Brand Bengaluru: ಸಾರ್ವಜನರಿಂದ ಬಂದ ಸಲಹೆಗಳಲ್ಲಿ ಉತ್ತಮ ರಸ್ತೆಗೆ ಹೆಚ್ಚು ಶಿಫಾರಸು
ಬೆಂಗಳೂರು, ಜೂನ್ 30: ಬೆಂಗಳೂರನ್ನು ಸುಸಜ್ಜಿತವಾಗಿ ಮತ್ತು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ 'ಬ್ರ್ಯಾಂಡ್ ಬೆಂಗಳೂರು' ಹೆಸರಿನ ಉಪಕ್ರಮ ರೂಪಿಸಿದೆ. ಈ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಗರವನ್ನು ಹೇಗೆ ನಿರ್ಮಿಸಬೇಕು ಎಂಬುದಕ್ಕೆ ಸಲಹೆಗಳನ್ನು ಕೇಳಿದ್ದರು. ಅದಕ್ಕೆ ಸಾಕಷ್ಟು ಸ್ಪಂದನೆ ವ್ಯಕ್ತವಾಗಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬ್ರಾಂಡ್ ಬೆಂಗಳೂರನ್ನು ಹೇಗೆ ನಿರ್ಮಿಸಬೇಕು ಎಂಬುದರ ಕುರಿತು ಸಾರ್ವಜನಿಕರಿಂದ ಶಿಫಾರಸುಗಳನ್ನು ಪಡೆಯಲು ವೆಬ್ಸೈಟ್ ಅನ್ನು ಪ್ರಾರಂಭಿಸಿದರು. ಅದಕ್ಕೆ ಸುಮಾರು ಒಂದು ವಾರದ ಅಂತರದಲ್ಲಿ ಟ್ವೀಟ್ ಸೇರಿದಂತೆ ವಿವಿಧ ಮೂಲಗಳಿಗೆ ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕೆ ಒಂದಷ್ಟು ಸಲಹೆಗಳನ್ನು ವ್ಯಕ್ತವಾಗಿವೆ.

ಒಟ್ಟು ಸಲಹೆಗಳ ಪಟ್ಟಿಯಲ್ಲಿ ಉತ್ತಮ ರಸ್ತೆಗಳು ಬೇಕು ಎಂಬ ಸಲಹೆ, ಬೇಡಿಕೆಯು ಅಗ್ರಸ್ಥಾನದಲ್ಲಿವೆ ಎಂದು ತಿಳಿದು ಬಂದಿದೆ. ನಗರದ ಜಾಗತಿಕ ಖ್ಯಾತಿಗೆ ಸರಿಹೊಂದುವ ರಸ್ತೆಗಳ ಸಂಚಾರಕ್ಕೆ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅದ್ಭುತ ರಸ್ತೆಗಳಲ್ಲಿ ಜನ ಸಂಚಾರ ಬಯಸಿದ್ದಾರೆ. ಸೈಕಲ್ ಓಡಿಸಲು, ಓಡಾಡಲು ಬೆಂಗಳೂರಿಗರು ಉತ್ಸುಕರಾಗಿದ್ದಾರೆ.
ನಗರದ ಕೆಲವು ಪ್ರದೇಶಗಳಲ್ಲಿ ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ರಸ್ತೆಗಳು ಗುಂಡಿಮಯವಾಗಿವೆ. ಅವುಗಳನ್ನು ಸಮರ್ಪಕವಾ, ವೈಜ್ಞಾನಿಕವಾಗಿ ಮುಚ್ಚದ ಹಿನ್ನೆಲೆಯಲ್ಲಿ ಜಲ್ಲಿಕಲ್ಲು, ಟಾರ್ ಮೇಲೆ ಎದ್ದಿದೆ ಎಂದು ಜನರು ದೂರಿದ್ದಾರೆ.
ಜಲಾವೃತ:ರಸ್ತೆ ಬದಿ ಒಳಚರಂಡಿ ಸ್ವಚ್ಚಗೊಳಿಸಿ
ಬ್ರ್ಯಾಂಡ್ ಬೆಂಗಳೂರು ಬಗ್ಗೆ ರಾಜೇಶ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಅಸ್ತಿತ್ವದಲ್ಲಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸುವುದು ಮೊದಲ ಆದ್ಯತೆಯಾಗಬೇಕು ಎಂದು ಸಲಹೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಮೆಟ್ರೋ ನಗರಗಳಲ್ಲಿ ಸಹ ಮಳೆಗಾಲದಲ್ಲಿ ರಸ್ತೆಗಳು ಜಲಾವೃತವಾಗುತ್ತಿವೆ. ಇದೊಂದು ಗಂಭೀರ ಸಮಸ್ಯೆಯಾಗಿದೆ. ಬಿಬಿಎಂಪಿ ಅಧಿಕಾರಿಗಳು ರಸ್ತೆ ಬದಿಯಲ್ಲಿರುವ ಒಳಚರಂಡಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಬೇಕು ಎಂದು ಅವರು ತಿಳಿಸಿದರು.

ಬೆಂಗಳೂರಿನ ಆಡಳಿತವು ಈ ಮೊದಲು ನೀಡಿದ ಭರವಸೆಯಂತೆ ಇದೇ 2023 ವರ್ಷಾಂತ್ಯದ ವೇಳೆಗೆ 5,000 ಎಲೆಕ್ಟ್ರಿಕ್ ಬಸ್ಗಳನ್ನು ಖರೀದಿಯನ್ನು ಖಚಿತಪಡಿಸಬೇಕು. ಎಲ್ಲಾ ಪ್ರಮುಖ ಜಂಕ್ಷನ್ಗಳಲ್ಲಿ ಸೌರ ಫಲಕದ ಎಲ್ಇಡಿ ಬೀದಿ ದೀಪ ಅಳವಡಿಕೆ, ಹೆಚ್ಚು ಜನದಟ್ಟಣೆ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಗರದಲ್ಲಿ 5-10 ಕಿಮೀ ವಿಸ್ತೀರ್ಣ ಒಂದಕ್ಕೆ ಕನಿಷ್ಠ ಐದು ಸೈಕ್ಲಿಂಗ್ ಪಾರ್ಕ್ಗಳನ್ನು ಸ್ಥಾಪಿಸಬೇಕು. ಸೈಕ್ಲಿಂಗ್ ಮೂಲಕ ಜನರ ಆರೋಗ್ಯಕ್ಕೆ ಅನುಕೂಲವಾಗುತ್ತದೆ ಎಂದು ಮತ್ತೊಬ್ಬ ನೆಟ್ಟಿಗರು ಶಿಫಾರಸು ಮಾಡಿದ್ದಾರೆ.
ಮರಗಳ ಕಡಿತಕ್ಕೆ ಬ್ರೇಕ್ ಹಾಕಬೇಕು
ಇನ್ನೂ ಉದ್ಯಾನನಗರಿ ಅಂತಲೇ ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ರಸ್ತೆ ವಿಸ್ತರಣೆ ನೆಪದಲ್ಲಿ ಗಿಡ ಮರಗಳನ್ನು ಕಡಿಯಬಾರದು. ಅಜಾಗರೂಕತೆಯಿಂದ ಮರಗಳನ್ನು ಕಡಿದರೆ ಅದರಿಂದ ಯುವ ಪೀಳಿಯು ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕೆಲವು ನಾಗರಿಕರು ಒತ್ತಿ ಹೇಳಿದ್ದಾರೆ. ಬೆಂಗಳೂರು ಉದ್ಯಾನ ನಗರಿ ಎಂಬ ಚಿತ್ರಣ ಹಾಗೇ ಉಳಿಯಬೇಕಾದರೆ ಗಿಡ ಮರಗಳ ಅಗತ್ಯತೆ, ಅವುಗಳ ಪಾತ್ರ ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ನಗರದಲ್ಲಿ ಮೂಲಭೂತ ಸಮಸ್ಯೆಗಳ ಕುರಿತು ಹೆಚ್ಚು ಸಲಹೆಗಳು ಬಂದಿವೆ. ಅರುಣಾ ನಂಬಿಯಾರ್ ಎಂಬುವವರು ಇಂದಿರಾನಗರ ಮತ್ತು ಕಮ್ಮನಹಳ್ಳಿ ಪ್ರದೇಶಗಳಂತೆ ಅನಿಯಂತ್ರಿತವಾಗಿ ವಾಣಿಜ್ಯ ಪ್ರದೇಶ ವಿಸ್ತರಣೆಯಾಗುವುದನ್ನು ತಡೆಯಬೇಕು. ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ನಗರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು. ಉಚಿತ ವೈಫೈ ವ್ಯವಸ್ಥೆ, ಸ್ವಚ್ಛ ಪಾದಚಾರಿ ಮಾರ್ಗಗಳು ಮತ್ತು ಉತ್ತಮ ಆಡಳಿತಾತ್ಮಕ ವಿಚಾರದಲ್ಲಿ ಇಲಾಖೆಗಳ ಮಧ್ಯೆ ಸಮನ್ವಯತೆ ಕಾಯ್ದುಕೊಳ್ಳಬೇಕು ಎಂಬುದು ನಾಗರಿಕರಿಂದ ಆದ್ಯತೆಯ ಸಲಹೆಗಳಾಗಿ ಬಂದಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.












Click it and Unblock the Notifications