ಮೋದಿ ಪ್ರಧಾನಿಯಾಗುವುದು 'ತಿರುಕನ ಕನಸು'
ಬೆಂಗಳೂರು, ನ 22: ತನ್ನ ಸಮಾವೇಶಕ್ಕೆ ಲಕ್ಷಾಂತರ ಜನ ಸೇರಿದರೆ, ದೇಶಕ್ಕೆ ತಾನೇ ಹೀರೋ ಅಂದು ಕೊಳ್ಳುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಧಾನಿಯಾಗುವುದು 'ತಿರುಕನ ಕನಸು' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್ ವ್ಯಂಗ್ಯ ವಾಡಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಶುಕ್ರವಾರ (ನ 22) ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಹರಿಪ್ರಸಾದ್, ಕಾಂಗ್ರೆಸ್ ಪಕ್ಷಕ್ಕೆ ಶತಮಾನದ ಇತಿಹಾಸವಿದೆ. ನಮ್ಮದು ಬ್ರಿಟಿಷರ ವಿರುದ್ದ ಹೋರಾಡಿದ ರಾಷ್ಟ್ರೀಯ ಪಕ್ಷ ಅನ್ನುವುದನ್ನು ಕಮಲದ ಪಾಳಯದವರು ಅರಿತು ಕೊಳ್ಳುವುದು ಸೂಕ್ತ ಎಂದಿದ್ದಾರೆ.

ಮೋದಿಯವರ ಸಮಾವೇಶಕ್ಕೆ ಮಾತ್ರ ಜನ ಸೇರುತ್ತಾರೆ, ಆದರೆ ಮತದಾನದ ಸಮಯದಲ್ಲಿ ಜನಸಾಮಾನ್ಯರು ಅವರ ಮಾತಿಗೆ ಮರುಳಾಗುವುದಿಲ್ಲ. ನಮ್ಮ ಪಕ್ಷ ಮತ್ತು ನಾಯಕರ ವಿರುದ್ದ ಮೋದಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಮುಂದೊಂದು ದಿನ ಅವರ ಹೇಳಿಕೆಗಳೇ ಅವರಿಗೆ ಮುಳ್ಳಾಗಲಿದೆ ಎಂದು ಹರಿಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಇತಿಹಾಸದ ಸಾಮಾನ್ಯ ಅರಿವು ನರೇಂದ್ರ ಮೋದಿಯವರಿಗಿಲ್ಲ. ಸಾವಿರ ಸುಳ್ಳನ್ನು ಹೇಳಿ ತಾನು ಹೇಳಿದ್ದೇ ಸತ್ಯವೆಂದು ಇತಿಹಾಸ ತಿರುಚುವ ಕೆಲಸಕ್ಕೆ ಮೋದಿ ಹಿಂಜರಿಯುವುದಿಲ್ಲ. ರಾಷ್ಟ್ರದ ಇತಿಹಾಸದ ಬಗ್ಗೆ ಮೋದಿಗೆ ತಿಳುವಳಿಕೆಯಿಲ್ಲ. ದೇಶದ ರಾಷ್ಟ್ರಪಿತನ ಹೆಸರನ್ನೂ ಸರಿಯಾಗಿ ಹೇಳಲು ಬರದ ಮೋದಿ ಪ್ರಧಾನಿಯಾಗುವುದು ತಿರುಕನ ಕನಸು ಎಂದು ಹರಿಪ್ರಸಾದ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಮೋದಿಯವರ ಭಯವಿಲ್ಲ. ಮೋದಿಯವರಂತಹ ಎಷ್ಟೇ ಜನ ಬಂದರೂ ಎದುರಿಸಲು ಕಾಂಗ್ರೆಸ್ ಸಿದ್ದವಾಗಿದೆ. ಐದು ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.












Click it and Unblock the Notifications