ಜನವರಿ 17ರಿಂದ ಬೆಂಗಳೂರು-ಅಯೋಧ್ಯೆ ವಿಮಾನಯಾನ ಆರಂಭ: ಸಮಯ, ಮಾರ್ಗ ಸಂಪೂರ್ಣ ವಿವರ
ಬೆಂಗಳೂರು, ಡಿಸೆಂಬರ್ 30: ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರಾಮ ಭಕ್ತರು ಅಯೋಧ್ಯೆಯತ್ತ ಪ್ರಯಾಣ ಆರಂಭಿಸಿದ್ದಾರೆ. ಜನವರಿ 22ರಂದು ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆ ನಡೆಯಲಿದ್ದು, ಈ ಸಮಯದಲ್ಲಿ ಅಯೋಧ್ಯೆಗೆ ತೆರಳುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಎಕ್ಸಪ್ರೆಸ್ ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನಯಾನ ಆರಂಭಿಸಲಿದೆ.
ಅಯೋಧ್ಯೆ ಶ್ರೀ ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಹಾಗೂ ಉದ್ಘಾಟನೆಯ ಬಳಿಕ ಅಯೋಧ್ಯೆಯತ್ತ ತೆರಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿ ಪ್ರಯಾಣಿಕರ ಹಿತ ದೃಷ್ಟಿಯಿಂದ ಏರ್ ಇಂಡಿಯಾ ಜನವರಿ 17ರಿಂದ ಪ್ರತಿದಿನ ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನಯಾನ ಆರಂಭಿಸಲಿದೆ.

ಜನವರಿ 17 ರಿಂದ ಏರ್ ಇಂಡಿಯಾ ಎಕ್ಸಪ್ರೆಸ್ ಬೆಂಗಳೂರು ಮತ್ತು ಕೋಲ್ಕತ್ತಾದಿಂದ ಅಯ್ಯೋಧ್ಯೆಗೆ ನೇರ ವಿಮಾನ ಸೇವೆ ನೀಡಲಿದೆ. ಜನವರಿ 17ರಂದು ಬೆಂಗಳೂರು-ಅಯೋಧ್ಯೆ ಮಾರ್ಗದ ಮೊದಲ ವಿಮಾನಯಾನ ಆರಂಭವಾಗಲಿದೆ. ಈ ವಿಮಾನವು ಜನವರಿ 17ರ ಬೆಳಗ್ಗೆ 8.05ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು 10:35ಕ್ಕೆ ಅಯೋಧ್ಯೆ ತಲುಪಲಿದೆ. ಬಳಿಕ ಅಯೋಧ್ಯೆಯಿಂದ 3:40ಕ್ಕೆ ಹೊರಟು ಸಂಜೆ 6.10ಕ್ಕೆ ಬೆಂಗಳೂರು ತಲುಪಲಿದೆ.
ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನಯಾನದ ಬಗ್ಗೆ ಏರ್ ಇಂಡಿಯಾ ವೆಬ್ಸೈಟ್ ಮತ್ತು ಆ್ಯಪ್ಗಳಲ್ಲಿ ಮಾಹಿತಿ ನೀಡಲಾಗಿದ್ದು, ವಿಮಾನಯಾನದ ವೇಳಾಪಟ್ಟಿ ಮತ್ತು ಟಿಕೆಟ್ ಬುಕಿಂಗ್ ವ್ಯವಸ್ಥೆ ಕೂಡ ಇದೆ.
ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
ಇನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದು (ಡಿಸೆಂಬರ್ 30)ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಅಯೋಧ್ಯೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇನ್ನು ಉದ್ಘಾಟನೆಗೆ ಸಕಲ ಸಿದ್ಧತೆಗಳು ಅಂತಿಮಗೊಂಡಿದ್ದು, ಗೋಡೆಗಳ ಮೇಲೆ ವರ್ಣಚಿತ್ರಗಳ ಜೊತೆ ಹೂವಿನ ಅಲಂಕಾರ ಪ್ರಯಾಣಿಕರನ್ನು ಅಯೋಧ್ಯೆ ವಿಮಾನ ನಿಲ್ದಾಣದತ್ತ ಸೆಳೆಯುತ್ತಿದೆ.












Click it and Unblock the Notifications