ಅರಣ್ಯ ಒತ್ತುವರಿ ಆರೋಪ: ಸಚಿವ ಆನಂದ್ ಸಿಂಗ್ ಧಿಮಾಕಿನ ಮಾತು
ಬೆಂಗಳೂರು, ಫೆಬ್ರವರಿ 14: ಮಾಜಿ ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಅರಣ್ಯ ಖಾತೆ ನೀಡಿ ಸಚಿವರನ್ನಾಗಿ ಮಾಡಲಾಗಿದೆ.
ಆದರೆ ಆನಂದ್ ಸಿಂಗ್ ಅವರನ್ನು ಅರಣ್ಯ ಸಚಿವರನ್ನಾಗಿಸಿರುವ ಬಗ್ಗೆ ಹಲವರು ಅಸಮಾಧಾನ ಹೊರಹಾಕಿದ್ದಾರೆ. ಅರಣ್ಯ ಒತ್ತುವರಿ ಆರೋಪವಿರುವ ವ್ಯಕ್ತಿಗೆ ಅರಣ್ಯ ಖಾತೆ ನೀಡಿರುವುದು 'ಕಟುಕನಿಗೆ ಕುರಿ ಕೊಟ್ಟಂತೆ' ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.
ತಮ್ಮ ವಿರುದ್ಧ ವ್ಯಕ್ತವಾಗುತ್ತಿರುವ ಅಸಮಾಧಾನ ಹಾಗೂ ಅರಣ್ಯ ಭೂಮಿ ಒತ್ತುವರಿ ಆರೋಪದ ಬಗ್ಗೆ ಮಾತನಾಡಿರುವ ಆನಂದ್ ಸಿಂಗ್, ಮಾಧ್ಯಮಗಳೆದುರು 'ಧಿಮಾಕಿನ' ಉತ್ತರ ನೀಡಿದ್ದಾರೆ.
'ನಮ್ಮದು ಗಣಿ ಕುಟುಂಬ ಗಣಿ ಕಂಪೆನಿ ಅಂದರೆ ಅರಣ್ಯ ನಿಯಮ ಉಲ್ಲಂಘನೆ ಸಹಜ' ಎಂದಿದ್ದಾರೆ. ಆ ಮೂಲಕ ತಮ್ಮ ಮೇಲಿನ ಆರೋಪ ನಿಜವೆಂದು ಹೇಳುವ ಜೊತೆಗೆ ಕಾನೂನು ಉಲ್ಲಂಘನೆ ತಮಗೆ 'ಸಾಮಾನ್ಯ' ಎಂಬಂತೆ ಮಾತನಾಡಿದ್ದಾರೆ.
'ವಾಹನ ಇದ್ದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಸಹಜ'
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ವಾಹನ ಇದ್ದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಸಾಮಾನ್ಯ, ಅಂತೆಯೇ ನಮ್ಮ ಗಣಿ ಕಂಪೆನಿ ಸಹ ಉಲ್ಲಂಘನೆ ಮಾಡಿದೆ' ಎಂದು ಮಾಡಿದ ತಪ್ಪನ್ನು ಸರಳೀಕರಣಗೊಳಿಸಿ ಹೇಳುವ ಯತ್ನ ಮಾಡಿದರು.
ಪೂರ್ವಜರಿಂದಲೂ ಗಣಿ ಉದ್ದಿಮೆಯ ಕುಟುಂಬ: ಆನಂದ್ ಸಿಂಗ್
'ಪೂರ್ವಜರಿಂದಲೂ ಗಣಿಗಾರಿಕೆ ಮಾಡುತ್ತಿರುವ ಕುಟುಂಬ ನಮ್ಮದು ಆದ್ದರಿಂದ ಸಣ್ಣ-ಪುಟ್ಟ ಪ್ರಕರಣಗಳು ಇರುತ್ತವೆ. ಈ ಪ್ರಕರಣಗಳಿಂದ ಯಾವುದೇ ತೊಂದರೆ ಆಗುವುದಿಲ್ಲ, ನನಗೆ ಕೊಟ್ಟಿರುವ ಖಾತೆಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ' ಎಂದು ಅವರು ಹೇಳಿದ್ದಾರೆ.
ಹಲವು ಪ್ರಕರಣಗಳು ಬಾಕಿ ಇವೆ
ಆನಂದ್ ಸಿಂಗ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ನಾಮಪತ್ರದಲ್ಲಿನ ಮಾಹಿತಿಯಂತೆ ಗಣಿ ಮತ್ತು ಖನಿಜ ಕಾಯ್ದೆಯ ವಿವಿಧ ಕಲಂಗಳ ಅಡಿ ದಾಖಲಾಗಿರುವ 15 ಪ್ರಕರಣಗಳು ಬಾಕಿ ಇವೆ. ಕರ್ನಾಟಕ ಅರಣ್ಯ ಕಾಯ್ದೆಯ ಅಡಿ 11 ಮೊಕದ್ದಮೆಗಳು ಆನಂದ್ ಸಿಂಗ್ ಮೇಲಿವೆ. ಜೊತೆಗೆ ಭ್ರಷ್ಟಾಚಾರ ಆರೋಪಗಳೂ ಆನಂದ್ ಸಿಂಗ್ ಮೇಲಿದೆ.
ಆನಂದ್ ಸಿಂಗ್ ಬೆಂಬಲಕ್ಕೆ ಬಿಜೆಪಿ ಸಚಿವರು
ಆದರೆ ಸಚಿವ ಆನಂದ್ ಸಿಂಗ್ ಅನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಸಚಿವರಾದ ಸಿ.ಟಿ.ರವಿ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಸಮರ್ಥಿಸಿಕೊಂಡಿದ್ದಾರೆ.