ಅಚ್ಛೇ ದಿನ್ ಕೇವಲ ಬಾಯಿ ಮಾತಿನಲ್ಲಿ ಮಾತ್ರ - ಸಿದ್ದರಾಮಯ್ಯ
ಬೆಂಗಳೂರು, ಜುಲೈ 25: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ "ಅಚ್ಛೇ ದಿನ್ ಕೇವಲ ಬಾಯಿ ಮಾತಿನಲ್ಲಿ ಇದೆಯೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ. ಈ ಹಿಂದೆ ಬಿಜೆಪಿಯವರು ಇಂಡಿಯಾ ಶೈನಿಂಗ್ ಎಂದರು. ದಲಿತರು, ಬಡವರು ಸೇರಿದಂತೆ ಯಾರ ಮನೆಯೂ ಶೈನಿಂಗ್ ಆಗಲಿಲ್ಲ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಟೀಕಿಸಿದರು.
ಬೆಂಗಳೂರಿನ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಲ್ಯಾಣ ಯೋಜನೆಗಳಡಿ ನಾಲ್ಕು ಸಾವಿರಕ್ಕೂ ಹೆಚ್ವು ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ, ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.
ಕಳೆದ ನಾಲ್ಕು ವರ್ಷಗಳಲ್ಲಿ ಆರೂವರೆ ಕೋಟಿ ಜನರಿಗೆ ನಾನಾ ರೀತಿಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ. ಹಿಂದಿನ ಯಾವುದೇ ಸರ್ಕಾರಗಳು ಈ ಕೆಲಸ ಮಾಡಿಲ್ಲ ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ಹೇಳಿದರು.
ಬಡವರಿಗೆ ಸರಕಾರದ ಸೌಲಭ್ಯ ತಲುಪಿಸಿ
"ರಾಜ್ಯದ ಎಲ್ಲ ಬಡವರಿಗೆ ನಾವು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಆ ಕಾರ್ಯಕ್ರಮಗಳು ಜನರನ್ನು ತಲುಪಬೇಕು. ಆ ಕೆಲಸವನ್ನು ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಮಾಡಬೇಕು," ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಪ್ರಚಾರದಲ್ಲಿ ನಾವು ಹಿಂದೆ
"ನಾವು ಮಾಡಿರುವ ಕೆಲಸಗಳ ಬಗ್ಗೆ ಪ್ರಚಾರವಾಗುತ್ತಿಲ್ಲ. ನಾವು ಅದರಲ್ಲಿ ಹಿಂದೆ ಇದ್ದೇವೆ. ಕೇಂದ್ರದವರು ಕೆಲಸ ಮಾಡದಿದ್ದರೂ ಭರ್ಜರಿಯಾಗಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಅಚ್ಛೇ ದಿನ್ ಕೇವಲ ಬಾಯಿ ಮಾತಿನಲ್ಲಿ ಇದೆಯೇ ಹೊರತು ಕಾರ್ಯರೂಪಕ್ಕೆ ಬರಲಿಲ್ಲ. ಈ ಹಿಂದೆ ಬಿಜೆಪಿಯವರು ಇಂಡಿಯಾ ಶೈನಿಂಗ್ ಎಂದರು. ದಲಿತರು, ಬಡವರು ಸೇರಿದಂತೆ ಯಾರ ಮನೆಯೂ ಶೈನಿಂಗ್ ಆಗಲಿಲ್ಲ," ಎಂದು ಸಿದ್ದರಾಮಯ್ಯ ಬಿಜೆಪಿ ಹರಿಹಾಯ್ದರು.
'ಅಲ್ಪಸಂಖ್ಯಾತರೂ ಈ ದೇಶದ ಪ್ರಜೆಗಳು'
"ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ 1750 ಕೋಟಿ ರೂ. ಮೀಸಲಿಡಲಾಗಿದೆ. ಇದಕ್ಕೆ ಬಿಜೆಪಿಯವರಿಂದ ಟೀಕೆ ವ್ಯಕ್ತವಾಯಿತು. ಅಲ್ಪಸಂಖ್ಯಾತರೂ ಈ ದೇಶದ ಪ್ರಜೆಗಳೇ. ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯ. ದಲಿತರು, ಅಲ್ಪಸಂಖ್ಯಾತರು, ಬಡವರು, ಮಹಿಳೆಯರಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ.," ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ನುಡಿದಂತೆ ನಡೆಯುವವರು ನಾವು
"ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ್ದ 165 ಭರವಸೆಗಳ ಪೈಕಿ 165 ಭರವಸೆಗಳನ್ನು ಈಡೇರಿಸಿದ್ದೇವೆ. ನುಡಿದಂತೆ ನಡೆಯುವವರು ನಾವು. ನಾಲ್ಕು ಕೋಟಿಗೂ ಹೆಚ್ವು ಜನರಿಗೆ ಅನ್ನಭಾಗ್ಯ ಯೋಜನೆಯಡಿ ಅನ್ನ ನೀಡುತ್ತಿದ್ದೇವೆ. ಅದೇ ರೀತಿ 1.5 ಕೋಟಿ ಶಾಲಾ ಮಕ್ಕಳಿಗೆ ಹಾಲು ಕೊಡುತ್ತಿದ್ದೇವೆ. ಅವರಿಗೆ ಶೂ, ಸಾಕ್ಸ್, ಸಮವಸ್ತ್ರ ವಿತರಿಸುತ್ತಿದ್ದೇವೆ," ಎಂದು ಅವರು ಮಾಹಿತಿ ನೀಡಿದರು.
ಪಾಲಿಕೆ ಆಸ್ತಿ ಅಡವಿಟ್ಟಿದ್ದ ಬಿಜೆಪಿ
"ಬೆಜೆಪಿಯವರು ಅಧಿಕಾರಿದಲ್ಲಿದ್ದಾಗ ಪಾಲಿಕೆಯ ಆಸ್ತಿಗಳನ್ನೇ ಅಡಮಾನ ಇಟ್ಟಿದ್ದರು. ಪಾಲಿಕೆಗೆ 110 ಹಳ್ಳಿಗಳನ್ನು ಸೇರಿಸಿ ಯಾವುದೇ ಸೌಲಭ್ಯ ಒದಗಿಸಲಿಲ್ಲ. ನಾವು ಈಗ ಐದು ಸಾವಿರ ಕೋಟಿ ರೂ. ವೆಚ್ಚದಲ್ಲಿ ಆ ಹಳ್ಳಿಗಳಿಗೆ ನೀರು, ರಸ್ತೆ, ಚರಂಡಿ ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ," ಎಂದು ಸಿಎಂ ತಿಳಿಸಿದರು.
'ಡೋಂಗಿ ಜಾತ್ಯಾತೀತವಾದಿಗಳಿಗೆ ಮಣೆ ಹಾಕಬೇಡಿ'
"ಬಿಜೆಪಿ, ಜೆಡಿಎಸ್ ಗೆ ಸಾಮಾಜಿಕ ನ್ಯಾಯ, ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಲ್ಲ. ಇವರೆಲ್ಲಾ ಡೋಂಗಿ ಜಾತ್ಯಾತೀತವಾದಿಗಳು. ಇವರಿಗೆ ಮತದಾರರು ಮಣೆ ಹಾಕಬಾರದು. ಮತದಾರರು ನಮ್ಮ ಪಾಲಿಗೆ ದೇವರುಗಳು. ಕಳೆದ ನಾಲ್ಕು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ನಾವು ಅವರಿಗೆ ವರದಿ ಒಪ್ಪಿಸುತ್ತೇವೆ," ಎಂದು ಸಿದ್ದರಾಮಯ್ಯ ಹೇಳಿ ತಮ್ಮ ಭಾಷಣ ಮುಗಿಸಿದರು.
ಕಾರ್ಯಕ್ರಮದಲ್ಲಿ ಸರ್ವಜ್ಞನಗರದ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಉಪಸ್ಥಿತರಿದ್ದರು.