ಜಯನಗರದ ಸಹನಾ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು!
ಬೆಂಗಳೂರು, ಜೂನ್ 26 : ಬೆಂಗಳೂರಿನ ಜಯನಗರದಲ್ಲಿ ನಡೆದ ಸಹನಾ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಸಹನಾ ಹತ್ಯೆ ಮಾಡಿದ ಪತಿ ಗಣೇಶ್ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪ್ರಕರಣದ ವಿವರವನ್ನು ಆತ ನೀಡಿದ್ದಾನೆ.
ಜೂನ್ 21ರಂದು ಜಯನಗರದಲ್ಲಿ ಉದ್ಯಮಿ ಗಣೇಶ್ ಪತ್ನಿ ಸಹನಾಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದ. ಜೂನ್ 22ರಂದು ಕನಕಪುರ ರಸ್ತೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಮಕ್ಕಳ ಮೇಲೆಯೂ ಗುಂಡು ಹಾರಿಸಿದ್ದ.
ಕೌಟುಂಬಿಕ ಕಲಹ, ವ್ಯಾಪಾರದಲ್ಲಿ ಉಂಟಾದ ನಷ್ಟದಿಂದಾಗಿ ಗಣೇಶ್ ಸಹನಾಳನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎಂದು ಮೊದಲು ತಿಳಿದುಬಂದಿತ್ತು. ಆದರೆ, ಈಗ ಪೊಲೀಸರ ವಶದಲ್ಲಿರುವ ಆರೋಪಿ ಮತ್ತಷ್ಟು ಸ್ಫೋಟಕ ಹೇಳಿಕೆಗಳನ್ನು ನೀಡುತ್ತಿದ್ದಾನೆ.

ಜೂನ್ 21ರಂದು ಗಣೇಶ್, ಸಹನಾ ನಡುವೆ ಜಗಳ ನಡೆದಿತ್ತು. ಆಗ ಸಹನಾ 'ಕೋಟಿ-ಕೋಟಿ ಸಾಲ ಮಾಡಿ ಬದುಕೋದು ಕಷ್ಟ. ಮರ್ಯಾದೆ ಬಿಟ್ಟು ಬದುಕುವುದಕ್ಕಿಂತ ಒಟ್ಟಿಗೆ ಸಾಯೋಣ' ಎಂದು ಹೇಳಿದ್ದಳು ಎಂದು ಗಣೇಶ್ ಹೇಳಿದ್ದಾನೆ.
'ತನ್ನನ್ನು ಗುಂಡಿಟ್ಟು ಕೊಂದು ಬಿಡಿ ಎಂದು ಸಹನಾ ಪದೇ-ಪದೇ ಹೇಳಿದ್ದಳು. ಬದುಕುವುದು ಕಷ್ಟವಾಗಿದೆ. ಒಟ್ಟಿಗೆ ಸಾಯೋಣ ಎಂದು ಆಕೆ ಹೇಳಿದ್ದಳು. ಸಹನಾ ಹೇಳಿದ ಮೇಲೆಯೇ ಆಕೆಯ ಮೇಲೆ ಗುಂಡು ಹಾರಿಸಿದೆ' ಎಂದು ಗಣೇಶ್ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
55 ಕೋಟಿ ಸಾಲ : ಗಣೇಶ್ ಮೂಲತಃ ಸಕಲೇಶಪುರದವರು. ಕನಕಪುರ ರಸ್ತೆಯಲ್ಲಿ ಹರ್ಬಲ್ ವುಡ್ ಫಾರ್ಮ್ ಹೌಸ್ ಎಂಬ ರೆಸಾರ್ಟ್ ಹೊಂದಿದ್ದಾರೆ. ಕಳೆದ 2 ವರ್ಷದಿಂದ ರೆಸಾರ್ಟ್ ನಷ್ಟದಲ್ಲಿತ್ತು. ಆದ್ದರಿಂದ ಸುಮಾರು 55 ಕೋಟಿ ಸಾಲ ಮಾಡಿದ್ದರು.
ಜಯನಗರದ ಮನೆ ಮಾರಿ ಸಾಲ ತೀರಿಸಲು ಗಣೇಶ್ ಮುಂದಾಗಿದ್ದರು. ಆದರೆ, ಮನೆ ಮಾರಲು ಸಹನಾ ಒಪ್ಪಿರಲಿಲ್ಲ. ಸಾಲ ಮಾಡಿ ಬದುಕೋದು ಕಷ್ಟ, ಒಟ್ಟಿಗೆ ಸಾಯೋಣ ಎಂದು ಸಹನಾ ಸಲಹೆ ನೀಡಿದ್ದರು. ಆದರೆ, ಗುಂಡೇಟು ತಿಂದ ಅವರು ಸಾವನ್ನಪ್ಪಿದ್ದಾರೆ.
ಜೂನ್ 22ರಂದು ಗಣೇಶ್ ಬಂಧಿಸಲು ಪೊಲೀಸರು ಮುಂದಾದಾಗ ಇಬ್ಬರು ಮಕ್ಕಳ ಮೇಲೂ ಗುಂಡು ಹಾರಿಸಿದ್ದರು. ತಾವು ಶೂಟ್ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದರು. ಆದರೆ, ಪೊಲೀಸರು ಆ ಪ್ರಯತ್ನವನ್ನು ವಿಫಲಗೊಳಿಸಿದ್ದರು.











Click it and Unblock the Notifications