ವಿದ್ಯುತ್ ಕಂಬ ಸ್ಥಳಾಂತರಿಸಲು ಲಂಚ ಕೇಳಿ ಸಿಕ್ಕಿಬಿದ್ದ
ಬೆಂಗಳೂರು, ಫೆಬ್ರವರಿ 16 : ವಿದ್ಯುತ್ ಕಂಬ ಸ್ಥಳಾಂತರಿಸಲು 2 ಲಕ್ಷ ರು. ಲಂಚ ಕೇಳಿ, ಮೊದಲ ಕಂತಾಗಿ 75 ಸಾವಿರ ರು. ಇಸಿದುಕೊಳ್ಳುವಾಗ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಸಹಾಯಕ ಇಂಜಿನಿಯರು ಗುರುವಾರ ಸಿಕ್ಕಿಬಿದ್ದಿದ್ದಾರೆ.
2 ಲಕ್ಷ ರು. ಲಂಚಕ್ಕೆ ಮಾರತಹಳ್ಳಿ ಬೆಸ್ಕಾಂನಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ಶ್ರೀಮಾನ್ ನಾಗರಾಜ್ ಎನ್ ಅವರು ವಿದ್ಯುತ್ ಗುತ್ತಿಗೆದಾರರಿಂದ ಬೇಡಿಕೆ ಇಟ್ಟಿದ್ದರು. ನಂದರ ಒಂದೂ ಮುಕ್ಕಾಲು ಲಕ್ಷಕ್ಕೆ ಡೀಲ್ ಮಾಡಿಕೊಂಡು, ಮೊದಲ ಕಂತಾಗಿ 75 ಸಾವಿರಕ್ಕೆ ಕೈಚಾಚಿದಾಗ ರೆಡ್ ಹ್ಯಾಂಡಾಗಿ ಸಿಗ್ಹಾಕ್ಕಿಕೊಂಡಿದ್ದಾರೆ.
ವಿದ್ಯುತ್ ಗುತ್ತಿಗೆದಾರರೊಬ್ಬರು ಮಾರತಹಳ್ಳಿಯ ಆನಂದನಗರದಲ್ಲಿರುವ ತಾವು ಗುತ್ತಿಗೆ ಪಡಿದಿರುವ ನಿವೇಶನದ ಮುಂಭಾಗದಲ್ಲಿ ವಿದ್ಯುತ್ ಕಂಬ ಸ್ಥಳಾಂತರಿಸಬೇಕೆಂದು ಅರ್ಜಿ ಹಾಕಿದ್ದರು. ಈ ಅರ್ಜಿ ನಾಗರಾಜ್ ಅವರ ಬಳಿ ಬಂದಿದೆ. [ತರಕಾರಿ ಸರಬರಾಜಿಗೆ ಲಂಚ ಕೇಳಿದ ಸುಬ್ರಮಣ್ಯ ಎಸಿಬಿ ಬಲೆಗೆ]

ಮಾರತಹಳ್ಳಿ ಬೆಸ್ಕಾಂನ ಎಸ್ 7 ಉಪವಿಭಾಗದ ಸಹಾಯಕ ಇಂಜಿನಿಯರ್ ನಾಗರಾಜ್ ಅವರು, ವಿದ್ಯುತ್ ಕಂಬ ಸ್ಥಳಾಂತರಿಸಬೇಕಿದ್ದರೆ 2 ಲಕ್ಷ ರುಪಾಯಿ ಲಂಚ ನೀಡಲೇಬೇಕೆಂದು ಒತ್ತಾಯಿಸಿದ್ದಾರೆ. ಕಡೆಗೆ ಒಂದೂ ಮುಕ್ಕಾಲು ಲಕ್ಷಕ್ಕೆ ಡೀಲ್ ಕುದುರಿದೆ.
ವಿದ್ಯುತ್ ಗುತ್ತಿಗೆದಾರರು ನೇರವಾಗಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. ಭ್ರಷ್ಟ ಅಧಿಕಾರಿ ನಾಗರಾಜ್ ಅವರನ್ನು ಬಲೆಗೆ ಬೀಳಿಸಲು ಭ್ರಷ್ಟಾಚಾರ ನಿಗ್ರಹ ದಳ ತಂತ್ರ ಹೂಡಿದೆ. ಇದರ ಭಾಗವಾಗಿ ವಿದ್ಯುತ್ ಗುತ್ತಿಗೆದಾರರು ನಾಗರಾಜ್ ಅವರಿಗೆ 75 ಸಾವಿರ ರುಪಾಯಿ ನೀಡುವಾಗ ನಾಗರಾಜ್ ಅವರು ಬಲೆಗೆ ಬಿದ್ದಿದ್ದಾರೆ.
ನಾಗರಾಜ್ ಅವರನ್ನು ದಸ್ತಗಿರಿ ಮಾಡಲಾಗಿದೆ. ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ-1988ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ಎಸಿಬಿ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಸಲಾಗುತ್ತಿದೆ. [ನರೇಂದ್ರ ಮೋದಿ 'ಬಚ್ಚಲು' ಮಾತು : ಸೇರಿಗೆ ಸವ್ವಾಸೇರು]












Click it and Unblock the Notifications