ಲಿಂಗನ ಹತ್ಯೆ ಬಳಿಕ ಬೆಂಗಳೂರು ಪಾತಕ ಲೋಕ ಅಧಿನಾಯಕ ಸ್ಥಾನಕ್ಕಾಗಿ ಪೈಪೋಟಿ ?

ಬೆಂಗಳೂರು, ಡಿಸೆಂಬರ್ 29: ಸದ್ದಿಲ್ಲದೇ ಮಲಗಿದ್ದ ಬೆಂಗಳೂರು "ಭೂಗತ ಲೋಕ" ಮತ್ತೆ ಪುಟಿದೇಳುತ್ತಿದೆ. ಶಾಂತಿನಗರ ಲಿಂಗರಾಜ್ ಹತ್ಯೆಯ ಬಳಿಕ ಬೆಂಗಳೂರಿನ ಅಂಡರ್ ವರ್ಲ್ಡ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿವೆ. ಪರಪ್ಪನ ಅಗ್ರಹಾರ ಜೈಲು ಭೂಗತ ಲೋಕದ ಚಟುವಟಿಕೆಯ ಸಕ್ರಿಯ ಕೇಂದ್ರವಾಗಿದೆ. ರಿಯಲ್ ಎಸ್ಟೇಟ್ ದಂಧೆ ಆಳುವ ಅವಕಾಶಕ್ಕಾಗಿ ರಾಜಧಾನಿಯ ರೌಡಿ ಸಾಮ್ರಾಜ್ಯದ ಅಧಿನಾಯಕ ಸ್ಥಾನಕ್ಕಾಗಿ ಸದ್ದಿಲ್ಲದೇ ಪೈಪೋಟಿ ಶುರುವಾಗಿದೆ.

ಲಿಂಗನ ಹತ್ಯೆ ಸುತ್ತ: ಶಾಂತಿನಗರ ಲಿಂಗ ಅಲಿಯಾಸ್ ಲಿಂಗರಾಜ್ ಕೆಲ ದಿನಗಳ ಹಿಂದಷ್ಟೇ ಊಹೆಗೂ ನಿಲುಕದ ರೀತಿಯಲ್ಲಿ ಹೆಣವಾಗಿದ್ದ. ಹಾಸನದ ಫಾರಂಹೌಸ್ ನಲ್ಲಿದ್ದ ಲಿಂಗರಾಜ್ ಮನೆ ಮೇಲೆ ಏಕಾಏಕಿ ಹನ್ನೆರಡು ಹುಡುಗರ ತಂಡ ನುಗ್ಗಿತ್ತು. ಡಬಲ್ ಮೀಟರ್ ಮೋಹನ್ ಮತ್ತು ಸಹಚರರು ಸೇರಿ ಲಿಂಗನನ್ನು ಫಾರಂ ಹೌಸ್‌ನಲ್ಲಿಯೇ ಕೊಚ್ಚಿ ಹಾಕಿದ್ದರು. ಅಲ್ಲಿಗೆ ಬೆಂಗಳೂರು ಪಾತಕ ಲೋಕದಲ್ಲಿ ನಂಬಿಕೆ ಎಂಬುದು ಸಮಾಧಿಯಾಗಿತ್ತು ! ಪರಪ್ಪನ ಅಗ್ರಹಾರ ಜೈಲಿನ ಕಿವಿಗಳು ಅಲರ್ಟ್ ಆದವು. ಸಂಚು, ಹೊಂಚು, ಎತ್ತಿ ಕಟ್ಟುವ, ಹೆಣ ಬೀಳಿಸುವ ಚಟುವಟಿಕೆಗಳು ಗರಿಗೆದರಿದ್ದವು.

ಲಿಂಗನ ಹತ್ಯೆ ವಿಚಾರದಲ್ಲಿ ಪೊಲೀಸರೇ ಸಹಕಾರ ಮಾಡಿದ್ದಾರೆ. ಲಿಂಗ ಎಲ್ಲಿದ್ದಾನೆ ಎಂಬುದರ ಮಾಹಿತಿಯನ್ನು ಹಂತಕರಿಗೆ ಪೊಲೀಸರೇ ಲೊಕೇಷನ್ ತೆಗೆದುಕೊಟ್ಟಿದ್ದರಿಂದಲೇ ಹಂತಕರು ನೇರವಾಗಿ ಲಿಂಗನ ಮನೆಗೆ ನುಗ್ಗಿ ವಿಲ್ಸನ್ ಗಾರ್ಡನ್ ನಾಗನ ಸಹಚರರು ಹತ್ಯೆ ಮಾಡಿದ್ದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಲಿಂಗರಾಜ್ ರಾಜಕೀಯ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದವ. ಮಿಗಿಲಾಗಿ ಬೆಂಗಳೂರಿನ ಮಟ್ಟಿಗೆ ಸದ್ಯಕ್ಕೆ ಅಗ್ರಸ್ಥಾನದಲ್ಲಿ ಕೇಳಿ ಬರುವ ಸೈಲೆಂಟ್ ಸುನೀಲ್ ನ ಪಾಲಿಗೆ ಬಲಗೈ ಬಂಟ. ಹೀಗಾಗಿ ಲಿಂಗನನ್ನು ಮುಟ್ಟುವ ಧೈರ್ಯ ಯಾರಿಗೂ ಇರಲಿಲ್ಲ. ಒಂಟೆ ರೋಹಿತ್, ಸೈಲೆಂಟ್ ಸುನೀಲನ ನೆರಳಿನಲ್ಲಿದ್ದ ಲಿಂಗ ಕೊಲೆಯಾಗುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ.

After the murder of linga, a few changes in Bangalores Under world!

ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಲಿಂಗನ ಹತ್ಯೆಗೆ ಸಂಚು ರೂಪಿಸಲಾಗಿದೆ. ಸುಮಾರು ನಲವತ್ತುಕ್ಕೂ ಹೆಚ್ಚು ಅಪರಾಧ ಪ್ರಕರಣ ಎದುರಿಸುತ್ತಿರುವ ವಿಲ್ಸನ್ ಗಾರ್ಡನ್ ನಾಗ ಜೈಲಿನಲ್ಲಿಯೇ ಕೂತು ಎದುರಾಳಿ ಲಿಂಗನ ಹತ್ಯೆಗೆ ಸಂಚು ರೂಪಿಸಿ ಅದನ್ನು ಕಾರ್ಯಗತಗೊಳಿಸಿದರು. ಡಬಲ್ ಮೀಟರ್ ಮೋಹನ ಮತ್ತು ಸಹಚರರು ಹತ್ಯೆ ಮಾಡಿದರು ಎಂಬ ಮಾತು ಲಿಂಗನ ಆಪ್ತ ವಲಯದಿಂದಲೇ ಕೇಳಿಬಂದಿದೆ.

ರೋಹಿತ್ ಮತ್ತು ಸುನೀಲ ನಡುವೆ ವೈಮನಸ್ಯ?: ಶಾಂತಿನಗರ ಲಿಂಗ ಸೈಲೆಂಟ್ ಸುನೀಲ್ ಬಲಗೈ ಬಂಟ. ಅದೇ ರೀತಿ ರೋಹಿತ್ ಪಾಲಿಗೆ ವಿಲ್ಸನ್ ಗಾರ್ಡನ್ ನಾಗ ಆಪ್ತ ಸಹೋದರ ಎಂಬಂತೆ ಗುರುತಿಸಿಕಂಡಿದ್ದ.. ಅಚ್ಚರಿ ಏನೆಂದರೆ ಶಾಂತಿನಗರ ಲಿಂಗ ಮತ್ತು ನಾಗನಿಗೂ ಆಗುತ್ತಿರಲಿಲ್ಲ. ಆದರೆ ಇಲ್ಲಿ ಇವರಿಬ್ಬರ ಗುರುಗಳಾದ ಸೈಲೆಂಟ್ ಸುನೀಲ್ ಮತ್ತು ಒಂಟೆ ರೋಹಿತ್ ಪರ ಮಾಪ್ತರು. ಶಾಂತಿನಗರ ಲಿಂಗ ಮತ್ತು ನಾಗನನ್ನು ಒಗ್ಗೂಡಿಸಿ ಒಂದು ಮಾಡುವ ಪ್ರಯತ್ನಗಳು ನಡೆದು, ಅವು ವಿಫಲಗೊಂಡಿದ್ದವು. ಆದರೆ, ಲಿಂಗನ ತಂಟೆಗೆ ನಾಗನಾಗಲೀ, ನಾಗನ ತಂಟೆಗೆ ಲಿಂಗನಾಗಲೀ ಹೋಗುತ್ತಿರಲಿಲ್ಲ.

ಜೈಲಿನಲ್ಲಿರುವ ನಾಗ ಹೊರ ಬರುತ್ತಿದ್ದಂತೆ ಮುಗಿಯುತ್ತಾನೆ. ಲಿಂಗನೇ ಮುಗಿಸುತ್ತಾನೆ ಎಂಬ ಮಾತುಗಳು ಹರಿದಾಡಿದ್ದವು. ಕಲ್ಲಿಗೆ ಸಿಕ್ಕಿ ಅಪ್ಪಚ್ಚಿಯಾಗುವ ರೀತಿ ಲಿಂಗರಾಜ್ ಫಾರಂಹೌಸ್ ನಲ್ಲಿ ಕೊಲೆಯಾಗಿ ಹೋಗಿದ್ದೇ, ತನ್ನ ಬಲಗೈ ಬಂಟನನ್ನು ಕಳೆದುಕೊಂಡ ಸೈಲೆಂಟ್ ಸುನೀಲ್ ನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದು ರೋಹಿತ್ ಮತ್ತು ಸೈಲೆಂಟ್ ಸುನೀಲ್ ಇಬ್ಬರ ನಡುವೆಯೇ ವೈಮನಸ್ಯ ಉಂಟು ಮಾಡುವಂತಹ ಸನ್ನಿವೇಶ ತಂದಿಟ್ಟಿದೆ.

After the murder of linga, a few changes in Bangalores Under world!

ಸದ್ಯ ಜೈಲಿನಲ್ಲಿರುವ ರೋಹಿತ್ ನ ಆಪ್ತ ವಿಲ್ಸನ್ ಗಾರ್ಡನ್ ನಾಗ ಮಾತ್ರ ತಾನು ಅಂದುಕೊಂಡಿದ್ದನ್ನು ಸಾಧಿಸಿದ್ದೇನೆ ಎಂಬ ಗುಂಗಲ್ಲಿ ತೇಲಾಡುತ್ತಿದ್ದಾನೆ. ಉನ್ನತ ಮೂಲಗಳ ಪ್ರಕಾರ, ರೌಡಿ ಶೀಟರ್ ಲಿಂಗರಾಜು ಹತ್ಯೆ ದಿನ ಮಾರ್ಕೆಟ್ ನ ಮತ್ತೊಬ್ಬ ರೌಡಿ ಕೊಲೆಯಾಗಬೇಕಿತ್ತು. ಆದರೆ ರೂಪಿಸಿದ್ದ ಪ್ಲಾನ್ ತಪ್ಪಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರು ಪಾತಕ ಲೋಕದ ಚಿತ್ರಣವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಹೊರ ವಲಯದಲ್ಲಿ ರಿಯಲ್ ಎಸ್ಟೇಟ್ ವಹಿವಾಟು ಚೆನ್ನಾಗಿಯೇ ನಡೆಯುತ್ತಿದೆ. ಆನೇಕಲ್ ವಿಭಾಗದ ರಿಯಲ್ ಎಸ್ಟೇಟ್ ಮೇಲೆ ಮೇಲೆ ಪಾರುಪತ್ಯ ಹೊಂದಿರುವ ಜೆಸಿಬಿ ನಾರಾಯಣನ ಆಟಕ್ಕೆ ಪರಿಸಮಾಪ್ತಿ ಮಾಡಲು ಒಂದು ವರ್ಗ ನಿರ್ಧರಿಸಿದೆ. ರಾಜಕೀಯವಾಗಿ ಗುರುತಿಸಿಕೊಂಡಿರುವ ಗೊಟ್ಟಿಗೆರೆ ಮಂಜು, ರಿಯಲ್ ಎಸ್ಟೇಟ್ ದಂಧೆ ಕೈಗೆ ತೆಗೆದುಕೊಂಡಿದ್ದಾರೆ. ಮಿಗಿಲಾಗಿ ಪ್ರಭಾವಿ ರಾಜಕಾರಣಿಗಳ ಸಂಪರ್ಕದಲ್ಲಿದ್ದಾರೆ. ರೌಡಿ ವರ್ಗಗಳ ನಡುವೆ ತನಗೆ ಪರಿಚಿತ ಪೊಲೀಸ್ ಅಧಿಕಾರಿಗಳ ಮೂಲಕ ಎತ್ತಿ ಕಟ್ಟುವ ಕೆಲಸದಲ್ಲಿ ನಿರತರಾಗಿರುವ ಬಗ್ಗೆ ಜೆಸಿಬಿ ನಾರಾಯಣನ ಪಟಾಲಂ ಕಣ್ಣಿಟ್ಟಿದೆ ಎಂಬ ಮಾತುಗಳು ಇತ್ತೀಚೆಗೆ ಹರಿದಾಡುತ್ತಿವೆ.

ಹೈ ಪ್ರೊಫೈಲ್ ಹತ್ಯೆಗಳ ಮೂಲಕ ಕುಖ್ಯಾತಿ ಗಳಿಸಿರುವ ವಿಲ್ಸನ್ ಗಾರ್ಡನ ನಾಗ ಆಂಧ್ರ ಪ್ರದೇಶದಲ್ಲೂ ರಾಜಕೀಯ ಪ್ರಭಾವಿ ವ್ಯಕ್ತಿಗಳ ಲಿಂಕ್ ಹೊಂದಿದ್ದಾರೆ. ಮಾತ್ರವಲ್ಲ, ತನ್ನ ಜಾತಿ ಆಧಾರಿತ ಪಾತಕ ಲೋಕ ಬೆಂಗಳೂರಿನಲ್ಲಿ ಸೃಷ್ಟಿಸಿ ಆಳ್ವಿಕೆ ನಡೆಸಲು ತಯಾರಿ ನಡೆಸಿದ್ದಾನೆ. ಈ ನಿಟ್ಟಿನಲ್ಲಿ ಮುಂಬಯಿನಿಂದ ಹಿಡಿದು ಬೆಂಗಳೂರಿನ ವರೆಗೂ ಸಕ್ರಿಯವಾಗಿರುವ ರೌಡಿಗಳನ್ನು ಒಗ್ಗೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ.

After the murder of linga, a few changes in Bangalores Under world!

ಸದ್ದಿಯಲ್ಲದೇ ಸೈಲೆಂಟ್ ಆಗಿದ್ದ ಬೆಂಗಳೂರು ಅಂಡರ್ ವರ್ಲ್ಡ್ ಈಗ ಸದ್ಯ ಬಣಗಳಾಗಿ ಬದಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ರಾಜಕೀಯ ಪ್ರಭಾವಿತ ವ್ಯಕ್ತಿ ತನ್ನ ರಿಯಲ್ ಎಸ್ಟೇಟ್ ಚಕ್ರಾಧಿಪತ್ಯಕ್ಕಾಗಿ ರೌಡಿ ಬಣಗಳ ನಡುವೆ ಎತ್ತಿಕಟ್ಟುತ್ತಿದ್ದಾರೆ ಎಂಬ ಮಾತಿದೆ. ರಿಯಲ್ ಎಸ್ಟೇಟ್ ವಹಿವಾಟಿನೊಂದಿಗೆ ಲಿಂಕ್ ಇರುವ ಪೊಲೀಸ್ ಅಧಿಕಾರಿಗಳು ಕೂಡ ರೌಡಿ ಬಣಗಳ ನಡುವೆ ಎತ್ತಿಕಟ್ಟುತ್ತಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

Recommended Video

      Kashmirದಿಂದ Kanyakumari ವರೆಗೆ 'ವೀರ'ಯಾತ್ರೆ ಹೊರಟ ದಿವ್ಯಾಂಗ ಯೋಧರಿಗೆ ಹೂಮಳೆಯ ಸ್ವಾಗತ | Oneindia Kannada

      ರೌಡಿಸಂ ಮುಕ್ತಾಯ ಅಥವಾ ಆರಂಭ: ಬೆಳೆದು ನಿಂತ ರೌಡಿಯನ್ನು ಎಳೆಯ ಹುಡುಗನಿಂದ ಮುಗಿಸಿ ಆತನನ್ನು ಪೊಲೀಸರು ಮುಗಿಸುವ ಸಿನಿಮಾ ಸ್ಟೋರಿಗಳು, ನಿಜ ಬದುಕಿನ ರಕ್ತ ಚರಿತ್ರೆ ಘಟನೆಗಳಿಗೂ ಭಿನ್ನತೆ ಏನೂ ಇಲ್ಲ. ಆದರೆ, ಪೊಲೀಸರು ರೌಡಿ ಬಣಗಳ ನಡುವೆ ಎತ್ತಿ ಕಟ್ಟಿ ರೌಡಿಸಂ ಮುಕ್ತಾಯ ಮಾಡಲು ಮುಂದಾಗಿದ್ದರೋ ಅಥವಾ ? ಸ್ವಯಂ ಲಾಭಕ್ಕಾಗಿ ರೌಡಿಸಂ ಬೆಳೆಯಲು ಖಾಕಿ ಮರೆತು ರೌಡಿಸಂಗೆ ಸಹಾಯ ಮಾಡುತ್ತಿದ್ದಾರೋ ಗೊತ್ತಿಲ್ಲ. ಪಾತಕ ಲೋಕದ ಬೆಳವಣಿಗೆ ನೋಡಿದರೆ, ಬೆಂಗಳೂರು ಭೂಗತ ಲೋಕದ ರಕ್ತ ಸಿಕ್ತ ಪುಟಗಳ ಮತ್ತೊಂದು ಆಧ್ಯಾಯ ಆರಂಭ ಎಂದೇ ಹೇಳಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+