ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಖಡಕ್ ಅಧಿಕಾರಿ ಎಂಟ್ರಿ!
ಬೆಂಗಳೂರು, ಏ. 16: ಗುತ್ತಿಗೆದಾರ ಸಂತೋಷ್ ಪಾಟೀಲ್ ನಿಗೂಢ ಸಾವಿನ ಪ್ರಕರಣದ ತನಿಖೆಗೆ ಖಡಕ್ ಪೊಲೀಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರನ್ನು ನೇಮಿಸಲಾಗಿದೆ. ಯಾವುದೇ ಸಣ್ಣ ಸುಳಿವೂ ಇಲ್ಲ ಪ್ರಕರಣಗಳನ್ನು ಪತ್ತೆ ಮಾಡುವ ಮೂಲಕ ಹೆಸರಾಗಿರುವ ಎಡಿಜಿಪಿ ಪ್ರತಾಪ್ ರೆಡ್ಡಿ ಅವರು ಸಂತೋಷ್ ಪಾಟೀಲ್ ಪ್ರಕರಣದ ತನಿಖೆಗೆ ಎಂಟ್ರಿ ಕೊಟ್ಟಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದಿತ್ತು. ಪ್ರತಿಪಕ್ಷಗಳ ಹೋರಾಟದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಜತೆಗೆ ಪಕ್ಷದ ವರ್ಚಸ್ಸಿಗೆ ಈ ಪ್ರಕರಣ ತುಂಬಾ ಪೆಟ್ಟು ನೀಡಿದೆ. ಹೀಗಾಗಿ ಸಂತೋಷ್ ಪಾಟೀಲ್ ಪ್ರಕರಣದ ಬಗ್ಗೆ ಅನುಮಾನ ಮೂಡಿದ್ದು, ಈ ಹಿನ್ನೆಲೆಯಲ್ಲಿ ಖಡಕ್ ಅಧಿಕಾರಿಯನ್ನು ನಿಯೋಜಿಸಲಾಗಿದೆ.
ಐದು ಆಯಾಮಗಳ ಬಗ್ಗೆ ತನಿಖೆ:
ಸಂತೋಷ್ ಸೇವಿಸಿರುವ ನಿಷೇಧಿತ ಕ್ರಿಮಿನಾಶಕ ಖರೀದಿಸಿದ್ದು ಎಲ್ಲಿ? ನಿಷೇಧಿತ ಕ್ರಿಮಿನಾಶಕ ಯಾರು ಪೂರೈಸಿದರು ಎಂಬುದರ ಬಗ್ಗೆ ಒಂದು ತಂಡ ತನಿಖೆ ನಡೆಸುತ್ತಿದೆ. ಇದರ ಜತೆಗೆ ಸಂತೋಷ್ ಪಾಟೀಲ್ ಆತ್ಮಹತ್ಯೆ ಮುನ್ನ ದಿನ ತಂಗಿದ್ದ ಚಿಕ್ಕಮಗಳೂರಿನ ಹೋಮ್ ಸ್ಟೇ ಗೆ ತೆರಳಿರುವ ಪೊಲೀಸರ ತಂಡ ಮಹತ್ವದ ಮಾಹಿತಿ ಕಲೆ ಹಾಕಿದೆ.
ಸಂತೋಷ್ ಜತೆ ಬಂದಿದ್ದ ಇಬ್ಬರ ಸ್ನೇಹಿತರು ಜತೆಗಿದ್ದರೇ ? ಯಾರ ಹೆಸರಿನಲ್ಲಿ ಹೋಮ್ ಸ್ಟೇ ಬುಕ್ ಮಾಡಲಾಗಿತ್ತು. ಸದ್ಯದ ಮಾಹಿತಿ ಪ್ರಕಾರ ಸಂತೋಷ್ ಪಾಟೀಲ್ ಗೆ ಹೋಮ್ ಸ್ಟೇ ನ್ನು ನವೀನ್ ಹೆಸರಿನಲ್ಲಿ ಬುಕ್ ಮಾಡಲಾಗಿದೆ. ನವೀನ್ ಯಾರು ? ಆತ ಯಾಕೆ ತನ್ನ ಹೆಸರಿನಲ್ಲಿ ಬುಕ್ ಮಾಡಿದ ಎಂಬುದರ ಬಗ್ಗೆ ಪೊಲೀಸರು ಹೋಮ್ ಸ್ಟೇ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಮಾದೇಶ ಮತ್ತು ರಮೇಶ್ ಇಬ್ಬರು ಸ್ನೇಹಿತರೊಂದಿಗೆ ಸಂತೋಷ್ ಪಾಟೀಲ್ ಒಂದೇ ಕೊಠಡಿಯಲ್ಲಿ ತಂಗಿದ್ದ. ಆದರೆ, ಉಡುಪಿ ಶಾಂಭವಿ ಹೋಟೆಲ್ ನಲ್ಲಿ ಪ್ರತ್ಯೇಕವಾಗಿ ತಂಗಿದ್ದು, ಇದರ ಸುತ್ತ ನಾನಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅನುಮಾನದ ನಡೆ:
ಸಂತೋಷ್ ಪಾಟೀಲ್ ಆತ್ಮಹತ್ಯೆಗೂ ಮುನ್ನ ಮಾಡಿದ್ದ ಕಾಮಗಾರಿಗಳ ಬಿಲ್ಗಾಗಿ ದಿಲ್ಲಿ ನಾಯಕರನ್ನು ಎಡ ತಾಕಿದ್ದರು. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ಒಳಗೊಂಡಂತೆ, ಅಮಿತ್ ಷಾ, ಪ್ರಧಾನಿ ಮೋದಿ ಅವರಿಗೆ ದೂರು ನೀಡಿದ್ದರು. ಅಷ್ಟು ಧೈರ್ಯ ತೋರಿದ್ದ ಸಂತೋಷ್ ಆತ್ಮಹತ್ಯೆ ತೀರ್ಮಾನ ಯಾಕೆ ಮಾಡಿದ್ರು ? ಇದು ಕೂಡ ಷಡ್ಯಂತ್ರ್ಯದ ಭಾಗ ಎಂಬುದು ಬಿಜೆಪಿಯ ವಾದ. ಈ ಪ್ರಕರಣದಲ್ಲಿ ಬಿಜೆಪಿ ತೀವ್ರ ಮುಜುಗರ ಅನುಭವಿಸಿದ್ದು, ಡ್ಯಾಮೇಜ್ ಕಂಟ್ರೋಲ್ ಗೆ ಸಿಎಂ ನಾನಾ ಸಾಹಸ ಮಾಡುತ್ತಿದ್ದಾರೆ.
ಉಡುಪಿ ಎಸ್ಪಿ ವಿಷ್ಣುವರ್ಧನ್ ನೇತೃತ್ವದಲ್ಲಿ ಐದು ತನಿಖಾ ತಂಡಗಳು ಸಂತೋಷ್ ಪಾಟೀಲ್ ನಿಗೂಢ ಸಾವಿನ ಪ್ರಕರಣ ತನಿಖೆ ನಡೆಸುತ್ತಿವೆ. ಐದು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದು, ಅಂತೂ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆಯ ಹಿಂದಿನ ಅಸಲಿ ಕಾರಣವನ್ನು ಪೊಲೀಸರು ಶೀಘ್ರದಲ್ಲಿಯೇ ಬಹಿರಂಗಪಡಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777
Recommended Video