ಜೈಲು ಅಕ್ರಮ ಬಯಲಿಗೆಳೆದ ಮತ್ತೊಂದು ಸ್ಫೋಟಕ ಪತ್ರ
ಬೆಂಗಳೂರು, ಜುಲೈ 25 : ಬೆಂಗಳೂರಿನಲ್ಲಿರುವ ಕುಪ್ರಸಿದ್ಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿರುವ, ನಡೆಯುತ್ತಿರುವ ಭ್ರಷ್ಟಾಚಾರದ ಪ್ರಕರಣ ಇದೀಗ ಮತ್ತೊಂದು ರೋಚಕ ತಿರುವನ್ನು ಪಡೆಯುವ ಹಂತಕ್ಕೆ ತಲುಪಿದೆ.
ಪರಪ್ಪನ ಅಗ್ರಹಾರದಲ್ಲಿರುವ ಅನಾಮಧೇಯ ಸಿಬ್ಬಂದಿಯೊಬ್ಬರು ಎಡಿಜಿಪಿ ಮೇಘರಿಕ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಶಶಿಕಲಾ ನಟರಾಜನ್ ಮಾತ್ರವಲ್ಲ, ಇನ್ನೂ ಹಲವಾರು ಕುಖ್ಯಾತ ಕ್ರಿಮಿನಲ್ ಗಳು ಜೈಲಿನಲ್ಲಿ ಬಿಂದಾಸ್ ಆಗಿ ರಾಜಾತಿಥ್ಯ ಪಡೆದುಕೊಳ್ಳುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಅಲ್ಲಿಗೆ, ಕೋಟಿಗಟ್ಟಲೆ ಅಕ್ರಮ ಆಸ್ತಿ ಗಳಿಸಿ ಸಿಕ್ಕಿಬಿದ್ದು, ಪರಪ್ಪನ ಅಗ್ರಹಾರದಲ್ಲಿ 'ಮೃಷ್ಟಾನ್ನ' ಭೋಜನ ಮಾಡುತ್ತಿರುವ ಶಶಿಕಲಾ ನಟರಾಜನ್ ಅವರು ವಿಶೇಷ ಸವಲತ್ತು ಪಡೆದುಕೊಳ್ಳಲು ಜೈಲಧಿಕಾರಿಗಳಿಗೆ 2 ಕೋಟಿ ರುಪಾಯಿ ಲಂಚ ನೀಡಿದ್ದಾರೆ ಎಂದು ಐಪಿಎಸ್ ಅಧಿಕಾರಿ ರೂಪ್ ಡಿ ಮೌದ್ಗೀಗ್ ಅವರು ಮಾಡಿದ್ದ ಆರೋಪಕ್ಕೆ ಭಾರೀ ಬಲ ಬಂದಂತಾಗಿದೆ.
ಶಶಿಕಲಾ ಅವರ ಹೊರತಾಗಿ ಜೈಲಲ್ಲಿ ವಿಶೇಷ ಸವಲತ್ತು ಪಡೆದುಕೊಳ್ಳುತ್ತಿರುವವರು, ಜಂತಕಲ್ ಅಕ್ರಮ ಗಣಿಗಾರಿಕೆಯಲ್ಲಿ ಸಿಕ್ಕಿಬಿದ್ದಿರುವ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ, 5 ಕೋಟಿ ಹಳೆ ಹಣ ಬದಲಾವಣೆ ಮಾಡುವಾಗ ಸಿಕ್ಕಿಬಿದ್ದಿರುವ ಹೆದ್ದಾರಿ ಅಭಿವೃದ್ಧಿ ಯೋಜನೆಯ ಸಿಪಿಓ ಎಸ್ಸಿ ಜಯಚಂದ್ರ, ಡ್ರೀಮ್ಜ್ ಇನ್ಫ್ರಾ ಪ್ರಾಜೆಕ್ಟಿನಲ್ಲಿ ಸಿಕ್ಕಿಬಿದ್ದಿರುವ ಕುಖ್ಯಾತ ದಂಪತಿಗಳಾದ ಸಚಿನ್ ನಾಯಕ್ ಮತ್ತು ದಿಶಾ ಚೌಧರಿ. ಆ ಪತ್ರದಲ್ಲಿನ ವಿವರಗಳು ಮುಂದಿನಂತಿವೆ. ಅದರಲ್ಲಿನ ವಿವರಗಳನ್ನು ದಿ ನ್ಯೂಸ್ ಮಿನಿಟ್ ಪ್ರಕಟಿಸಿದೆ.

ಎಐಎಡಿಎಂಕೆ ಮತ್ತು ಜೈಲಧಿಕಾರಿಗಳ ನಡುವಿನ ಸೇತುವೆ
ಶಶಿಕಲಾಗೆ ಮತ್ತಿತರ ಕುಖ್ಯಾತರಿಗೆ ಬೇಕಾದ್ದಂಥ ವಿಶೇಷ ಸವಲತ್ತುಗಳನ್ನು ದೊರಕಿಸಿಕೊಡಲು ಎಐಎಡಿಎಂಕೆ ಪುಢಾರಿಗಳು ಮತ್ತು ಕಳಂಕಿತ ಜೈಲಧಿಕಾರಿಗಳ ನಡುವೆ ಸೇತುವೆಯಂತೆ ಕೆಲಸ ಮಾಡುತ್ತಿರುವುದು ಕರ್ನಾಟಕ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಗೆ ಸೇರಿದ ಸಬ್ ಇನ್ಸ್ಪೆಕ್ಟರ್ ಗಜರಾಜ್ ಮಾಕನೂರ್ ಎಂದು ಅನಾಮಧೇಯ ವ್ಯಕ್ತಿ ತಿಳಿಸಿದ್ದಾರೆ.

ಗಂಟೆಗಟ್ಟಲೆ ಭೇಟಿಯಾದರೂ ನೋಂದಣಿಯಿಲ್ಲ
ಟಿಟಿವಿ ದಿನಕರನ್ ಸೇರಿದಂತೆ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದ ಎಐಎಡಿಎಂಕೆ ರಾಜಕಾರಣಿಗಳು ಶಶಿಕಲಾರನ್ನು ಕೋಣೆಯೊಂದರಲ್ಲಿ ಸುಮಾರು 2 ಗಂಟೆಗಳ ಕಾಲ ಭೇಟಿ ಮಾಡಿದರು. ಆದರೆ, ಆಗಮನ ಮತ್ತು ನಿರ್ಗಮನದ ವಿವರ ನೋಂದಾವಣೆಯಾಗಲಾರದಂತೆ ಗಜರಾಜ್ ಮಾಕನೂರ್ ಎಚ್ಚರಿಕೆ ವಹಿಸಿದರು ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಶಶಿಕಲಾರನ್ನು ಪ್ರತಿದಿನ ಭೇಟಿಯಾಗುತ್ತಿದ್ದರು
ಎಐಎಡಿಎಂಕೆಯ ಉಪ ಪ್ರಧಾನ ಕಾರ್ಯದರ್ಶಿ, ಶಶಿಕಲಾರ ಸಹೋದರ ಸಂಬಂಧಿ ಟಿಟಿವಿ ದಿನಕರನ್, ಅಕ್ರಮ ಆಸ್ತಿ ಗಳಿಕೆಯ ಮತ್ತೊಬ್ಬ ಆರೋಪಿ ಇಳವರಸಿಯ ಮಗ ವಿವೇಕ್, ಎಐಎಡಿಎಂಕೆ ಪಕ್ಷದ ಕರ್ನಾಟಕದ ಕಾರ್ಯದರ್ಶಿ ವಿ ಪುಗಳೆಂದಿ ಮತ್ತು ಸಂಧಿಲ್ ಎಂಬುವವರು ಸಂಜೆ 7 ಗಂಟೆಯ ನಂತರ ಪ್ರತಿದಿನವೂ ಶಶಿಕಲಾ ನಟರಾಜನ್ ಅವರನ್ನು ಭೇಟಿಯಾಗುತ್ತಿದ್ದರು. ಶಶಿಕಲಾರನ್ನು ಭೇಟಿಯಾಗಲು 15 ದಿನಗಳಿಗೊಮ್ಮೆ ಅವಕಾಶ ನೀಡಲಾಗುತ್ತಿದೆ ಎಂದು ಡಿಜಿಪಿ ಸತ್ಯನಾರಾಯಣ ರಾವ್ ಅವರು ಹೇಳಿದ್ದಕ್ಕೆ ಇದು ತದ್ವಿರುದ್ಧವಾಗಿದೆ.

ರೂಪಾ ಅವರು ಅಲ್ಲಿಗೆ ಭೇಟಿ ನೀಡಿದ್ದಾಗ...
ಜೈಲಿನಲ್ಲಿ ಗಜರಾಜ್ ಮಾಕನೂರ್ ಅವರಿಗೆ ಪ್ರತ್ಯೇಕ ಕೋಣೆಯಿದೆ. ಅದರಲ್ಲಿ ಶಶಿಕಲಾಗೆ ಪೂರೈಸಲಾಗುವ ತಾಜಾ ತರಕಾರಿ ಮತ್ತಿತರ ವಸ್ತುಗಳನ್ನು ಇರಿಸಲಾಗಿದೆ. ಶಶಿಕಲಾಗೆ ನೀಡಲಾಗಿದ್ದ ವಿಶೇಷ ಅಡುಗೆಮನೆಯಲ್ಲಿ ರೆಫ್ರಿಜರೇಟರ್ ಅನ್ನು ಕೂಡ ನೀಡಲಾಗಿತ್ತು. ಕಾರಾಗೃಹದ ಡಿಐಜಿ ಆಗಿದ್ದಾಗ ರೂಪಾ ಡಿ ಅವರು ಅಲ್ಲಿಗೆ ಭೇಟಿ ನೀಡಿದಾಗ ಗಜರಾಜ್ ಅವರು ಅದನ್ನು ಅಡಗಿಸಿಟ್ಟಿದ್ದರು ಎಂದು ಪತ್ರದಲ್ಲಿ ದೂರಲಾಗಿದೆ.

ಆ್ಯಂಬುಲೆನ್ಸ್ ಮೂಲಕ ಕಳ್ಳದಾರಿಯಿಂದ
ಇದನ್ನೆಲ್ಲ ಸಾಧ್ಯವಾಗಿಸಿದ್ದಕ್ಕಾಗಿ ಗಜರಾಜ್ ಅವರಿಗೆ ಏನೇನು ಸಿಗಬೇಕೋ ಅದೆಲ್ಲವೂ ಸಿಕ್ಕಿದೆ. ಎಲ್ಇಡಿ ಟಿವಿ, ಏರ್ ಕಂಡಿಷನರ್, ದಿನಸಿ ಸೇರಿದಂತೆ ಶಶಿಕಲಾಗೆ ಬೇಕಾದ ವಸ್ತುಗಳನ್ನೆಲ್ಲ ಹೊಸೂರಿನ ಶಾಸಕ ಬಾಲಕೃಷ್ಣ ರೆಡ್ಡಿ ಅವರೇ ಪೂರೈಸುತ್ತಿದ್ದರು. ಜೈಲಿನ ಆ್ಯಂಬುಲೆನ್ಸ್ ಮೂಲಕ ಕಳ್ಳದಾರಿಯಿಂದ ಈ ವಸ್ತುಗಳನ್ನೆಲ್ಲ ಪರಪ್ಪನ ಅಗ್ರಹಾರಕ್ಕೆ ತರಿಸಲಾಗುತ್ತಿತ್ತು ಎಂಬ ಆರೋಪವನ್ನು ಪತ್ರದಲ್ಲಿ ಮಾಡಲಾಗಿದೆ.

ನಿವೇಶನ, ಕಟ್ಟಡ, ಕಾರು ಇತ್ಯಾದಿ
ಇಷ್ಟೆಲ್ಲ ಸವಲತ್ತುಗಳನ್ನು ಶಶಿಕಲಾ ನಟರಾಜನ್ ಗೆ ನೀಡಿದ್ದಕ್ಕಾಗಿ ಕುದುರಿಸಲಾಗಿದ್ದ 2 ಕೋಟಿ ರುಪಾಯಿಯ ಡೀಲ್ ಅನ್ನು ಕೂಡ ಇದೇ ಗಜರಾಜ್ ಅವರ ಮೂಲಕವೇ ಟಿಟಿವಿ ದಿನಕರನ್ ಅವರು ಮಾಡಿದ್ದರು. ಇಷ್ಟೊಂದು ಮುತುವರ್ಜಿಯಿಂದ ವಿಶೇಷ ಸೇವೆ ನೀಡಿದ್ದಕ್ಕೆ ಬನ್ನೇರುಘಟ್ಟ ರಸ್ತೆಯಲ್ಲಿ 30x40 ನಿವೇಶನ, ರಾಣೆಬೆನ್ನೂರಿನಲ್ಲಿ ಎರಡು ಮಜಲಿ ಕಟ್ಟಡ ಮತ್ತೊಂದು ಕಾರನ್ನೂ ಅವರಿಗೆ ನೀಡಲಾಗಿದೆ ಎಂದು ಹೇಳುತ್ತದೆ ಪತ್ರ.

ಏನಂತೀರಿ ಸಿದ್ದರಾಮಯ್ಯನವರೆ?
ಆ ಎರಡು ಕೋಟಿ ಹಣವನ್ನು ಗಜರಾಜ್ ಮತ್ತು ಪ್ರಕಾಶ್ ಎಂಬುವವರ ಸಮ್ಮುಖದಲ್ಲಿ ಟಿಟಿವಿ ದಿನಕರನ್, ಜಿ ಪರಮೇಶ್ವರ ಅವರ ಆಪ್ತರಲ್ಲೊಬ್ಬನಾದ ಕೃಷ್ಣಕುಮಾರ್ ಅವರಿಗೆ ನೀಡಿದರು. ಆ ಹಣವನ್ನು ಕೃಷ್ಣಕುಮಾರ್ ಡಿಜಿಪಿ ಸತ್ಯನಾರಾಯಣ ರಾವ್ ಅವರಿಗೆ ತಲುಪಿಸಿದರು ಎಂಬ ಆರೋಪವನ್ನೂ ಪತ್ರದಲ್ಲಿ ಮಾಡಲಾಗಿದೆ. ಪರಪ್ಪನ ಅಗ್ರಹಾರದಲ್ಲಿ ಇಷ್ಟೊಂದು ಹುಳುಕುಗಳು ಬಯಲಾಗಿವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ. ಈಗ ಯಾರನ್ನು ಮತ್ತೆ ವರ್ಗಾವಣೆ ಮಾಡಿ ಎಲ್ಲಿಗೆ ಕಳುಹಿಸುತ್ತೀರಿ?












Click it and Unblock the Notifications