ಬೆಂಗಳೂರು: ಈ ವಾರಾಂತ್ಯದಿಂದ ಮುಂದಿನ ಒಂದು ವಾರ ಹೂವು, ಹಣ್ಣು, ತರಕಾರಿ ಅಭಾವ!
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರು ಎನ್ನುವ ಮಾತು ಆಗಾಗ ಕೇಳಿ ಬರುತ್ತಿರುವುದಕ್ಕೆ ಕಾರಣ, ಇಲ್ಲಿ ಎಲ್ಲಾ ಭಾಷಿಗರು ನೆಲೆಕಂಡು ಕೊಂಡಿರುವುದು.
ಕೆಲಸ ಅರಸಿಕೊಂಡು ಇಲ್ಲಿಗೆ ಬರುವ ಹೆಚ್ಚಿನವರು ಇಲ್ಲಿನ ಸೊಗಡಿಗೆ ತಕ್ಕಂತೆ ಹೊಂದಿಕೊಳ್ಳದೇ, ತಮ್ಮತನವನ್ನೇ ಮುಂದುವರಿಸಿಕೊಂಡು ಹೋಗುವ ಬಹಳಷ್ಟು ಉದಾಹರಣೆಗಳನ್ನು ನೋಡುತ್ತಿದ್ದೇವೆ.
ಬೆಂಗಳೂರಿಗೂ ತಮಿಳರಿಗೂ ಬಹಳಷ್ಟು ನಂಟು ಇರುವುದು ಗೊತ್ತಿರುವ ವಿಚಾರ. ಕನ್ನಡಿಗರು-ತಮಿಳರು ಚಿನ್ನತಂಬಿ, ಪೆರಿಯತಂಬಿ ಎಂದು ತಮಿಳುನಾಡಿನ ಮಾಜಿ ಸಿಎಂ ದಿ.ಕರುಣಾನಿಧಿ ಹೇಳಿದ್ದರೂ, ನದಿನೀರು ಹಂಚಿಕೆ ವಿಚಾರದಲ್ಲಿ ಎರಡು ರಾಜ್ಯಗಳ ನಡುವಿನ ಸಂಬಂಧ ಬಹಳಷ್ಟು ಕದಡಿ ಹೋಗಿ ಆಗಿದೆ.
ಆದರೂ, ಬೆಂಗಳೂರಿನಲ್ಲಿ ತಮಿಳರ ಪ್ರಾಬಲ್ಯ ಕಮ್ಮಿಯೇನೂ ಇಲ್ಲ. ಶೇ. 21ರಷ್ಟು ತಮಿಳು ಭಾಷಿಗರು ರಾಜಧಾನಿಯಲ್ಲಿದ್ದಾರೆ ಎನ್ನುವುದು ವಾಸ್ತವತೆ. ಇವರಲ್ಲಿ ಬಹಳಷ್ಟು ಜನ, ಈ ವಾರಾಂತ್ಯದಲ್ಲಿ ಬೆಂಗಳೂರಿನಿಂದ ತಮ್ಮ ಊರಿಗೆ ಪ್ರಯಾಣಿಸಲಿದ್ದಾರೆ. ಕಾರಣ, ತಮಿಳುನಾಡು ಚುನಾವಣೆ:

ಕರುಣಾನಿಧಿ, ಜಯಲಲಿತಾ ಇಲ್ಲದೇ ನಡೆಯುತ್ತಿರುವ ಇಲೆಕ್ಷನ್
ಇಬ್ಬರು ಮುಖ್ಯಮಂತ್ರಿಗಳಾಗಿದ್ದ ಕರುಣಾನಿಧಿ ಮತ್ತು ಜಯಲಲಿತಾ ಇಲ್ಲದೇ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವುದರಿಂದ, ಅಲ್ಲಿನ ಎರಡು ಪ್ರಾದೇಶಿಕ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ನಡುವೆ ಗದ್ದುಗೇರಲು ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ. ಅದೇನು, ಹಣನೋ, ನೀರೋ ಎನ್ನುವ ರೀತಿಯಲ್ಲಿ ಪಕ್ಷಗಳು ದುಡ್ಡು ಖರ್ಚು ಮಾಡುತ್ತಿವೆ. ಮತದಾರರಿಗಂತೂ, ವರ್ಷದಲ್ಲಿ ಇನ್ನೊಮ್ಮೆ ಪೊಂಗಲ್ ಹಬ್ಬ ಬಂದಷ್ಟು ಖುಷಿ. ಕಾರಣ, ಎರಡು ಪಕ್ಷಗಳ ನೀಡುವ ಭರ್ಜರಿ ಕೊಡುಗೆಗಳು.

ತಮಿಳುನಾಡು ಅಸೆಂಬ್ಲಿ ಚುನಾವಣೆ
ಬೆಂಗಳೂರಿನಲ್ಲಿ ತರಕಾರಿ, ಹೂವು, ಸ್ಕ್ರ್ಯಾಪ್ ಮುಂತಾದ ವ್ಯಾಪಾರದಲ್ಲಿ ತೊಡಗಿಸಿಕೊಂಡವರಲ್ಲಿ ಸಿಂಹಪಾಲು ತಮಿಳಿಗರದ್ದು. ಇಲ್ಲಿನ ಯಾವುದೇ ಭಾಗ/ಮೂಲೆಯಲ್ಲಿ ಹೆಚ್ಚಾಗಿ ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಈ ವರ್ಗ ಚುನಾವಣೆ ಬಂತೆಂದರೆ ಸಾಕು ತಮ್ಮ ಊರಿಗೆ ಪ್ರಯಾಣಿಸುತ್ತಾರೆ. ಲೋಕಲ್ ಮುನ್ಸಿಪಾಲಿಟಿ ಚುನಾವಣೆಗೂ ತಮ್ಮ ರಾಜ್ಯಕ್ಕೆ ಹೋಗುವ ಇವರುಗಳು ಇನ್ನು ಭರ್ಜರಿ ಕೊಡುಗೆ ಸಿಗುವ ಅಸೆಂಬ್ಲಿ ಚುನಾವಣೆ ಬಿಟ್ಟಾರಾ?

ಊರಿಗೆ ಹೋಗಿ ವೋಟ್ ಹಾಕಿ ಬರ್ತೀವಿ
ಬನಶಂಕರಿ ಮೊದಲ ಹಂತದಲ್ಲಿರುವ ತಳ್ಳುಗಾಡಿ ತರಕಾರಿ ವ್ಯಾಪಾರಿ ಸೆಲ್ವಮ್ಮ ಹೇಳುವ ಪ್ರಕಾರ, "ತಿಂಗಳಿಗೆ ಬೇಕಾಗುವಷ್ಟು ರೇಶನ್ ಕೊಡುತ್ತಾರೆ. ಎರಡೂ ಪಾರ್ಟಿಯಿಂದ ಬರುತ್ತೆ, ಯಾಕೆ ಬಿಡಬೇಕು. ಅವರೇನು ಪುಕ್ಸಟೆ ಕೊಡುತ್ತಾರಾ, ಅಲ್ವಾ ಸ್ವಾಮಿ, ಊರಿಗೆ ಹೋಗಿ ವೋಟ್ ಹಾಕಿ ಬರ್ತೀವಿ" ಎಂದು. ತಮಿಳುನಾಡಿನ ಚುನಾವಣೆ ಮುಂದಿನ ವಾರ (ಏಪ್ರಿಲ್ 6) ನಡೆಯಲಿದೆ. ಬಹಿರಂಗ ಪ್ರಚಾರಕ್ಕೆ ಈ ಭಾನುವಾರ ತೆರೆಬೀಳಲಿದೆ.

ತಮಿಳುನಾಡು ಚುನಾವಣೆಗೂ, ಬೆಂಗಳೂರಿಗೂ ಈ ರೀತಿಯ ನಂಟೂ ಇದೆ
ತಮಿಳುನಾಡಿನಲ್ಲಿ ಚುನಾವಣೆ ನಡೆದಾಗಲೆಲ್ಲಾ ತರಕಾರಿ, ಹೂವು ಹಣ್ಣು ಮಾರುವ ತಳ್ಳುಗಾಡಿ ಸಂಖ್ಯೆ ಕಮ್ಮಿ ಇರುವುದು ಸಾಮಾನ್ಯ. ಕೋವಿಡ್ನ ಭೀತಿ ಇಲ್ಲದೇ ಅಲ್ಲಿ ಚುನಾವಣಾ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಒಂದು ಕಡೆಯಾದರೆ, ಚುನಾವಣೆಯ ಮುನ್ನಾದಿನ ನಡೆಯುವ ವ್ಯವಹಾರಗಳು ಓಪನ್ ಸೀಕ್ರೆಟ್. ಹಾಗಾಗಿ, ಈ ವಾರಾಂತ್ಯದಲ್ಲಿ ಬೆಂಗಳೂರಿನಲ್ಲಿ ಹೂವು, ಹಣ್ಣು, ತರಕಾರಿಗೆ ಬರಬಂದರೂ ಬರಬಹುದು. ಒಟ್ಟಿನಲ್ಲಿ, ತಮಿಳುನಾಡು ಚುನಾವಣೆಗೂ, ಬೆಂಗಳೂರಿಗೂ ಈ ರೀತಿಯ ನಂಟೂ ಇದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ












Click it and Unblock the Notifications