ಉಪಚುನಾವಣೆ ಹೊಸ್ತಿಲಲ್ಲಿ ಕುಮಾರಸ್ವಾಮಿ ವಿರುದ್ದ ಡಿಕೆಶಿ ಬ್ರದರ್ಸ್ ಭರ್ಜರಿ ಬೇಟೆ
ಬೆಂಗಳೂರು, ಅ 16: ರಾಜ್ಯಾದ್ಯಂತ ಭಾರೀ ಕುತೂಹಲಕ್ಕೆ ಎಡೆಮಾಡಿ ಕೊಟ್ಟಿರುವ ರಾಜರಾಜೇಶ್ವರಿ ನಗರ ಅಸೆಂಬ್ಲಿ ಉಪಚುನಾವಣೆಯ ಕಾವು ರಂಗೇರುತ್ತಿದ್ದು, ಶುಕ್ರವಾರ (ಅ 16) ಡಿಕೆಶಿ ಸಹೋದರರು, ಜೆಡಿಎಸ್ಸಿಗೆ ಬಿಗ್ ಶಾಕ್ ನೀಡಿದ್ದಾರೆ.
ಕಾರ್ಯಕರ್ತರು, ಮುಖಂಡರು, ಚುನಾವಣೆಯ ಹೊಸ್ತಿಲಲ್ಲಿ ಬೇರೆ ಪಕ್ಷಕ್ಕೆ ಸೇರುವುದು ಮಾಮೂಲಿ ಎಂದು ಬೆಳಗ್ಗೆಯಷ್ಟೇ ಅಂದಿದ್ದ ಡಿ.ಕೆ.ಶಿವಕುಮಾರ್, ಮಧ್ಯಾಹ್ನದ ಹೊತ್ತಿಗೆ, ಕ್ಷೇತ್ರದ ಜೆಡಿಎಸ್ ಮುಖಂಡರ ಭರ್ಜರಿ ಬೇಟೆಯಾಡಿದ್ದಾರೆ.
ಒಂದು ದಿನದ ಹಿಂದೆ, "ಕೆಪಿಸಿಸಿ ಅಧ್ಯಕ್ಷರು ನಮ್ಮ ಪಕ್ಷದ ಮುಖಂಡರ ಮನೆಗೆ ಹೋಗಿದ್ದಾರೆ. ಅಲ್ಲಿ ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದು ಗೊತ್ತಿದೆ. ಅವರು ಕರೆದ ಕೂಡಲೇ ಹೋಗಲು ಯಾರೂ ಕಿಂದರಜೋಗಿಗಳಲ್ಲ"ಎನ್ನುವ ಮಾತನ್ನು ಎಚ್ಡಿಕೆ ಆಡಿದ್ದರು.
ಆದರೆ, ನೇರವಾಗಿ ಜೆಡಿಎಸ್ ಮುಖಂಡರನ್ನು ತಮ್ಮತ್ತ ಸೆಳೆದು, ಆ ಪಕ್ಷದ ಮತಬ್ಯಾಂಕಿಗೆ ಕೈಹಾಕಿರುವ ಡಿಕೆಶಿ, ಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ನೇರ ಹಣಾಹಣಿ ಎನ್ನುವ ಮುನ್ಸೂಚನೆಯನ್ನು ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಪ್ರಮುಖರು ಯಾರು?

ಇವತ್ತು ಅಮಾವಾಸ್ಯೆ ಬೇರೆ, ಮೊದಲೇ ನಮ್ಮ ವಿರುದ್ದ ಅವರು ಕಿಡಿಕಾರುತ್ತಿದ್ದಾರೆ
ಜೆಡಿಎಸ್ ಮುಖಂಡರನ್ನು ಸ್ವಾಗತಿಸುತ್ತಾ ಮಾತನಾಡಿದ ಡಿಕೆಶಿ, "ನೀವೆಲ್ಲಾ ನಮ್ಮ ಪಕ್ಷಕ್ಕೆ ಸೇರಿದ್ದೀರಿ, ಬೇರೆ ಪಕ್ಷದ ಮತ್ತು ಮುಖಂಡರ ವಿಚಾರ ನಮಗೆ ಬೇಕಿಲ್ಲ. ಇವತ್ತು ಅಮಾವಾಸ್ಯೆ ಬೇರೆ, ಮೊದಲೇ ನಮ್ಮ ವಿರುದ್ದ ಅವರು ಕಿಡಿಕಾರುತ್ತಿದ್ದಾರೆ"ಎಂದು ಕುಮಾರಸ್ವಾಮಿ ಹೆಸರು ಹೇಳದೇ ಡಿಕೆಶಿ ವ್ಯಂಗ್ಯವಾಡಿದರು.

ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ, ಕಾಂಗ್ರೆಸ್ಸಿಗೆ ಸೇರಿದವರಲ್ಲಿ ಪ್ರಮುಖರು
ಟಿಕೆಟ್ ಆಕಾಂಕ್ಷಿಯಾಗಿದ್ದ, ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ, ಕಾಂಗ್ರೆಸ್ಸಿಗೆ ಸೇರಿದವರಲ್ಲಿ ಪ್ರಮುಖರಾಗಿದ್ದಾರೆ. ಇವರ ಜೊತೆಗೆ ಇವರ ಅಭಿಮಾನಿಗಳು, ವಿವಿಧ ಮುಖಂಡರು, ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್, ಇವರನ್ನೆಲ್ಲಾ ಬರಮಾಡಿಕೊಂಡು ಕಾಂಗ್ರೆಸ್ ಧ್ವಜವನ್ನು ನೀಡಿದರು. ಈ ವೇಳೆ ಸಂಸದ ಡಿಕೆ ಸುರೇಶ್ ಕೂಡ ಉಪಸ್ಥಿತರಿದ್ದರು.

ಕುಮಾರಣ್ಣ ಇನ್ನೊಬ್ಬರನ್ನು ಮೇಲೆ ಬರಲು ಬಿಡುವುದಿಲ್ಲ
"ಜೆಡಿಎಸ್ ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸುವ ಕೆಲಸ ನಡೆಯುತ್ತಿಲ್ಲ. ಹಲವು ವರ್ಷಗಳಿಂದ ನಾವೆಲ್ಲಾ ಜೆಡಿಎಸ್ ನಲ್ಲಿದ್ದೇವೆ. ಕುಮಾರಣ್ಣ ನಮ್ಮ ನಾಯಕರು ಅಂದುಕೊಂಡಿದ್ದೆವು. ಆದರೆ, ಅವರು ಇನ್ನೊಬ್ಬರನ್ನು ಮೇಲೆ ಬರಲು ಬಿಡುವುದಿಲ್ಲ" ಎಂದು ಪಕ್ಷ ಸೇರಿದ ಮುಖಂಡರು ಬೇಸರ ವ್ಯಕ್ತ ಪಡಿಸಿದರು.
Recommended Video

ಸಿದ್ದರಾಮಯ್ಯನವರು ಈಗಾಗಲೇ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ
"ಸಿದ್ದರಾಮಯ್ಯನವರು ಈಗಾಗಲೇ ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡಿದ್ದಾಗಿದೆ. ಈಗ ಅವರ ಜೊತೆ ಇವರೂ (ಡಿಕೆಶಿ) ಕೈಜೋಡಿಸಿದ್ದಾರೆ. ನಮ್ಮ ಇದುವರೆಗಿನ ರಾಜಕೀಯದಲ್ಲಿ, ಕಾಂಗ್ರೆಸ್ ಅಧ್ಯಕ್ಷರ ವಿರುದ್ದವೇ ಹೋರಾಟ ನಡೆಸಿಕೊಂಡು ಬಂದವರು. ಪಕ್ಷದ ಮುಖಂಡರಾದ ಕೂಡಲೇ ಒಂದು ಸಮುದಾಯವನ್ನು ಜೊತೆಗೆ ಕರೆದುಕೊಂಡು ಹೋಗುತ್ತೇನೆ ಎನ್ನುವ ಭ್ರಮೆ ಸರಿಯಲ್ಲ" ಎಂದು ಕುಮಾರಸ್ವಾಮಿ ಹೇಳಿದ್ದರು.












Click it and Unblock the Notifications