ಬೆಂಗಳೂರು: ಬ್ಯಾಂಕ್ ಖಾತೆ, ಹಣ ವರ್ಗಾವಣೆ , ಜಾಹೀರಾತುಗಳ ಮೇಲೆ ಚುನಾವಣಾ ಅಧಿಕಾರಿಗಳು ನಿಗಾ
ಬೆಂಗಳೂರು, ಏಪ್ರಿಲ್ 07: ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಬ್ಯಾಂಕ್ ಖಾತೆಗಳ ಮೇಲೆ ನಿಗಾ ವಹಿಸಬೇಕು. ದೃಶ್ಯ ಮಾಧ್ಯಮ, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳ ಮೇಲೆ ನಿಗಾವಹಿಸುವ ಸಲುವಾಗಿ 3 ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ದಿನದ 24 ಗಂಟೆಯೂ ಕಣ್ಣಿಡಿ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಶ್ರೀ ಉಜ್ವಲ್ ಕುಮಾರ್ ಘೋಷ್ ಅಧಿಕಾರಿಗಳಿಗೆ ಸೂಚಿಸಿದರು.
ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚುನಾವಣೆಯ ಮಾಹಿತಿ ಕುರಿತು ಇಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ 'ಚುನಾವಣಾ ಮಾಹಿತಿ ಕಾರ್ಯಗಾರ' ಜರುಗಿತು. ಈ ವೇಳೆ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳು ಜೊತೆಗೆ ಮತದಾರರಿಗೆ ಒಂದಷ್ಟು ಸಲಹೆಗಳನ್ನು ಘೋಷ್ ನೀಡಿದರು.

ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ರೇಡಿಯೋ, ದೃಶ್ಯ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡಬೇಕಾದರೆ ಮಾಧ್ಯಮ ಪ್ರಮಾಣೀಕರಣ ಮತ್ತು ಪರಿಶೀಲನಾ ಸಮಿತಿ(MCMC)ಯಿಂದ ಪೂರ್ವಾನುಮತಿ ಪಡೆಯಬೇಕು. ಪೂರ್ವಾನುಮತಿ ಪಡೆಯದೆ ಜಾಹೀರಾತು ನೀಡಿದರೆ ಸಂಬಂಧಪಟ್ಟ ಅಭ್ಯರ್ಥಿಯ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಮೇಲೆ ನಿಗಾಹಿಸುವ ಸಲುವಾಗಿ ನಿಯಂತ್ರಣ ಕೋಠಡಿಯನ್ನು ಸ್ಥಾಪಿಸಲಾಗಿದೆ. ಇನ್ನು ದೃಶ್ಯ ಮಾಧ್ಯಮ, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತುಗಳ ಮೇಲೆ ನಿಗಾವಹಿಸುವ ಸಲುವಾಗಿ 3 ಪಾಳಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ದಿನದ 24 ಗಂಟೆಯೂ ನಿಗಾ ವಹಿಸಲಾಗುತ್ತಿದೆ.
ಪೂರ್ವಾನುಮತಿ ಪಡೆಯದ ಅಥವಾ ಪಾವತಿಸಿದ ಸುದ್ದಿಗಳು(Paid News) ಪ್ರಾಸಾರವಾದಲ್ಲಿ ಕೂಡಲೇ ಅದನ್ನು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗೆ ರವಾನಿಸಬೇಕು. ಅಲ್ಲಿಯ ಅಧಿಕಾರಿಗಳು ಕೂಡಲೇ ಅದನ್ನು ಪರಿಶೀಲಿಸಿ ಶೀಘ್ರ ವರದಿ ನೀಡಲು ಸೂಚನೆ ನೀಡಬೇಕು ಎಂದು ಹೇಳಿದರು.

ಪೋಸ್ಟಲ್ ಬ್ಯಾಲೆಟ್ ನಲ್ಲಿ ಮತ ಚಲಾಯಿಸಬಹುದು
ಬೆಂಗಳೂರಿನಲ್ಲಿರುವ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸುಮಾರು 2.36 ಲಕ್ಷ ಮಂದಿ 80 ವರ್ಷ ಮೇಲ್ಪಟ್ಟವರಿದ್ದಾರೆ. ಈ ಸಂಬಂಧ 80 ವರ್ಷ ಮೇಲ್ಪಟ್ಟವರಿಗೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ನಾಮನಿರ್ದೇಶನಕ್ಕೂ ಮುಂಚಿತವಾಗಿ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಗಳು 80 ವರ್ಷ ಮೇಲ್ಪಟ್ಟವರ ಮನೆಗೆ ತೆರಳಿ ಪೋಸ್ಟಲ್ ಬ್ಯಾಲೆಟ್ ಹಾಕುವ ಬಗ್ಗೆ 12ಡಿ ಫಾರ್ಮ್ ಮೂಲಕ ಮಾಹಿತಿ ಪಡೆದುಕೊಳ್ಳುತ್ತಾರೆ.
12ಡಿ ಫಾರ್ಮ್ನಲ್ಲಿ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ಇಚ್ಚಿಸುವವರು ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಬಹುದು. ಈ ಸಂಬಂಧ ನಗರದಲ್ಲಿ ಎಷ್ಟು ಮಂದಿ ಪೋಸ್ಟಲ್ ಬ್ಯಾಲೇಟ್ ಮೂಲಕ ಮತ ಚಲಾಯಿಸುತ್ತಾರೆ ಎಂಬುದರ ಮಾಹಿತಿಯನ್ನು ನೀಡಲಾಗುವುದು ಎಂದರು.
ಪೋಸ್ಟಲ್ ಬ್ಯಾಲೆಟ್ ವೇಳೆ ಮತಪೆಟ್ಟಿಗೆಯ ಜೊತೆಗೆ ಇಬ್ಬರು ಅಧಿಕಾರಿಗಳು ಹಾಗೂ ವೀಡಿಯೋ ಗ್ರಾಫರ್ ತೆರಳಿ ಮತ ಹಾಕಿಸಿಕೊಂಡು ಬರಲಿದ್ದಾರೆ ಎಂದು ಉಜ್ವಲ್ ಕುಮಾರ್ ಘೋಷ್ ತಿಳಿಸಿದರು.
ಅಭ್ಯರ್ಥಿಗಳಿಗೆ 40ಲಕ್ಷ ರೂ.ವರೆಗೆ ಖರ್ಚಿಗೆ ಅನುಮತಿ
ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ವಿವಿಧ ಪಕ್ಷಗಳಿಂದ ಆಯ್ಕೆಯಾದಂತಹ ಅಭ್ಯರ್ಥಿಗಳು 40 ಲಕ್ಷ ರೂಪಾಯಿ ವ್ಯಯಿಸಲು ಮಾತ್ರ ಅವಕಾಶ ಇರುತ್ತದೆ. ಈ ಸಂಬಂಧ ಯಾವುದಕ್ಕೆ ಎಷ್ಟು ಹಣ ವ್ಯಯಿಸಲಾಗಿದೆ ಎಂಬುದರ ಬಗ್ಗೆ ಅಭ್ಯರ್ಥಿಗಳು ಅಧಿಕಾರಿಗಳಿಗೆ ನಿಖರ ಮಾಹಿತಿಯನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.
ಈ ವೈಬ್ಸೈಟ್ ನಲ್ಲಿ ನಾಮಪತ್ರ ಸಲ್ಲಿಸಬಹುದು
ಕರ್ನಾಟಕ ರಾಜ್ಯ ಸಾರ್ವತ್ರಿಕ ವಿಧಾನಸಭೆ ಚುನಾವಣೆಗೆ ಆಯ್ಕೆಯಾದ ಅಭ್ಯರ್ಥಿಗಳು https://encore.eci.gov.in ಎನ್ಕೋರ್ ವೆಬ್ಸೈಟ್ ನಡಿ ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಸಬಹುದು. ಅಭ್ಯರ್ಥಿಗಳು ಸಮಯ ನಿಗದಿ ಮಾಡಿಕೊಂಡು ಆಯಾ ದಿನ ತೆರಳಿ ನಾಮಪತ್ರ ಸಲ್ಲಿಸಬಹುದು. ಇದು ಶೀಘ್ರ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡುತ್ತದೆ ಎನ್ನಲಾಗಿದೆ.
ಬ್ಯಾಂಕ್: ಹಣ ವರ್ಗಾವಣೆ ಮೇಲೆ ನಿಗಾ
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಂದೇ ಬ್ಯಾಂಕ್ ಖಾತೆಯಿಂದ ಹೆಚ್ಚು ಹಣ ವರ್ಗಾವಣೆಯಾಗುವುದು ಕಂಡುಬಂದರೆ ಅಂತವರ ಮೇಲೆ ನಿಗಾವಹಿಸಿ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಅಧಿಕಾರಿಗಳು ಬ್ಯಾಂಕ್ ಖಾತೆಗಳ ಮೇಲೆ ನಿಗಾವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಗಾರದಲ್ಲಿ ಟ್ರೈನಿಂಗ್ ನೋಡಲ್ ಅಧಿಕಾರಿಯಾದ ನಾಗರಾಜ್, ನಾಗೇಂದ್ರ ಹೊನ್ನವಳ್ಳಿ, ಮಾಸ್ಟರ್ ಟ್ರೈನರ್ ಮೋಹನ್ ಕುಮಾರ್, ರಾಜಕೀಯ ಪಕ್ಷದ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications