ಚುನಾವಣೆಯಲ್ಲಿ ಸೋತ ಬಳಿಕ ಡಿ.ಕೆ ರವಿ ಪತ್ನಿ ಕುಸುಮಾ ಎಲ್ಲಿ ಹೋದರು?
ಬೆಂಗಳೂರು, ನವೆಂಬರ್21: ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿಗೆಲ್ಲುವ ಭರವಸೆ ಮೂಡಿಸಿ ಸೋತ ಡಿ.ಕೆ. ರವಿ ಪತ್ನಿ ಕುಸುಮಾ ಅವರು ಈಗ ಎಲ್ಲಿದ್ದಾರೆ ? ಏನು ಮಾಡುತ್ತಿದ್ದಾರೆ ? ಹೀಗೊಂದು ಪ್ರಶ್ನೆ ಪ್ರತಿಯೊಬ್ಬರಲ್ಲೂ ಮೂಡಿದರೂ ಅಚ್ದರಿಯೇನಲ್ಲ. ಡಿ.ಕೆ. ರವಿ ಪತ್ನಿ ಕುಸುಮಾ ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಸೋತ ಬಳಿಕ ಎದೆ ಗುಂದಿಲ್ಲ. ಬದಲಿಗೆ ಒಂದಲ್ಲಾ ಒಂದು ದಿನ ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆಯೊಂದಿಗೆ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಮತ್ತೊಂದಡೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದಂತಹ ನಿರಾತಂಕ ಸ್ವಯಂ ಸೇವಾ ಸಂಸ್ಥೆ ಮೂಲಕ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕುಸುಮಾ ಅವರು ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿ ನಿರತರ ಕನ್ನಡ ಸಮ್ಮೇಳನ ಆಯೋಜಿಸಿ ಯಶಸ್ವಿಗೊಳಿಸಿದ್ದಾರೆ.
ಉಪ ಚುನಾವಣೆ ವೇಳೆ ಬಹುತೇಕ ಕಾರ್ಪೋರೇಟರ್ ಗಳನ್ನು ಹಾಲಿ ಶಾಸಕ ಮನಿರತ್ನಂ ಸೆಳೆದಿದ್ದರು. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಎರಡನೇ ಹಂತದ ನಾಯಕರ ಕೊರತೆ ಎದ್ದು ಕಾಣುತ್ತಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಎರಡನೇ ಹಂತದ ನಾಯಕರನ್ನಾಗಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ರೂಪಿಸಿರುವ ಕುಸುಮಾ ಕಾರ್ಯಕರ್ತರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ಜತೆ ಜತೆಗೂ ತನ್ನ ಸಮಾಜ ಮುಖಿ ಕಾರ್ಯಗಳನ್ನು ಮುಂದುವರೆಸುತ್ತಿದ್ದಾರೆ. ನ. 14 ಮಕ್ಕಳ ದಿನಾಚರಣೆ ದಿನ ಅನಾಥಾಶ್ರಮಗಳಿಗೆ ಹೋಗಿ ಮಕ್ಕಳ ಜತೆ ಕಾಲ ಕಳೆದಿದ್ದಾರೆ. ಅನ್ನಪೂರ್ಣೇಶ್ವರಿನಗರ ಹಾಗೂ ಜೆ.ಪಿ. ಪಾರ್ಕ್ ಬಳಿಯಿರುವ ಅನಾಥಾಶ್ರಮಗಳಿಗೆ ಭೇಟಿ ನೀಡಿರುವ ಕುಸುಮಾ ಮಕ್ಕಳ ಮುಗ್ಧತೆಯೊಂದಿಗೆ ಕಾಲ ಕಳೆದಿದ್ದಾರೆ.

ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕುಸುಮಾ ಕಾರ್ಯಕರ್ತರ ನಡುವೆ ಸಮಾಲೋಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಸೋತ ಬಳಿಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪಕ್ಷದ ಸಂಘಟನೆ, ವಿರೋಧ ಪಕ್ಷವಾಗಿ ಕ್ಷೇತ್ರದಲ್ಲಿ ಕೈಗೊಳ್ಳಬಹುದಾದ ಕಾರ್ಯ ಯೋಜನೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ಬಂದಿದ್ದಾರೆ ಎಂಬ ಮಾಹಿತಿಯನ್ನು ಅವರ ಆಪ್ತರು ಹಂಚಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುವಾಗ ಡಿ.ಕೆ. ರವಿ ಇಡೀ ರಾಜ್ಯಕ್ಕೆ ಪರಿಚಿತರಾಗಿದ್ದರು. ಅವರ ಆತ್ಮಹತ್ಯೆಯ ಬಳಿಕ ನೊಂದಿದ್ದ ಕುಸುಮಾ ಅವರು ಅದರ ನೋವಿನಿಂದ ಬಂದಿರಲಿಲ್ಲ. ಪತಿಯನ್ನು ಕಳೆದುಕೊಂಡು ನಾನಾ ಆರೋಪಗಳನ್ನು ಎದುರಿಸಬೇಕಾಯಿತು ಹೆಚ್ಚಿನ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳಿ ಸ್ನಾತಕೋತ್ತರ ಪದವಿ ಮುಗಿಸಿ ವಾಪಸು ಬಂದಿದ್ದರು.
ಕಾಲೇಜಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕುಸುಮಾ ಅವರು ಅನಿರೀಕ್ಷತವಾಗಿ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ರಾಜಕೀಯ ಭವಿಷ್ಯದ ಪರೀಕ್ಷೆಗೆ ಇಳಿದಿದ್ದರು. ಆದರೆ ಚುನಾವಣೆ ಫಲಿತಾಂಶ ನಿರೀಕ್ಷೆ ಹುಸಿ ಮಾಡಿತ್ತು. ಬದುಕಿನಲ್ಲಿ ಸೋಲುಂಡ ಕುಸುಮ ಅವರ ರಾಜಕೀಯ ಅದೃಷ್ಟ ಕೂಡ ಕೈಕೊಟ್ಟಿತ್ತು. ಸೋಲಿಗೆ ಶರಣಾಗದೇ ರಾಜಕೀಯದಲ್ಲಿಯೇ ಯಶಸ್ವು ಗಳಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.











Click it and Unblock the Notifications