ಬೆಂಗಳೂರು ಆಸಿಡ್ ದಾಳಿ; ಆಗಸ್ಟ್ 10ಕ್ಕೆ ಚಾರ್ಜ್ಶೀಟ್ ಸಲ್ಲಿಕೆ
ಬೆಂಗಳೂರು, ಆಗಸ್ಟ್ 09: ಸಿಲಿಕಾನ್ ಸಿಟಿಯಲ್ಲಿ ನಡೆದ ಆಸಿಡ್ ದಾಳಿ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಆಗಸ್ಟ್ 10ರಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟನ್ನು ಸಲ್ಲಿಕೆ ಮಾಡಲಿದ್ದಾರೆ. ಆರೋಪಿ ನಾಗೇಶ್ ವಿರುದ್ದ ಪ್ರಮುಖ ಸಾಕ್ಷ್ಯಗಳನ್ನು ಕಲೆಹಾಕಿದ್ದ ಪೊಲೀಸರು ಚಾರ್ಜ್ ಶೀಟ್ನಲ್ಲಿ ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕಾಮಾಕ್ಷಿಪಾಳ್ಯ ಪೊಲೀಸರು ಮೂರು ತಿಂಗಳ ಸುದೀರ್ಘ ತನಿಖೆಯ ಬಳಿಕ ಪೊಲೀಸರು 13 ನೇ ಎಸಿಎಂಎಂ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಇನ್ನು 770 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಇದಾಗಿದ್ದು, 92 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ಇಬ್ಬರು ಐ-ವಿಟ್ನೆಸ್ ಗಳ ಸಿಆರ್ಪಿಸಿ 164 ಅಡಿ ಸ್ಟೇಟ್ಮೆಂಟ್ ಗಳನ್ನೂ ದಾಖಲಿಸಿಕೊಳ್ಳಲಾಗಿದೆ.
ಬೆಂಗಳೂರು; ಅಂಗಡಿ ಮಾಲೀಕನಿಗೆ ಕನ್ನ ಹಾಕಿದ್ದ ಬೆಳ್ಳಿ ಕಳ್ಳರ ಬೇಟೆ !
ನಾಗೇಶ್ ಯುವತಿ ಮೇಲೆ ಆ್ಯಸಿಡ್ ಎರಚಿದ ಮೇಲೆ ತನ್ನ ಸಹೋದರನಿಗೆ ಕರೆ ಮಾಡಿದ್ದ ಆಡಿಯೋ ಸೇರಿ ಹಲವು ವಾಯ್ಸ್ ರೆಕಾರ್ಡ್ ಗಳನ್ನು ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿತ್ತು. ಈಗ ಅದು ನಾಗೇಶನ ಧ್ವನಿ ಎಂದು ಖಚಿತವಾಗಿದೆ. ಇನ್ನು ಈ ಹಿಂದೆ ನಾಗೇಶ್ ಹಾಗೂ ಸಂತ್ರಸ್ತೆಯ ನೀಡಿದ ಹೇಳಿಕೆಯ ಅಂಶಗಳು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿವೆ. ಇದೇ ವೇಳೆ ಸಾಕಷ್ಟು ಸಿಸಿಟಿವಿಗಳನ್ನೂ ದೃಶ್ಯಾವಳಿಗಳನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ಆ ಸಾಕ್ಷಿಗಳನ್ನು ಕೋರ್ಟ್ಗೆ ಸಲ್ಲಿಸಲಾಗುತ್ತದೆ.
ಆರೋಪಿಯ ವಿರುದ್ದ ಹೇಳಿಕೆ ಕೊಟ್ಟಿದ್ದ ಯುವತಿ
"ನಾನು ಮುತ್ತೂಟ್ ಮಿನಿ ಫೈನಾನ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದೇನೆ . ತಂದೆ ರಾಜು ಮನೆಯ ಬಳಿಯೇ ತರಕಾರಿ ಅಂಗಡಿ ಇಟ್ಟುಕೊಂಡಿರುತ್ತಾರೆ. ತಾಯಿ ಲಕ್ಷ್ಮಮ್ಮ ಗೃಹಿಣಿಯಾಗಿದ್ದಾರೆ. ನಮ್ಮ ತಂದೆ ತಾಯಿಗೆ ಮೂರು ಜನ ಮಕ್ಕಳು. ದೊಡ್ಡವಳು ಪ್ರೀತಿ ಸಾಫ್ಟ್ ವೇರ್ ಇಂಜಿನಿರ್ ಆಗಿ ಕೆಲಸ ಮಾಡಿಕೊಂಡಿದ್ದಾಳೆ. ನಾನು ಎರಡನೆಯವಳು, ಕೊನೆಯವನು ನನ್ನ ತಮ್ಮ ವಿಶ್ವಾಸ್. 28 ರ ಬೆಳಗ್ಗೆ 8.30 ಕ್ಕೆ ನನ್ನ ತಂದೆ ಮುತ್ತೂಟ್ ಮಿನಿ ಫೈನಾನ್ಸ್ ಗೆ ಡ್ರಾಪ್ ಮಾಡಿದ್ರು. ನಾನು ಮೊದಲನೇ ಮಹಡಿಯಲ್ಲಿರುವ ಕಚೇರಿಗೆ ಮೆಟ್ಟಿಲು ಹತ್ತಿಕೊಂಡು ಹೋದೆ. ಕಚೇರಿಗೆ ಯಾರು ಬಾರದೇ ಇದ್ದಾಗ ಕಚೇರಿ ಬಾಗಿಲ ಬಳಿಯೇ ನಿಂತುಕೊಂಡಿದ್ದೆ. ಆಗ ನಾಗೇಶ ಎಂಬಾತ ಕೈಯಲ್ಲಿ ಕವರ್ ನಲ್ಲಿ ಏನನ್ನೊ ಹಿಡಿದುಕೊಂಡು ಬಂದಿದ್ದ. ಆತನನ್ನು ನೋಡಿ ನಾನು ಕೆಳಗೆ ಓಡಲು ಪ್ರಯತ್ನಿಸಿದ್ದೆ. ಕೂಡಲೇ ನಾಗೇಶ ನನ್ನನ್ನು ಹಿಂಬಾಲಿಸಿಕೊಂಡು ಬಂದ" ಎಂದು ಯುವತಿ ಹೇಳಿಕೆ ನೀಡಿದ್ದಾಳೆ.
"ತನ್ನ ಕೈಯಲ್ಲಿದ್ದ ಆ್ಯಸಿಡ್ ಅನ್ನು ನನ್ನ ಮೈಮೇಲೆ ಹಾಕಿ ಓಡಿ ಹೋಗಿರುತ್ತಾನೆ. ಆಗ ನನ್ನ ಮುಂಭಾಗದ ಎದೆ, ಕೈಗಳು ಹಾಗೂ ಬೆನ್ನಿಗೆ ಆ್ಯಸಿಡ್ ಬಿದ್ದು ಗಾಯಗಳಾಗಿದೆ. ನಾನು ಫೋನ್ ಮಾಡಿ ನನ್ನ ತಂದೆಯನ್ನು ಸ್ಥಳಕ್ಕೆ ಬರಲು ತಿಳಿಸಿದೆ . ಸ್ಥಳಕ್ಕೆ ನಮ್ಮ ತಂದೆ ಬಂದು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಿದರು. ನಾಗೇಶ 7 ವರ್ಷದ ಹಿಂದೆ ದೊಡ್ಡಮ್ಮ ಸುಶೀಲಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದ, ಆತ ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ ನಾನು ಪ್ರೀತಿ ಮಾಡಲ್ಲ ಎಂದಾಗ ಆತ ಸುಮ್ಮನೆ ಇದ್ದ, ಈಗ ಮತ್ತೆ ಒಂದು ವಾರದಿಂದ ಹಿಂಬಾಲಿಸಿಕೊಂಡು ಬಂದು ಪ್ರೀತಿ ಮಾಡುವಂತೆ ಹಿಂದೆ ಬಿದ್ದಿದ್ದ. ಏಪ್ರಿಲ್ 27 ರಂದು 9 ಗಂಟೆ ನಾನು ಕೆಲಸ ಮಾಡುವ ಕಚೇರಿಗೆ ಬಂದಿದ್ದ ನಾಗೇಶ್, ನೀನು ನನ್ನನ್ನ ಪ್ರೀತಿಸಿ ಮದುವೆಯಾಗಲೇ ಬೇಕು ಇಲ್ಲದಿದ್ರೆ ಯಾರಿಗೂ ಸಿಗದಂತೆ ಮಾಡ್ತಿನಿ ಎಂದು ಧಮ್ಕಿ ಹಾಕಿದ್ದ ನಂತರ ಕಚೇರಿ ಮ್ಯಾನೇಜರ್ ಗೆ ಅವಳಿಗೆ ಏನು ಮಾಡ್ತಿನಿ ನೋಡ್ತಿರಿ ಎಂದು ಹೇಳಿಹೋಗಿದ್ದ. ಈ ವಿಚಾರವನ್ನು ಅಂದೇ ನನ್ನ ದೊಡ್ಡಮ್ಮನಿಗೂ ತಿಳಿಸಿದ್ದೆ. ದೊಡ್ಡಮ್ಮ ಕರೆ ಮಾಡಿ ನಾಗೇಶ ಅಣ್ಣನಿಗೂ ವಿಚಾರ ಹೇಳಿದರು. ನಾಗೇಶನ ಅಣ್ಣ ಬುದ್ಧಿವಾದ ಹೇಳೋದಾಗಿ ಹೇಳಿದ್ರು. ಆದರೆ ಏಪ್ರಿಲ್ 28 ರಂದು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಆ್ಯಸಿಡ್ ತೆಗೆದುಕೊಂಡು ಬಂದ ನನ್ನನ್ನು ಅಡ್ಡಗಟ್ಟಿ ಆ್ಯಸಿಡ್ ದಾಳಿ ಮಾಡಿದ್ದಾನೆ'' ಎಂದು ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್ ಎದುರು ನಡೆದ ಘಟನೆಯನ್ನು ಘಟನೆಯ ಉದ್ದೇಶವನ್ನು ಹೇಳಿದ್ದಳು.
ಸಾಕ್ಷ್ಯಧಾರ ಸಹಿತ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದತೆ
ಕಾಮಾಕ್ಷಿಪಾಳ್ಯ ಪೊಲೀಸರು ನಾಗೇಶ್ನನ್ನು ತಮಿಳುನಾಡಿನ ತಿರುವಣ್ಣಾಮಲೈಗೆ ಕರೆದುಕೊಂಡು ಹೋಗಿ ಮಹಜರು ಕಾರ್ಯವನ್ನು ಮಾಡಿದ್ದರು. ಆಸಿಡ್ ದಾಳಿಯ ವೇಳೆ ಧರಿಸಿದ್ದ ಬಟ್ಟೆಯನ್ನು ನಾಗೇಶ್ ನಿರ್ಜನ ಪ್ರದೇಶದಲ್ಲಿ ಹೂತಿಟ್ಟಿದ್ದ. ನಾಗೇಶ್ ಧರಿಸಿದ್ದ ಬಟ್ಟೆ ಮತ್ತು ಇನ್ನಿತರ ಪರಿಕರನ್ನು ಪೊಲೀಸರು ಭೂಮಿಯಿಂದ ಹೊರತಗೆದು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಈ ಎಲ್ಲಾ ಸಾಕ್ಷ್ಯಧಾರ ಸಹಿತ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಏಪ್ರಿಲ್ 28ರಂದು ನಡೆದಿದ್ದ ಘಟನೆ
ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯದಲ್ಲಿ ದುಷ್ಟ ನಾಗೇಶ್ ಪ್ರೀತಿಗೆ ನಿರಾಕರಿಸಿದ್ದ ಯುವತಿಗೆ ಆಸಿಡ್ ಎರಚಿದ್ದ. ಈ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸರು ಮೂರು ತಿಂಗಳ ಸುದೀರ್ಘ ತನಿಖೆಯ ಬಳಿಕ ಪೊಲೀಸರು 13 ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಇನ್ನು 770 ಪುಟಗಳ ಪ್ರಾಥಮಿಕ ಚಾರ್ಜ್ ಶೀಟ್ ಇದಾಗಿದ್ದು,92 ಸಾಕ್ಷಿಗಳನ್ನ ಉಲ್ಲೇಖಿಸಲಾಗಿದೆ. ಹಾಗೆಯೇ ಇಬ್ಬರು ಐ ವಿಟ್ನೆಸ್ ಗಳ crpc164 ಅಡಿ ಸ್ಟೇಟ್ಮೆಂಟ್ ಗಳನ್ನೂ ದಾಖಲಿಸಿಕೊಂಡಿದ್ದರು.
ಆರೋಪಿಗೆ ಕಠಿಣ ಶಿಕ್ಷೆಗೆ ಸಂತ್ರಸ್ತೆ ಮನವಿ
ಆಸಿಡ್ ದಾಳಿಯನ್ನು ನಡೆಸಿದ ನಾಗೇಶ್ ಸ್ವತಃ ತಪ್ಪೊಪ್ಪಿಕೊಂಡಿದ್ದಾನೆ. ಪ್ರೀತಿಗೆ ನಿರಾಕರಿಸಿದ್ದಕ್ಕೆ ಆಸಿಡ್ ಎರಚಿದ್ದನ್ನು ಒಪ್ಪಿಕೊಂಡಿದ್ದಾನೆ. ಇನ್ನು ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಪೊಲೀಸರಿಗೆ ಸಂತ್ರಸ್ತ ಯುವತಿಯು ಮನವಿಯನ್ನು ಮಾಡಿದ್ದಾಳೆ ಎಂದು ತಿಳಿದುಬಂದಿದೆ.
Recommended Video