ಎಟಿಎಂ ಸೆಕ್ಯೂರಿಟಿ ಗಾರ್ಡ್ ಕೊಲೆ, ಇಬ್ಬರ ಬಂಧನ
ಸೋಮವಾರ ಮುಂಜಾನೆ 3.30ರ ಸುಮಾರಿಗೆ ಮಹದೇವಪುರ ರಿಂಗ್ ರಸ್ತೆಯ ದೊಡ್ಡನಕ್ಕುಂದಿ ಬಳಿಯ ಭಗಿನಿ ಹೋಟೆಲ್ ಸಮೀಪದಲ್ಲಿರುವ ಐಡಿಬಿಐ ಬ್ಯಾಂಕ್ನ ಎಟಿಎಂಗೆ ನುಗ್ಗಿದ ದುಷ್ಕರ್ಮಿಗಳು ಸೆಕ್ಯೂರಿಟಿ ಗಾರ್ಡ್ ಹರಿಶಂಕರ್ ಶರ್ಮಾ (23) ಮೇಲೆ ರಾಡ್ನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಮಹದೇವಪುರ ಪೊಲೀಸರು, ಸೋಮವಾರ ರಾತ್ರಿ ಅಸ್ಸಾಂ ಮೂಲದ ಜಿಂಟು ದೇವನಾಥ್ (21) ಹಾಗೂ ನಭೋಕೌರ್ (19) ಅವರನ್ನು ಬಂಧಿಸಿದ್ದಾರೆ. ಕೊಲೆಯಾದ ಸ್ಥಳದಲ್ಲಿ ದೊರಕಿದ ಪರ್ಸ್ ಸಹಾಯದಿಂದಾಗಿ, ಆರೋಪಿಗಳನ್ನು ಶೀಘ್ರವೇ ಬಂಧಿಸಲು ಸಾಧ್ಯವಾಗಿದ್ದು, ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಎಡಿಎಂ ಸೆಕ್ಯುರಿಟಿಗಾರ್ಡ್ ಹರಿಶಂಕರ್ ಶರ್ಮಾ ಅವರನ್ನು ಕೊಲೆ ಮಾಡಿದ್ದರೂ, ಎಟಿಎಂನಿಂದ ಹಣ ದೋಚಲು ಆರೋಪಿಗಳು ವಿಫಲರಾಗಿದ್ದರು. ಆರೋಪಿಗಳು ಎಟಿಎಂ ಧ್ವಂಸಗೊಳಿಸುತ್ತಿದ್ದಂತೆ, ಎಟಿಎಂ ಕೇಂದ್ರದಲ್ಲಿ ದರೋಡೆ ಯತ್ನ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂದಿತ್ತು. ತಕ್ಷಣ ಮಹದೇವಪುರ ಠಾಣೆ ಪೇದೆಗಳಾದ ಪೇದೆಗಳು ಸ್ಥಳಕ್ಕೆ ಆಗಮಿಸಿದ್ದರು.
ಆದರೆ, ಸ್ಥಳಕ್ಕೆ ಆಗಮಿಸಿದ ಪೇದೆಗಳಿಂದ ತಪ್ಪಿಸಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಅವರು ಕಪ್ಪು ಬಣ್ಣದ ಉಡುಪು ಧರಿಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಎಟಿಎಂ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. 24 ತಾಸಿಗೂ ಮೊದಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. (ಎಟಿಎಂ ಭದ್ರತಾ ಸಿಬ್ಬಂದಿ ಕೊಲೆ)
ಪರ್ಸ್ ಕೊಟ್ಟ ಸುಳಿವು : ಸೆಕ್ಯೂರಿಟಿ ಗಾರ್ಡ್ ಕೊಲೆ ಮಾಡಿ, ಎಟಿಎಂ ಒಡೆದು ಪರಾರಿಯಾಗುವ ಹೊತ್ತಿನಲ್ಲಿ ಬಂಧಿತ ಆರೋಪಿ ಜಿಂಟು ದೇವನಾಥ್ ಅವರ ಪರ್ಸ್ ಎಟಿಎಂ ಕೇಂದ್ರದ ಬಳಿ ಬಿದ್ದು ಹೋಗಿತ್ತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅದನ್ನು ವಶಪಡಿಸಿಕೊಂಡಾಗ, ಅದರಲ್ಲಿ ಎಟಿಎಂ ಕಾರ್ಡ್ ಸೇರಿದಂತೆ ಇತರ ದಾಖಲೆಗಳು ಲಭ್ಯವಾಗಿದ್ದವು. ಅವುಗಳ ವಿವಿರ ಕಲೆ ಹಾಕಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಎಟಿಎಂ ಕೇಂದ್ರಕ್ಕೆ ನುಗ್ಗಿ ಹಣ ದರೋಡೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಸೆಕ್ಯುರಿಟಿಗಾರ್ಡ್ನನ್ನು ಕೊಲೆ ಮಾಡಿರುವ ಪ್ರಕರಣಗಳು ವಿರಳ. 2012 ರಲ್ಲಿ ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಬ್ಯಾಂಕ್ವೊಂದರ ಎಟಿಎಂ ಕೇಂದ್ರದಲ್ಲಿ ಕಳವಿಗೆ ಬಂದವರು, ವೃದ್ಧ ಸೆಕ್ಯುರಿಟಿಗಾರ್ಡ್ನನ್ನು ಕೊಲೆ ಮಾಡಿ ಹಣ ಕಳವು ಮಾಡಲು ವಿಫಲಯತ್ನ ನಡೆಸಿದ್ದರು.