದರ ಇಳಿಸ ಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಮಂಜುನಾಥ್ ತಿಳಿಸಿದರು.

ಕಳೆದ ಡಿ.20 ರಂದು ಆಟೊ ಮೀಟರ್ ದರ ಪರಿಷ್ಕರಣೆಯಾಗಿತ್ತು. ಅದರ ಬೆನ್ನಲ್ಲೆ ಗ್ಯಾಸ್ ಬೆಲೆ ಏರಿಸಿರುವುದು ಅಮಾನವೀಯ ಕ್ರಮವಾಗಿದೆ. ಆದ್ದರಿಂದ ರವಿವಾರ ಮಧ್ಯ ರಾತ್ರಿಯಿಂದ ಸೋಮವಾರ ಮಧ್ಯರಾತ್ರಿಯ ವರೆಗೆ ಒಂದು ದಿನದ ಆಟೊರಿಕ್ಷಾ ಮುಷ್ಕರ ಹಮ್ಮಿಕೊಂಡಿದ್ದೇವೆ. ಅಂದು ಯಾವುದೇ ಆಟೊಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಹೇಳಿದರು.
ಬೇಡಿಕೆಗಳೇನು?: ಆಟೋ ಗ್ಯಾಸ್ ಬೆಲೆ ನಿಯಂತ್ರಣಗೊಳಿಸಿ ರಾಜ್ಯ ಸರಕಾರ ವಿಸುವ ಸೆಸ್ ಕಡಿಮೆ ಮಾಡಬೇಕು. ಆರ್ ಟಿಒ ಪೊಲೀಸರು ಆಟೋಗಳ ಮೇಲೆ ದಾಖಲಿಸಿರುವ ಕೇಸ್ ಗಳನ್ನು ರದ್ದುಪಡಿಸಬೇಕು. ಎಲ್ಲ ಆಟೋಚಾಲಕರಿಗೆ ಬಿಡಿಎ ಮತ್ತು ಹೌಸಿಂಗ್ ಬೋರ್ಡ್ ನಿಂದ ಮನೆ ನೀಡುವ ಯೋಜನೆ ರೂಪಿಸಬೇಕು.[ಜ.11ರಿಂದ ಲಾರಿ ಮುಷ್ಕರ]
ಎರಡು ಸ್ಟ್ರೋಕ್ ಆಟೊಗಳಿಗೆ ಡಿಜಿಟಲ್ ಮೀಟರ್ ಉಚಿತವಾಗಿ ನೀಡಬೇಕು. ಮತ್ತು ಹಳೆ ಆಟೋಗಳ ಬದಲಿಗೆ ಹೊಸ ಆಟೋರಿಕ್ಷಾ ಕೊಳ್ಳಲು 30 ಸಾವಿರ ರೂ. ಸಹಾಯ ಧನ ನೀಡಬೇಕು. ನಿರುದ್ಯೋಗಿ ಅಲ್ಪ ಸಂಖ್ಯಾತ, ಹಿಂದುಳಿದ ವರ್ಗಗಳ ಯುವಕರಿಗೆ ಆಟೊ ಕೊಳ್ಳಲು ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಸಾಲ ಸೌಲಭ್ಯ ನೀಡಬೇಕೆಂದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ, ಎಚ್.ಆನಂದ್, ಎ.ಎಸ್.ಟಿ.ಅರಸು, ಜಯರಾಮ್, ಜವರೇಗೌಡ, ಸಿ.ಟಿ.ಲೋಕೇಶ್, ಎನ್.ಮಾಯಾಲಗು, ಜಿ.ಎಸ್. ಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.












Click it and Unblock the Notifications