ಕಾಂಗ್ರೆಸ್-ಜೆಡಿಎಸ್ ನವರು ಡ್ರಾಮಾ ಕಂಪೆನಿಯವರು: ಜಗ್ಗೇಶ್
Recommended Video

ಬೆಂಗಳೂರು, ಏಪ್ರಿಲ್ 11: ಕಾಂಗ್ರೆಸ್ ಮತ್ತು ಜೆಡಿಎಸ್ನವರು ಡ್ರಾಮಾ(ನಾಟಕ) ಕಂಪನಿಯವರು. ವಿಧಾನ ಸಭಾ ಚುನಾವಣೆಯಲ್ಲಿ ಕಡಿಮೆ ಸ್ಥಾನಗಳನ್ನು ಪಡೆದಿದ್ದರೂ ಗೆಬರಿಕೊಂಡು ತಿನ್ನಲು ಒಂದಾಗಿ ರಾಜ್ಯದಲ್ಲಿ ಸರಕಾರ ರಚಿಸಿದ್ದಾರೆ. ಗಂಡ-ಹೆಂಡತಿ, ಲವ್ವರ್ಸ್ ಸಹ ನಾಚುವಂತೆ ತಬ್ಬಿಕೊಂಡಿದ್ದಾರೆ. ಭ್ರಷ್ಟಾಚಾರ ನಡೆಸಲು ಗ್ರೇಟ್ ಲವ್ವರ್ಸ್ ಆಗಿದ್ದಾರೆ ಎಂದು ಚಿತ್ರನಟ ಜಗ್ಗೇಶ್ ವ್ಯಂಗ್ಯವಾಡಿದರು.
ಗುರುವಾರ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಅವರ ಪರ ಪ್ರಚಾರ ನಡೆಸಿ ಮಾತನಾಡಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈಗ ರಾಜ್ಯದಲ್ಲಿ ಚೆನ್ನಾಗಿ ತಿನ್ನುತ್ತಿರುವ ಈ ಕಾಂಗ್ರೆಸ್-ಜೆಡಿಎಸ್ ಜೋಡಿ ದೇಶದಲ್ಲೆಲ್ಲಾ ಮಹಾಘಟಬಂಧನ್ ಹೆಸರಿನಲ್ಲಿ ಕೆಲಸವಿಲ್ಲದ ನಾಯಕರಿಗೆಲ್ಲಾ ಟ್ರೈನಿಂಗ್ ಕೊಡುತ್ತಿದೆ. ಕರ್ನಾಟಕದಲ್ಲಿ ನಾವು ತಿನ್ನುತ್ತಿದ್ದೇವೆ. ನೀವು ದೇಶದಲ್ಲೆಲ್ಲಾ ತಿನ್ನಿ ಎಂದು ಇವರಿಬ್ಬರೂ ಪಾಠ ಹೇಳಿಕೊಡುತ್ತಿದ್ದಾರೆ. ಖಿಚಡಿ-ಪಚಡಿ ಸರಕಾರವಿದು ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಉತ್ತಮ ಆಡಳಿತವಿದೆ. ಭಯೋತ್ಪಾದನೆ ವಿರುದ್ಧ ಮೋದಿಯವರು ಸಮರ ಸಾರಿದ್ದಾರೆ. ಪಾಕಿಸ್ತಾನಕ್ಕೇ ನುಗ್ಗಿ ಉಗ್ರರನ್ನು ಹೊಡೆದುರುಳಿಸುವ ಗಂಡಸ್ಥನ ತೋರಿಸಿದ್ದರೆ ಅದು ಮೋದಿಯವರು ಮಾತ್ರ. ಪಾರದರ್ಶಕ ಆಡಳಿತಕ್ಕೆ ಮೋದಿ ನಾಂದಿ ಹಾಡಿದ್ದಾರೆ. ಆದ್ದರಿಂದ ಅವರನ್ನು ಪುನಃ ಪ್ರಧಾನಿ ಮಾಡಬೇಕು ಎಂದು ಹೇಳಿದರು.

ಜನರ ಮುಖದಲ್ಲಿ ಮಂದಹಾಸ
ನನಗೆ ಬೇರೆ ಕಾರ್ಯಗಳಿದ್ದವು. ದೆಹಲಿಗೆ ಹೋಗಬೇಕಿತ್ತು. ಆದರೆ ಬಿಜೆಪಿ ಪರ ಪ್ರಚಾರ ಮಾಡಬೇಕಿರುವುದರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕಳೆದ 15 ದಿನದಿಂದ ಪ್ರಚಾರ ಮಾಡುತ್ತಿದ್ದೇನೆ. ಕಾಂಗ್ರೆಸ್-ಜೆಡಿಎಸ್ನವರು ಪ್ರಚಾರಕ್ಕೆ ಹೋದರೆ ಜನತೆ ಸ್ಪಂದಿಸುತ್ತಿಲ್ಲ. ಆದರೆ ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ಹೋದರೆ ಜನರ ಮುಖದಲ್ಲಿ ಮಂದಹಾಸ ಕಾಣಿಸುತ್ತಿದೆ. ಇದರಿಂದಲೇ ಗೊತ್ತಾಗುತ್ತದೆ ಯಾರು ಉತ್ತಮರು ಎಂದು ನುಡಿದರು.

'ದೇಶದ ಹಿತಕ್ಕಾಗಿ ಮೋದಿ ಸಿಕ್ಕಿದ್ದಾರೆ'
ದೇಶದ ಹಿತಕ್ಕಾಗಿ ಭಾರತ ಮಾತೆಯು ನರೇಂದ್ರ ಮೋದಿಯವರನ್ನು ನಮಗೆ ನೀಡಿರುವಂತಿದೆ. ಈ ಬಾರಿ ದೃಢ ಸಂಕಲ್ಪ ಮಾಡಿ. ನೀವು ಸದಾನಂದಗೌಡರಿಗೆ ನೀಡಿದ ನಿಮ್ಮ ಒಂದೊಂದು ಮತವೂ ಮೋದಿಯವರನ್ನು ತಲುಪುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ಪಾಕಿಸ್ತಾನ ಸಂಭ್ರಮಮಿಸುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.

'ಕಾಂಗ್ರೆಸ್ ದಶಕಗಳ ಕಾಲ ಕೊಳ್ಳೆ ಹೊಡೆದಿದೆ'
ಹಿಂದೆಲ್ಲಾ ಜನರಿಗೆ ರಾಜಕೀಯ ವಿದ್ಯಮಾನಗಳು ಅಷ್ಟಾಗಿ ಗೊತ್ತಾಗುತ್ತಿರಲಿಲ್ಲ. ಕಾಂಗ್ರೆಸ್ಗೆ ಮತ ಹಾಕುತ್ತಿದ್ದರಿಂದ ದಶಕಗಳ ಕಾಲ ದೇಶವನ್ನು ಕೊಳ್ಳೆ ಹೊಡೆದರು. ಆದರೆ ಈಗ ಕಾಲ ಬದಲಾಗಿದೆ. ಅಂಗೈನಲ್ಲಿರುವ ಮೊಬೈಲ್ನಿಂದಲೇ ಎಲ್ಲವನ್ನೂ ತಿಳಿದುಕೊಳ್ಳಬಹುದು. ಮೋದಿಯವರ ಆಡಳಿತ ವೈಖರಿ ನೀವೆಲ್ಲಾ ಗಮನಿಸಿದ್ದೀರಿ. ಭಾರತವನ್ನು ವಿಶ್ವದ ಮುಂಚೂಣಿಗೆ ತಂದು ನಿಲ್ಲಿಸಿದ ಬಿಜಿಪಿಗೆ ಮತ ನೀಡಿ ಎಂದು ಕೋರಿದರು.

ನವ ಭಾರತ ನಿರ್ಮಾಣಕ್ಕೆ ಮುಂದಾಗಿ:ಡಿವಿಎಸ್
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಮಾತನಾಡಿ, ಏ.18 ಪವಿತ್ರವಾದ ದಿವಸ. ತಪ್ಪದೇ ಎಲ್ಲರೂ ಮತ ಚಲಾಯಿಸಿ. ಕಳೆದ ಐದು ವರ್ಷದಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ನನ್ನನ್ನು ಬೆಂಬಲಿಸಿ. ನಿಮ್ಮ ನಂಬಿಕೆಗೆ ಚ್ಯುತಿ ಬರುವ ಯಾವ ಕಾರ್ಯವನ್ನೂ ನಾನು ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ತಮ್ಮ ಅಭಿವೃದ್ಧಿ ಕಾರ್ಯ ಹೇಳಿದ ಸದಾನಂದಗೌಡ
ಮೊದಲೆಲ್ಲಾ ಭರವಸೆ, ಪ್ರಣಾಳಿಕೆ ಆಧಾರದಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ನಡೆಯುತ್ತಿದೆ. ಇದು ಬದಲಾವಣೆಯ ಮುನ್ಸೂಚನೆಯಾಗಿದೆ. ಸಶಕ್ತ ಭಾರತಕ್ಕಾಗಿ ಮೋದಿಯವರು ಶ್ರಮಿಸುತ್ತಿದ್ದಾರೆ. ಇದಕ್ಕೆ ನೀವೆಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ರಕ್ಷಣಾ ಇಲಾಖೆಗೆ ಸೇರಿದ ಭೂಮಿಯನ್ನು ರಾಜ್ಯ ಸರಕಾರ ಮತ್ತು ಬಿಬಿಎಂಪಿಗೆ ಕೊಡಿಸಲು ನಾನು ಶ್ರಮಿಸಿದ್ದೇನೆ. ಉತ್ತರ ಲೋಕಸಭಾ ಕ್ಷೇತ್ರಕ್ಕೆ ಪಾಸ್ಪೋರ್ಟ್ ಕಚೇರಿ, ಕೇಂದ್ರೀಯ ವಿದ್ಯಾಲಯ ತಂದಿದ್ದೇನೆ. ಮೆಟ್ರೋ ಎರಡನೇ ಹಂತ, ಸಬರ್ಬನ್ ರೈಲು ಯೋಜನೆಗಳಿಗೆ ಸಹಕರಿಸಿದ್ದೇನೆ. ಇನ್ನೂ ಸಾಕಷ್ಟು ಕೆಲಸ ಮಾಡಬೇಕಿದ್ದು ತಮ್ಮನ್ನು ಪುನರಾಯ್ಕೆ ಮಾಡಬೇಕು ಎಂದು ಸದಾನಂದಗೌಡರು ಕೋರಿದರು. ಮಾಜಿ ಶಾಸಕ ಎಸ್.ಮುನಿರಾಜು, ಮುಖಂಡರಾದ ಡಿ.ಎಸ್.ವೀರಯ್ಯ, ಸುರೇಶ್, ಸರ್ವಮಂಗಳಾ ನಾಗರಾಜ್, ನರಸಿಂಹ ನಾಯಕ್, ಲೋಕೇಶ್, ಉಮಾದೇವಿ ನಾಗರಾಜ್, ಮಂಜುನಾಥ್, ರಮೇಶ್ ಯಾದವ್ ಮತ್ತಿತರರು ಹಾಜರಿದ್ದರು.












Click it and Unblock the Notifications