ಬೆಂಗಳೂರಲ್ಲಿ ಅರುಣಾಚಲದ ಯುವಕನ ಮೇಲೆ ತೀವ್ರ ಹಲ್ಲೆ
ಬೆಂಗಳೂರು, ಜನವರಿ 11 : ಅರುಣಾಚಲ ಪ್ರದೇಶ ಮೂಲದ ತೀವ್ರವಾಗಿ ಗಾಯಗೊಂಡಿರುವ 22 ವರ್ಷದ ಯುವಕನನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ಕೋರಮಂಗಲದ ಪಬ್ ಬಳಿಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದದ್ದ.
ಆಲ್ ಅರುಣಾಚಲ ಸ್ಟುಡೆಂಟ್ಸ್ ಯೂನಿಯನ್ ಅಸೋಸಿಯೇಷನ್ ಆಫ್ ಕರ್ನಾಟಕ (AASUAK) ಈ ಬಗ್ಗೆ ದೂರು ದಾಖಲಿಸಿದ್ದು, ಆತನ ಮೇಲೆ ಜನಾಂಗೀಯ ಹಲ್ಲೆಯಾಗಿದೆ ಎಂದು ಆರೋಪಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಖುವಾಡುನ್ ಖನ್ಘಮ್ ಎಂಬ ಆ ಯುವಕ ಅಧ್ಯಯನ ಮಾಡುತ್ತಲೇ ಕೋರಮಂಗಲದ ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆ ಬಾರ್ ನಿಂದ 1 ಕಿ.ಮೀ. ದೂರದಲ್ಲಿ ಆತ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ. ಆತನನ್ನು ನಿಮ್ಹಾನ್ಸ್ ಗೆ ಸೇರಿಸಲಾಗಿದ್ದು, ಆತ ಕೋಮಾವಸ್ಥೆಯಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
"ಖುವಾಡುನ್ ಫೋನ್ ಗೆ ಆತನ ರೂಂಮೇಟ್ ಕರೆ ಮಾಡಿದರೂ ಆತ ತೆಗೆದುಕೊಂಡಿಲ್ಲ. ಶನಿವಾರ ರಾತ್ರಿ 1 ಗಂಟೆಗೆ ಪೊಲೀಸರು ಆ ಕರೆ ಸ್ವೀಕರಿಸಿದ ನಂತರವೇ ಈ ಘಟನೆ ಬೆಳಕಿಗೆ ಬಂದಿದೆ. ಆತ ಯಾವ ಅಪಘಾತದಲ್ಲೂ ಗಾಯಗೊಂಡಿಲ್ಲ. ಆತನ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ" ಎಂದು ಸ್ಟುಡೆಂಟ್ಸ್ ಯೂನಿಯನ್ ದೂರಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸೋಮವಾರ ಅಧಿಕೃತವಾಗಿ ದೂರು ದಾಖಲಿಸಲಾಗಿದ್ದು, ಈ ಕೃತ್ಯವನ್ನು ಖಂಡಿಸಿ ನಗರದಲ್ಲಿ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲು ಅರುಣಾಚಲ ಸ್ಟುಡೆಂಟ್ಸ್ ಯೂನಿಯನ್ ಯೋಜನೆ ಹಾಕಿಕೊಂಡಿದೆ.
ನಾವು ಸ್ವಲ್ಪ ವಿಭಿನ್ನವಾಗಿ ಕಂಡರೆ ನಾವೇನು ಚೀನಾದವರೂ ಅಲ್ಲ ಜಪಾನ್ ದವರೂ ಅಲ್ಲ. ನಾವು ಕೂಡ ಭಾರತೀಯರು. ಇಲ್ಲಿ ಭದ್ರತೆ ಒದಗಿಸುವಂತೆ ಅರುಣಾಚಲಪ್ರದೇಶದ ಶಾಸಕರು ಮತ್ತು ಬೆಂಗಳೂರಿನ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ್ದೇವೆ ಎಂದು ಟೋಕೋ ಜಾನ್ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆ 326ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಗಾಯಾಳುವಿಗೆ ಪ್ರಜ್ಞೆ ಬಂದ ಬಳಿಕ ಆತನಿಂದ ಹೇಳಿಕೆ ಪಡೆದು ಇನ್ನಷ್ಟು ಸೆಕ್ಷನ್ ಅಡಿಗಳಲ್ಲಿ ದೂರು ದಾಖಲಿಸಿಕೊಳ್ಳುವುದಾಗಿ ಬೆಂಗಳೂರು ಆಗ್ನೇಯ ಡಿಸಿಪಿ ಬಿ ಬೋರಲಿಂಗಯ್ಯ ಅವರು ಹೇಳಿದ್ದಾರೆ.
ಅಲ್ಲದೆ, ಖುವಾಡುನ್ ಕೋಮಾದಲ್ಲಿರುವುದರಿಂದ ಯಾವ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಪೊಲೀಸರು ಸಿಸಿಟಿವಿ ಕ್ಯಾಮೆರಾ ಫುಟೇಜನ್ನು ಕೂಡ ತರಿಸಿಕೊಂಡಿದ್ದು ಅದನ್ನು ಪರಿಶೀಲಿಸುತ್ತಿದ್ದಾರೆ. ಹಾಗೆಯೆ, ಕೆಲ ಸಂಬಂಧಿಸಿದ ವ್ಯಕ್ತಿಗಳ ವಿಚಾರಣೆಯಲ್ಲೂ ತೊಡಗಿದ್ದಾರೆ.












Click it and Unblock the Notifications