ಆನೇಕಲ್ ಬಿಜೆಪಿ ನಾಯಕನ ಕೊಲೆ, ಎನ್ಐಎ ತನಿಖೆಗೆ ಶೋಭಾ ಆಗ್ರಹ
ಬೆಂಗಳೂರು, ಜೂನ್ 2: ಆನೇಕಲ್ ನಲ್ಲಿ ಕೊಲೆಗೀಡಾದ ಬಿಜೆಪಿ ಎಸ್ಸಿ/ಎಸ್ಟಿ ಮೋರ್ಚಾ ಉಪಾಧ್ಯಕ್ಷ ಹರೀಶ್ ಕೊಲೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ನಡೆಸುವಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಹರೀಶ್ ಕೊಲೆಯ ಹಿಂದೆ ವೈಯಕ್ತಿಕ ದ್ವೇಷ ಕಾರಣವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಆದರೆ ಇದೊಂದು ವೈಯಕ್ತಿಕ ದ್ವೇಷದ ಕೊಲೆಯಲ್ಲ ಎಂದು ಕುಟುಂಬದವರು ಶಂಕಿಸಿದ್ದಾರೆ. ವಾರದ ಹಿಂದೆಯಷ್ಟೇ ಎಸ್ಸಿ/ಎಸ್ಟಿ ಮೋರ್ಚಾ ಉಪಾಧ್ಯಕ್ಷರಾಗಿ ಹರೀಶ್ ಆಯ್ಕೆಯಾಗಿದ್ದರು. ಹಾಗಾಗಿ ಇದು ರಾಜಕೀಯ ಪ್ರೇರಿತ ಕೊಲೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇನ್ನೊಂದೆಡೆ ಇದೇ ಪ್ರದೇಶದಲ್ಲಿ ಮಾರ್ಚ್ 14ರಂದು ಕಿತಗಾನಹಳ್ಳಿ ವಾಸು ಎಂದು ಜನಪ್ರಿಯರಾಗಿದ್ದ ದಲಿತ ಮುಖಂಡ,ಬಿಜೆಪಿಯ ಸಕ್ರಿಯ ಕಾರ್ಯಕರ್ತ ಶ್ರೀನಿವಾಸ್ ಅವರನ್ನೂ ಹತ್ಯೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಕೊಲೆ ಬಗ್ಗೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ 'ರಾಜ್ಯದಲ್ಲಿ ನಡೆದಿರುವ ಬಿಜೆಪಿ ಕಾರ್ಯಕರ್ತರ ಕೊಲೆಗಳನ್ನು ರಾಷ್ಟ್ರೀಯ ತನಿಖಾ ದಳದಿಂದ ತನಿಖೆಗೊಳಪಡಿಸಬೇಕು,' ಎಂದು ಹೇಳಿದ್ದಾರೆ.
ಈ ಹಿಂದೆ ಶಿವಾಜಿನಗರದಲ್ಲಿ ಹತ್ಯೆಯಾಗಿದ್ದ ಆರ್.ಎಸ್.ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯನ್ನು ಎನ್ಐಎ ತನಿಖೆಗೆ ವಹಿಸಲಾಗಿತ್ತು. ಸದ್ಯ ಎನ್ಐಎ ಈ ಪ್ರಕರಣದಲ್ಲಿ ಜಾರ್ಜ್ ಶೀಟ್ ಕೂಡಾ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications