Traffic Violation: ದಂಡದ ಶೇ.50 ರಿಯಾಯಿತಿಯನ್ನು 3ತಿಂಗಳು ಮುಂದುವರಿಸಲು ಎಎಪಿ ಬೇಡಿಕೆ
ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಸಂಚಾರ ನಿಯಮಗಳ ದಂಡಕ್ಕೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದ್ದು, ಅದರ ಅವಕಾಶವನ್ನು ಮೂರು ತಿಂಗಳವರೆಗೆ ವಿಸ್ತರಣೆ ಮಾಡಿ ಎಂದು ಎಎಪಿ ಆಗ್ರಹಿಸಿದೆ. ಇದಕ್ಕೆ ಕಾರಣವೇನು?
ಬೆಂಗಳೂರು, ಫೆಬ್ರುವರಿ 05: ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಸಂಚಾರ ನಿಯಮಗಳ ದಂಡಕ್ಕೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದ್ದು, ಅದರ ಅವಕಾಶವನ್ನು ಮೂರು ತಿಂಗಳವರೆಗೆ ವಿಸ್ತರಣೆ ಮಾಡಿ ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಸಾರಿಗೆ ಇಲಾಖೆ ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿತ್ತು. ಸಂಚಾರ ನಿಯಮಗಳ ದಂಡದಲ್ಲಿ ಶೇ.50 ರಿಯಾಯಿತಿ ಘೋಷಿಸಿತು. ಇದಾದ ಬೆನ್ನಲ್ಲೆ ಕೇವಲ ಎರಡೇ ದಿನದಲ್ಲಿ 13.8 ಕೋಟಿ ರೂ. ಹಣ ಸಂಗ್ರಹವಾಗಿದೆ. ಇನ್ನೂ ಸಹ ದಂಡ ಕಟ್ಟಲೂ ಜನ ಮುಗಿಬೀಳುತ್ತಿದ್ದಾರೆ. ಆದರೆ ಸಾರಿಗೆ ಇಲಾಖೆ ರಿಯಾಯಿತಿ ದಂಡದ ಬಾಕಿ ಪಾವತಿಗೆ ಫೆಬ್ರುವರಿ 11ರವರೆಗೆ ಅವಕಾಶ ನೀಡಲಾಗಿದೆ. ಈ ಅವಧಿ ವಿಸ್ತರಣೆಗೆ ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಅವರು ಮನವಿ ಮಾಡಿದ್ದಾರೆ.
ರಾಜ್ಯ ಚುನಾವಣೆಗೆ ಸಚಿವ ಧರ್ಮೇಂದ್ರ ಪ್ರಧಾನ್ & ಅಣ್ಣಾಮಲೈ ಕರ್ನಾಟಕ ಬಿಜೆಪಿ ಉಸ್ತುವಾರಿ
ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದ ಜಗದೀಶ್ ವಿ ಸದಂ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನಂತೆ, ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ದಂಡವನ್ನು ಫೆಬ್ರವರಿ 11ರೊಳಗೆ ಪಾವತಿಸಿದಲ್ಲಿ ಶೇ. 50ರಷ್ಟು ವಿನಾಯಿತಿ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗೆ ವಿನಾಯಿತಿ ನೀಡುವ ಮೂಲಕ ವಾಹನ ಸವಾರರಿಗೆ ನೆರವಾಗುವುದು ಸ್ವಾಗತಾರ್ಹ. ಆದರೆ ಅತ್ಯಲ್ಪ ಅವಧಿಯ ಕಾಲಮಿತಿ ನಿಗದಿಪಡಿಸುವ ಮೂಲಕ ಕೇವಲ ಶ್ರೀಮಂತ ವಾಹನ ಸವಾರರಿಗೆ ಮಾತ್ರ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
ಕೇವಲ ಒಂದು ವಾರಗಳ ಸಮಯಾವಕಾಶ ನೀಡುವುದರಿಂದ ಬಡ ಮತ್ತು ಮಧ್ಯಮ ವರ್ಗದ ವಾಹನ ಸವಾರರಿಗೆ ಹಣ ಹೊಂದಿಸಲು ಕಷ್ಟವಾಗುತ್ತದೆ. ಅಲ್ಲದೇ, ಅನೇಕ ವಾಹನ ಸವಾರರು ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸುವುದು ಸೇರಿದಂತೆ ನಾನಾ ರೀತಿಯ ಅಗತ್ಯ ಖರ್ಚುಗಳು ಈ ಸಮಯದಲ್ಲಿರುತ್ತದೆ.
ಅಲ್ಲದೇ ಈ ವಿನಾಯಿತಿ ಯೋಜನೆ ಆದೇಶ ಸರ್ಕಾರ ದಿಢೀರ್ ಘೋಷಿಸಿದೆ. ಈ ಕಾರಣದಿಂದ ಮೊದಲೇ ಹಣವನ್ನು ಕೂಡಿಟ್ಟುಕೊಳ್ಳಲೂ ವಾಹನ ಸವಾರರಿಗೆ ಅವಕಾಶ ಸಿಕ್ಕಿರುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿನಾಯಿತಿ ಯೋಜನೆಯ ಕಾಲಮಿತಿಯನ್ನು ಮೂರು ತಿಂಗಳ ತನಕ ವಿಸ್ತರಿಸಬೇಕು. ಈ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರರಿಗೂ ವಿನಾಯಿತಿಯ ಫಲಾನುಭವ ಸಿಗುವಂತೆ ಮಾಡಬೇಕು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರಲ್ಲಿ ಶನಿವಾರದ ಅಂತ್ಯಕ್ಕೆ ಎರಡೇ ದಿನದಲ್ಲಿ ಒಟ್ಟು 4,77,298 ಸಂಚಾರ ನಿಯಮ ಉಲ್ಲಂಘನೆಯ (Traffic Rules Violation) ಕೇಸ್ಗಳನ್ನು ಪೊಲೀಸ್ ಇಲಾಖೆ ಬಹೆಹರಿಸಿದೆ. ಈ ವೇಳೆ ಇಲಾಖೆಗೆ ಒಟ್ಟು 13,81,13,621 ರೂ. ಹಣ ದಂಡದ ರೂಪದಲ್ಲಿ ಸಂಗ್ರಹವಾಗಿದೆ. ಈ ಪೈಕಿ ಶುಕ್ರವಾರ ಒಂದೇ ದಿನ 5.6 ಕೋಟಿ ರೂ. ದಂಡದ ಹಣ ಪಾವತಿಯಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.