ಅಂತ್ಯಸಂಸ್ಕಾರದಲ್ಲೂ ಬ್ಲಾಕ್ ಮಾರ್ಕೆಟ್, ಪ್ಯಾಕೇಜ್; ಬೆಂಗಳೂರಿನಲ್ಲಿ ಇದೆಂಥ ದುಃಸ್ಥಿತಿ?
ಬೆಂಗಳೂರು, ಏಪ್ರಿಲ್ 22: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆಯುವುದೇ ಸವಾಲಿನ ಸಂಗತಿಯಾಗಿಬಿಟ್ಟಿದೆ. ಮೃತಪಟ್ಟ ಕೋವಿಡ್ ರೋಗಿಯ ಅಂತ್ಯಸಂಸ್ಕಾರ ನಡೆಸುವುದು ಸರ್ಕಾರಕ್ಕೆ, ಕುಟುಂಬಕ್ಕೆ ದೊಡ್ಡ ಚಿಂತೆಯಾಗಿಬಿಟ್ಟಿದೆ. ಇಂಥ ಬಿಕ್ಕಟ್ಟಿನ ಸಂದರ್ಭವನ್ನು ಲಾಭಕ್ಕೆ ಬಳಸಿಕೊಂಡು ಅಲ್ಲಲ್ಲಿ ಹಣ ಮಾಡಿಕೊಳ್ಳುತ್ತಿರುವ ಸಂಗತಿಗಳೂ ಬೇಸರ ಮೂಡಿಸುತ್ತವೆ.
ಇದಕ್ಕೊಂದು ಉದಾಹರಣೆ ಬೆಂಗಳೂರಿನಲ್ಲಿ ದೊರೆತಿದೆ. ಕೊರೊನಾದಿಂದ ಮೃತಪಟ್ಟ ರೋಗಿಯ ದೇಹವನ್ನು ಒಂದು ರಾತ್ರಿ ಫ್ರೀಜರ್ನಲ್ಲಿಟ್ಟು, ಮಾರನೇ ದಿನ ಅಂತ್ಯಸಂಸ್ಕಾರ ನಡೆಸಲು ಆಂಬುಲೆನ್ಸ್ ಚಾಲಕನೊಬ್ಬ 60 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದು, ತನ್ನ ತಂದೆಗೆ ಗೌರವಯುತ ಅಂತ್ಯಸಂಸ್ಕಾರ ಸಿಗಬೇಕು ಎಂದು ಮಗಳು ಚಿನ್ನದ ಸರವನ್ನು ಅಡವಿಡಲು ಮುಂದಾದ ಘಟನೆ ನಡೆದಿದೆ. ಈ ಘಟನೆ ಏನು? ಮುಂದೆ ಓದಿ...

ಆಸ್ಪತ್ರೆಗಳಿಗಾಗಿ ಕುಟುಂಬದವರ ಹುಡುಕಾಟ
ಬಾಷ್ ಕಂಪನಿಯ ಮಾಜಿ ನೌಕರ ಹಾಗೂ ಮತ್ತಿಕೆರೆ ನಿವಾಸಿ, 55 ವರ್ಷದ ಆರ್.ವಿ. ಪ್ರಸಾದ್ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿದ್ದು, ಭಾನುವಾರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಿಸಿದ್ದಾರೆ. ಆಗಲೇ ಅವರ ಸಂಬಂಧಿ ಅಮಿತ್ ಎಂಬುವರು ಆಸ್ಪತ್ರೆಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕನಕಪುರದ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿದೆ ಎಂದು ಯಾರೋ ತಿಳಿಸಿದ್ದು, ಅಲ್ಲಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅದು ವ್ಯರ್ಥವಾಗಿದೆ. ಸೋಮವಾರ ಬಿಬಿಎಂಪಿ ವರದಿ ಬಂದಿದ್ದು, ಕೊರೊನಾ ದೃಢಪಟ್ಟಿತ್ತು. ಅವರು ಸಂಪರ್ಕಿಸಬೇಕಾದ ಸಂಖ್ಯೆ ಕೂಡ ನೀಡಿದ್ದು, ಆದರೆ ಆ ಹೆಲ್ಪ್ ಲೈನ್ಗೆ ಸಂಪರ್ಕಿಸಿದರೆ, ಕೆಲವು ಸಮಯದವರೆಗೆ ಕಾಯಲು ಹೇಳಿದ್ದಾರೆ.

ಅಂತ್ಯಸಂಸ್ಕಾರಕ್ಕೆ "ಪ್ಯಾಕೇಜ್" ಹೇಳಿದ ಚಾಲಕ
ಆಸ್ಪತ್ರೆಗಳ ಹುಡುಕಾಟದಲ್ಲೇ ಸೋಮವಾರ ಕಳೆದಿದ್ದು, ಮಂಗಳವಾರ ಸಂಜೆ ಐದು ಗಂಟೆ ವೇಳೆಗೆ ಪ್ರಸಾದ್ ಅವರು ಪ್ರಜ್ಞಾಹೀನರಾಗಿದ್ದಾರೆ. ಆಂಬುಲೆನ್ಸ್ಗಾಗಿ ತಿಳಿಸಿ ಸತತ ಮೂರು ಗಂಟೆಗಳ ಕಾಲ ಆಸ್ಪತ್ರೆಗೆ ದಾಖಲಿಸಲು ಅಲೆದಾಡಿದರೂ ಸೋತಿದ್ದಾರೆ. ಅಷ್ಟರಲ್ಲಾಗಲೇ ಪ್ರಸಾದ್ ಅವರು ಮೃತಪಟ್ಟಿದ್ದಾರೆ. ಬೇರೇನೂ ಆಯ್ಕೆಯಿಲ್ಲದೇ ಮಂಗಳವಾರ ರಾತ್ರಿ ದೇಹವನ್ನು ಸಂರಕ್ಷಿಸಿಟ್ಟು ಬುಧವಾರ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ. ಅದೇ ಸಂದರ್ಭ ಆಂಬುಲೆನ್ಸ್ ಚಾಲಕ ಹನುಮಂತ, ದೇಹವನ್ನು ಫ್ರೀಜರ್ನಲ್ಲಿ ಸಂರಕ್ಷಿಸಿ ಮಾರನೇ ದಿನ ಅಂತ್ಯಸಂಸ್ಕಾರ ನೆರವೇರಿಸಲು "ಪ್ಯಾಕೇಜ್" ಹೇಳಿದ್ದಾರೆ.

ಹಣ ನೀಡಿಲ್ಲ ಅಂದ್ರೆ ಇಲ್ಲೇ ಮೃತದೇಹ ಬಿಟ್ಟು ಹೋಗುತ್ತೇನೆಂದ ಚಾಲಕ
ಚಾಲಕ 60 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದು, ಕಡಿಮೆ ಮಾಡಿಕೊಳ್ಳುವಂತೆ ಕುಟುಂಬದವರು ಕೇಳಿಕೊಂಡಿದ್ದಾರೆ. ಹೆಬ್ಬಾಳ ಮೇಲ್ಸೇತುವೆ ಕೆಳಗೆ ಈ ಮಾತುಕತೆ ನಡೆದಿದ್ದು, ಬೆಲೆ ಕಡಿಮೆ ಮಾಡಿಕೊಳ್ಳುವಂತೆ ಕೇಳಿಕೊಳ್ಳುತ್ತಿದ್ದಂತೆ, ಅಲ್ಲಿಯೇ ಮೃತದೇಹವನ್ನು ಇಳಿಸಿ ತೆಗೆದುಕೊಂಡು ಹೋಗುವಂತೆ ಚಾಲಕ ಒರಟಾಗಿ ಮಾತನಾಡಿದ್ದಾನೆ. ಬೇರೆ ಆಯ್ಕೆ ಇಲ್ಲದೇ ಮೂರು ಸಾವಿರ ರೂಪಾಯಿ ಮುಂಗಡ ಹಣ ನೀಡಿ, ಫ್ರೀಜರ್ನಲ್ಲಿ ದೇಹ ಇಡಲು ಹೇಳಿದ್ದಾರೆ.
ಮಾರನೇ ದಿನ ಪ್ರಸಾದ್ ಅವರ ಮಗಳು ಭವ್ಯಾ, ಪೀಣ್ಯ ಚಿತಾಗಾರಕ್ಕೆ ಹೋಗಿ, ಚಾಲಕನಿಗೆ 10 ಸಾವಿರ ನೀಡಿದ್ದಾರೆ. ಇನ್ನುಳಿದ ಹಣ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಂತೆ ಆಕ್ರೋಶಗೊಂಡ ಚಾಲಕ, ಮೃತದೇಹವನ್ನು ಇಲ್ಲೇ ಬಿಟ್ಟುಹೋಗುತ್ತೇನೆ. ರಸ್ತೆ ಮಧ್ಯೆ ಹಾಕಿ ಹೋಗುತ್ತೇನೆ ಎಂದು ಹೇಳಿದ್ದಾನೆ. "ನನ್ನ ಚಿನ್ನದ ಸರವನ್ನು ಅಡ ಇಡಲು ನಿರ್ಧರಿಸಿದ್ದೆ. ಅಷ್ಟರಲ್ಲಿ ಈ ಸಂಗತಿ ತಿಳಿದ ಪೊಲೀಸರು ಬಂದು ಸಮಸ್ಯೆ ಪರಿಹರಿಸಿದರು" ಎಂದು ಭವ್ಯಾ ಹೇಳಿದ್ದಾರೆ.

ಅಂತ್ಯಸಂಸ್ಕಾರಕ್ಕೂ ಬ್ಲಾಕ್ ಮಾರ್ಕೆಟ್
ಆಂಬುಲೆನ್ಸ್ಗೆ ಅಂತಿಮವಾಗಿ 13000 ರೂ ನೀಡಿದ್ದು, ಪೀಣ್ಯ ಚಿತಾಗಾರದಲ್ಲಿ ಸಂಜೆ ಆರು ಗಂಟೆಗೆ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಆದರೆ ಇದಕ್ಕೆ ಆಂಬುಲೆನ್ಸ್ ಚಾಲಕ ಬೇರೆಯೇ ಉತ್ತರ ನೀಡಿದ್ದಾನೆ. ತಾನು 6000 ಕೇಳಿದ್ದು, ಈ ಕುಟುಂಬದವರು 60 ಸಾವಿರ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಮಾಸ್ಕ್ ಹಾಕಿಕೊಂಡಿದ್ದರಿಂದ ಅವರಿಗೆ ಸರಿಯಾಗಿ ಕೇಳಿಸಿಲ್ಲ ಎಂದಿದ್ದಾನೆ.
ಕೊರೊನಾ ಬಿಕ್ಕಟ್ಟಿನಿಂದ ಒದ್ದಾಡುತ್ತಿರುವ ಈ ಸಮಯದಲ್ಲಿ ಕೊರೊನಾ ರೋಗಿಗಳ ಅಂತ್ಯಸಂಸ್ಕಾರಕ್ಕೂ ಬ್ಲಾಕ್ ಮಾರ್ಕೆಟ್ ಸೃಷ್ಟಿಯಾಗಿದೆ. ಆಸ್ಪತ್ರೆಯಿಂದ ಮೃತದೇಹ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಲು ಕೆಲವರು 35 ಸಾವಿರ ರೂ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ ಎಂದು ಎನ್ಜಿಒ ಮಾಹಿತಿ ನೀಡಿದೆ.












Click it and Unblock the Notifications