ನಟ ದರ್ಶನ್ಗೆ ಸಾಲು ಸಾಲು ಸಂಕಷ್ಟ: ಕಾರು ಓಡಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ್ರಾ ಪುತ್ರ ವಿನೀಶ್ ?
ಈಗಾಗಲೇ ಕೊಲೆ ಆರೋಪದಡಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಅವರ ಕುಟುಂಬಕ್ಕೆ ಒಂದರ ಹಿಂದೊಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ಇದೀಗ ದರ್ಶನ್ ಅವರ ಪುತ್ರ ವಿನೀಶ್ ಕಾರು ಓಡಿಸಿ ಅಪಘಾತ ಮಾಡಿರುವ ಸಾಧ್ಯತೆ ಇದೆ ಎಂಬ ಸುದ್ದಿ ಹೊರಬಿದ್ದಿದ್ದು, ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಹೋಗುತ್ತಿದ್ದಾಗ ಏಕಾಏಕಿ ದ್ವಿಚಕ್ರ ವಾಹನವೊಂದಕ್ಕೆ ವಿನೀಶ್ ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ರಸ್ತೆಯಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಏಕಾಏಕಿ ಕಾರು ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ. ಘಟನೆ ನಡೆದಾಗ ವಿನೀಶ್ ಅವರು KA01-MU9969 ನಂಬರ್ನ ಫೋರ್ಡ್ ಎಂಡೋವರ್ ಕಾರನ್ನು ಚಲಾಯಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿಸಿದ ಪರಿಣಾಮ ರಸ್ತೆಯಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಅಪಘಾತ ನಡೆದ ತಕ್ಷಣವೇ ಘಟನಾ ಸ್ಥಳದಲ್ಲಿ ಸಾಕಷ್ಟು ಜನರು ಜಮಾಯಿಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ವಿನೀಶ್ ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಸಿಟ್ಟಿಗೆದ್ದ ಸ್ಥಳೀಯರು, ನಟ ದರ್ಶನ್ ಪುತ್ರ ವಿನೀಶ್ಗೆ ರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ತಪ್ಪು ಯಾರದ್ದು ಎಂಬ ಬಗ್ಗೆ ಘಟನಾ ಸ್ಥಳದಲ್ಲಿ ಸಾಕಷ್ಟು ಹೊತ್ತು ವಾಗ್ವಾದ ನಡೆದಿದೆ.
ದರ್ಶನ್ ಕುಟುಂಬಕ್ಕೆ ಸಾಲು ಸಾಲು ಸಂಕಷ್ಟ
ಒಂದೆಡೆ ತಂದೆ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮತ್ತೊಂದೆಡೆ ಮಗ ವಿನೀಶ್ ಈ ರೀತಿಯ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಕುಟುಂಬದ ನೆಮ್ಮದಿ ಕೆಡಿಸಿದೆ. ಈಗಾಗಲೇ ಮಾನಸಿಕವಾಗಿ ಕುಗ್ಗಿ ಹೋಗಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಮಗನ ಈ ಘಟನೆ ಮತ್ತಷ್ಟು ಆತಂಕ ತಂದೊಡ್ಡಿದೆ.
ಪ್ರಸ್ತುತ ದರ್ಶನ್ ಅವರ ಮೇಲಿರುವ ಗಂಭೀರ ಆರೋಪಗಳ ನಡುವೆ, ಅವರ ಕುಟುಂಬದ ಪ್ರತಿಯೊಂದು ನಡೆಯನ್ನೂ ಸಾರ್ವಜನಿಕರು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿನೀಶ್ ಅವರು ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ವಾಗ್ವಾದಕ್ಕೆ ಇಳಿದಿರುವುದು ಮತ್ತಷ್ಟು ಟೀಕೆಗೆ ಗುರಿಯಾಗಿದೆ. ಒಟ್ಟಾರೆಯಾಗಿ ಸಾಲು ಸಾಲು ಸಂಕಷ್ಟಗಳು ದರ್ಶನ್ ಕುಟುಂಬವನ್ನು ಸುತ್ತುವರೆದಿವೆ.














Click it and Unblock the Notifications