ನೀವೊಬ್ಬ "ರಬ್ಬರ್ ಸ್ಟಾಂಪ್ ಅಧ್ಯಕ್ಷ': ಅಸಹಾಯಕ ಮಲ್ಲಿಕಾರ್ಜುನ ಖರ್ಗೆ: ಜೆಡಿಎಸ್ ಟಾಂಗ್
ಬೆಂಗಳೂರು, ನವೆಂಬರ್ 24: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸುತ್ತಿದ್ದಂತೆ ಈಗಾಗಲೇ ಕೇಳಿ ಬರುತ್ತಿದ್ದ ಅಧಿಕಾರ ಹಂಚಿಕೆ ವಿಚಾರ ಭುಗಿಲೆದ್ದಿದೆ. ಒಂದೊಂದೆ ಬಣದ ಸದಸ್ಯರು ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುತ್ತಿದ್ದಾರೆ. ಹೀಗಿದ್ದರೂ ಅಧಿಕಾರ ಹಂಚಿಕೆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪ್ರತಿಕ್ರಿಯೆಗೆ ಜೆಡಿಎಸ್ (ಜಾತ್ಯತೀತ ಜನತಾ ದಳ) ಕಾಂಗ್ರೆಸ್ ಗುಲಾಮಿತನ ಜಗಜ್ಜಾಹೀರಾಗಿದೆ ಎಂದು ಲೇವಡಿ ಮಾಡಿದೆ.
ಮಲ್ಲಿಕಾರ್ಜುನ ಖರ್ಗೆ ಅವರೇ ತಾವು ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಅಧ್ಯಕ್ಷರೋ? ಅಥವಾ ಕರ್ನಾಟಕ ಕಾಂಗ್ರೆಸ್ನ ಉಸ್ತುವಾರಿಯೋ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಕಟುವಾಗಿ ಟೀಕಿಸಿದೆ.

ಸಿದ್ದರಾಮಯ್ಯ ಅವರು ಸಿಎಂ ಆಗಿ ಎರಡೂವರೆ ವರ್ಷ ಪೂರ್ಣಗೊಂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಬಾಕಿ ಅವಧಿಗೆ ಸಿಎಂ ಆಗಬೇಕೆಂಬ ಕೂಗು ಅವರ ಬಣದಿಂದ ಕೇಳಿ ಬಂದಿದೆ. ಅದೆಷ್ಟೋ ಬಾರಿ ಈ ಬಗ್ಗೆ ಚರ್ಚೆಗಳು ಶುರುವಾಗಿ ಹಿಂದೆಯೇ ತಣ್ಣಗಾಗುತ್ತಿದ್ದವು. ಈ ಬಾರಿ ಇದು ಹೈಕಮಾಂಡ್ ಅಂಗಳಕ್ಕೆ ಮುಟ್ಟಿದೆ. ಒಂದೆಡೆ ಸಿದ್ದರಾಮಯ್ಯ ಅವರು ತಾವೇ ಪೂರ್ಣಾವಧಿ ಸಿಎಂ ಅಂದರೂ ಸಹಿತ ಡಿಕೆ ಶಿವಕುಮಾರ್ ಮತ್ತವರ ಶಾಸಕ ಬಣ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಭಾನುವಾರ ಡಿಕೆ ಶಿವಕುಮಾರ್ ಅವರ ಮೂರನೇ ಬ್ಯಾಚ್ ಮತ್ತೆ ದೆಹಲಿಗೆ ತೆರಳಿದ್ದು, ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ತಮಗೆ ಗೊತ್ತೇ ಇಲ್ಲೆ ಎಂದು ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ. ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿದ್ದಾರೆ. ಅವರ ಉತ್ತರ ಕೇಳಿದ ಜೆಡಿಎಸ್ ತಾವೊಬ್ಬರು "ರಬ್ಬರ್ ಸ್ಟಾಂಪ್ ಅಧ್ಯಕ್ಷ' ಎಂದು ಕಾಲೆಳೆದಿದೆ.

ಜೆಡಿಎಸ್ ಹೇಳಿದ್ದೇನು?
ಅಧಿಕಾರ ಹಂಚಿಕೆ ಬಗ್ಗೆ ತಮ್ಮ ಈ ಅಸಹಾಯಕತೆಯ ಮಾತುಗಳಿಂದ ನೀವು ಅಧ್ಯಕ್ಷರಾಗಿದ್ದರೂ ನಿಮಗೆ ಚಲಾಯಿಸಲು ಯಾವುದೇ ಅಧಿಕಾರ ಇಲ್ಲ. ತಾವೊಬ್ಬ "ರಬ್ಬರ್ ಸ್ಟಾಂಪ್ ಅಧ್ಯಕ್ಷ" ಎಂಬುದು ಸಾಬೀತಾಗುತ್ತದೆ. ಜೊತೆಗೆ ಕಾಂಗ್ರೆಸ್ ಪಕ್ಷದ ಗುಲಾಮಿತನವನ್ನು ಜಗಜ್ಜಾಹೀರುಗೊಳಿಸಿದೆ. ನೀವು ಎಐಸಿಸಿ ಅಧ್ಯಕ್ಷರಂತೆ ಮಾತನಾಡದೇ, ರಾಜ್ಯ ಕಾಂಗ್ರೆಸ್ ಉಸ್ತುವಾರಿಗಳ ರೀತಿಯಲ್ಲಿ ವರ್ತಿಸುತ್ತಿದ್ದಿರಿ. ನಿಮ್ಮ ಅಧಿಕಾರ ಎಲ್ಲವು ಗಾಂಧಿ ಕುಟುಂಬದ ಕೈಲಿದೆ ಎಂದು ಜೆಡಿಎಸ್ ಟಾಂಗ್ ನೀಡಿದೆ.
ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಕರ್ನಾಟಕದ ಮುಖ್ಯಮಂತ್ರಿಗಳ ಅಧಿಕಾರ ಹಂಚಿಕೆ ಬಗ್ಗೆ ಏನು ನಡೆದಿಲ್ಲ. ಏನು ಇಲ್ಲದೇ ನಿಮ್ಮ ಮುಂದೆ ನಾನೇನು ಹೇಳಲಿ. ಹೇಳಲು ಏನು ಇಲ್ಲ. ಅದೇನೆ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಆ ಬಗ್ಗೆ ತಲೆಕೆಡಿಸಿಕೊಳ್ಳುವುದು ಬೇಡ. ಏನು ಇಲ್ಲದೇ ಮಾತನಾಡುವುದು ಸರಿಯಲ್ಲ. ದಯಮಾಡಿ ಈ ಬಗ್ಗೆ ನನ್ನ ಬಳಿ ಏನನ್ನು ಕೇಳಬೇಡಿ. ನೀವು ಈ ರೀತಿ ಪದೇ ಪದೆ ಬಂದು ನನ್ನ ಕೇಳಿದರೆ ಬೇಸರವಾಗುತ್ತದೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಇದಕ್ಕು ಮೊದಲು ಅವರ ಬೆಂಗಳೂರಿನ ನಿವಾಸದಲ್ಲಿ ವಿವಿಧ ಸಚಿವರು, ಶಾಸಕರು ಭೇಟಿ ನೀಡಿ ಮಾತನಾಡಿದ್ದಾರೆ. ಇನ್ನೂ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರು ನಿವಾಸದಲ್ಲೇ ಇದ್ದರೂ ಸಹಿತ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರಲಿಲ್ಲ. ಇದು ಸಹ ಕುತೂಹಲಕ್ಕೆ ಕಾರಣವಾಗಿದೆ. ಖರ್ಗೆ ಅವರು ಇಲ್ಲಿಯೇ ಇದ್ದರೂ ಸಹಿತ ಡಿಕೆಶಿ ಬಣ ದೆಹಲಿಗೆ ತೆರಳಿದ್ದು ನೋಡಿದರೆ ಜೆಡಿಎಸ್ ಮಾತು ನಿಜ ಅನ್ನಿಸುತ್ತದೆ.












Click it and Unblock the Notifications