99 ಲಕ್ಷ ಹಣದೊಂದಿಗೆ ಎಟಿಎಂಗೆ ವಾಹನದ ಚಾಲಕ ಪರಾರಿ
ಬೆಂಗಳೂರು, ಸೆಪ್ಟೆಂಬರ್ 29: ಎಟಿಎಂಗೆ ಹಣ ತುಂಬುವ ವಾಹನದ ಚಾಲಕ ಮತ್ತು ಸಿಬ್ಬಂದಿ ಎಟಿಎಂಗೆ ತುಂಬಿಸಲೆಂದು ತಂದಿದ್ದ 99 ಲಕ್ಷ ನಗದು ಹಣದೊಂದಿಗೆ ಪರಾರಿ ಆಗಿದ್ದಾರೆ.
ಐಸಿಐಸಿಐ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬುವ ಏಜೆನ್ಸಿಯ ವಾಹನದ ಚಾಲಕ ಮಂಡ್ಯದ ಮೂಲದ ಪವನ್, ಸೆಕ್ಯುರಿಟಿ ಸಿಬ್ಬಂದಿ ರೆಡ್ಡಿಬಾಬು, ದಯಾನಂದ್ ಹೀಗೆ ಪರಾರಿ ಆಗಿದ್ದು, ಎಟಿಎಂ ವಾಹನದಲ್ಲಿ ಬರೋಬ್ಬರಿ 99.14 ಲಕ್ಷ ಹಣವಿತ್ತೆಂದು ಸಂಸ್ಥೆಯು ಪೊಲೀಸರು ಹೇಳಿದೆ.
ಶುಕ್ರವಾರ ಸಂಜೆ ಐಸಿಐಸಿಐ ಬ್ಯಾಂಕ್ ಶಾಖೆಯೊಂದರ ಕ್ಯಾಶಿಯರ್ ಆನಂದ್ ಎಂಬುವರು ಎಟಿಎಂಗೆ ಹಣ ತುಂಬುವ ರೈಟರ್ಸ್ ಎಂಬ ಏಜೆನ್ಸಿ ವಾಹನದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಮೊತ್ತವನ್ನು ಟ್ರಂಕುಗಳಲ್ಲಿಟ್ಟುಕೊಂಡು ವಿವಿಧ ಎಟಿಎಂಗಳಿಗೆ ಹಣ ತುಂಬಿ ನಂತರ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿರುವ ಐಸಿಐಸಿಐ ಎಟಿಎಂಗೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ಏಜೆನ್ಸಿ ವಾಹನದ ಚಾಲಕ ಮಂಡ್ಯದ ಮೂಲದ ಪವನ್, ಸಿಬ್ಬಂದಿಗಳಾದ ರೆಡ್ಡಿಬಾಬು, ದಯಾನಂದ್, ಮುಖೇಶ್ ಸೇರಿಕೊಂಡು ಆನಂದ್ ಮೇಲೆ ಹಲ್ಲೆ ನಡೆಸಿ 20 ಲಕ್ಷ ಹಣವಿದ್ದ ಬಾಕ್ಸನ್ನು ಮಾತ್ರ ಸ್ಥಳದಲ್ಲೇ ಬಿಟ್ಟು ಉಳಿದ 99,14,800 ಹಣವಿದ್ದ ಟ್ರಂಕ್ಗಳೊಂದಿಗೆ ಪರಾರಿಯಾಗಿದ್ದಾರೆ.
ತಕ್ಷಣ ಆನಂದ್ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ವೈರ್ಲೆಸ್ ಮೂಲಕ ಎಲ್ಲಾ ಕಡೆ ಮಾಹಿತಿ ರವಾನೆ ಮಾಡಿ ನಾಕಾಬಂದಿ ಹಾಕಿ ತಪಾಸಣೆ ನಡೆಸುತ್ತಿದ್ದಾಗ ರೆಡ್ಡಿಬಾಬು, ದಯಾನಂದ್, ಮುಖೇಶ್ ವಾಹನದಿಂದ ಇಳಿದು ಪರಾರಿಯಾಗಲು ಯತ್ನಿಸಿದಾಗ ಬೆನ್ನಟ್ಟಿ ಹಿಡಿದಿದ್ದಾರೆ.
ವಾಹನದ ಚಾಲಕ ಪವನ್ ಹಣ ಸಮೇತ ವಾಹನದೊಂದಿಗೆ ಪರಾರಿಯಾಗಿದ್ದು, ಈ ನಡುವೆ ಎಚ್ಆರ್ಬಿಆರ್ ಲೇಔಟ್ನಲ್ಲಿ ವಾಹನ ಮಾತ್ರ ಪತ್ತೆಯಾಗಿದೆ. ಬಾಣಸವಾಡಿ ಠಾಣೆ ಪೋಲೀಸರು ಆರೋಪಿ ಪವನ್ಗಾಗಿ ಶೋಧ ಕೈಗೊಂಡಿದ್ದಾರೆ.












Click it and Unblock the Notifications