ಸ್ಯಾಂಟ್ರೋ ರವಿ, ಆತನ ಸಂಪರ್ಕಿತ ರಾಜಕಾರಣಿಗಳ ಬಂಧನಕ್ಕೆ ಆಗ್ರಹಿಸಿ ಎಎಪಿ ಮಹಿಳಾ ಕಾರ್ಯಕರ್ತರ ಪ್ರತಿಭಟನೆ
ಬೆಂಗಳೂರು, ಜನವರಿ 11: ವೇಶ್ಯಾವಟಿಕೆಯ ಮಧ್ಯವರ್ತಿ ಸ್ಯಾಂಟ್ರೋ ರವಿ ಹಾಗೂ ಆತನೊಂದಿಗೆ ಸಂಬಂಧ ಹೊಂದಿದ್ದ ಜನಪ್ರತಿನಿಧಿಗಳನ್ನು ಶೀಘ್ರವೇ ಬಂಧಿಸಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕದಿಂದ ಬುಧವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ ಅವರು, ರಾಜ್ಯವನ್ನು ಲೂಟಿ ಮಾಡುವ ಉದ್ದೇಶದಿಂದ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡು ರಚನೆಯಾದ ಅನೈತಿಕ ಸರ್ಕಾರವಿದು ಎಂದು ಟೀಕಿಸಿದರು.
ಬಿಜೆಪಿ ನಾಯಕರು ಬಾಯಿ ತೆರೆದರೆ ಭಾರತೀಯ ಸಂಸ್ಕೃತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಾರೆ. ಆ ನಾಯಕರ ನಿಜ ಬಣ್ಣವು ಸ್ಯಾಂಟ್ರೋ ರವಿ ಪ್ರಕರಣದಿಂದಾಗಿ ಬಟಾ ಬಯಲಾಗಿದೆ. ಮಹಿಳೆಯರ ಬಗ್ಗೆ ಸ್ಪಲ್ಪವೂ ಗೌರವವಿಲ್ಲದ ನಾಯಕರು ಇಂದು ರಾಜ್ಯವನ್ನು ಆಳುತ್ತಿರುವುದು ದುರಂತ ಎಂದು ವಿಷಾಧಿಸಿದರು.
ಎಎಪಿಯಿಂದ ಅತಿಥಿಗೃಹ ಪರಿಶೀಲನೆ: ಎಚ್ಚರಿಕೆ
ರಾಜ್ಯ ಸರ್ಕಾರದ ಮುಖ್ಯಮಂತ್ರಿ ಹಾಗೂ ಸಚಿವರುಗಳು ಸ್ಯಾಂಟ್ರೋ ರವಿ ಬಗ್ಗೆ ಗೊತ್ತೇ ಇಲ್ಲವೆಂದು ಮಾಧ್ಯಮಗಳ ಮುಂದೆ ನಾಟಕವಾಡುತ್ತಿದ್ದಾರೆ. ಆದರೆ ಮತ್ತೊಂಡೆದೆ, ಆತನಿಗೆ ಸರ್ಕಾರವೇ ಬೆಂಬಲವಾಗಿ ನಿಂತಿದೆ. ಆತನಿಗೆ ನಾಪತ್ತೆಯಾಗಲು ಅವಕಾಶ ನೀಡಿ ಸಾಕ್ಷಿಗಳನ್ನು ನಾಶಪಡಿಸಲಾಗುತ್ತಿದೆ. ಆದ್ದರಿಂದಲೇ ಆತನ ಬಂಧನ ಈವರೆಗೂ ಸಾಧ್ಯವಾಗಿಲ್ಲ. ಕುಮಾರಕೃಪಾ ಅತಿಥಿಗೃಹವು ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವು ವಿಪರ್ಯಾಸ.
ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿಯು ಕುಮಾರಕೃಪಾದ ಪ್ರತಿಯೊಂದು ಕೊಠಡಿಗೆ ಭೇಟಿ ನೀಡಿ ಪರಿಶೀಲಿಸುವ ಚಳವಳಿ ಹಮ್ಮಿಕೊಳ್ಳಲಿದೆ ಎಂದು ಕುಶಲಸ್ವಾಮಿ ಎಚ್ಚರಿಕೆ ನೀಡಿದರು.
ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಮಾಧ್ಯಮ ವಕ್ತಾರೆ ಉಷಾ ಮೋಹನ್ ಮಾತನಾಡಿ, 2018ರ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಬಂದಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಶಾಸಕರನ್ನು ಖರೀದಿಸಿ ಅಕ್ರಮವಾಗಿ ಅಧಿಕಾರ ಪಡೆಯುವಾಗ ಸ್ಯಾಂಟ್ರೋ ರವಿ ಮೂಲಕ ಮಹಿಳೆಯರನ್ನು ದುರ್ಬಳಕೆ ಮಾಡಿಕೊಂಡಿರುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುವ ಪಕ್ಷವೆಂದರೆ ಅದು ಬಿಜೆಪಿ. ಮುಂದಿನ ಚುನಾವಣೆಯಲ್ಲಿ ನಾಡಿನ ಸಮಸ್ತ ಮಹಿಳೆಯರು ಬಿಜೆಪಿಯ ವಿರುದ್ಧ ಮತ ಚಲಾಯಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಪ್ರತಿಭಟನೆಯುದ್ದಕ್ಕೂ ಮಹಿಳಾ ಕಾರ್ಯಕರ್ತೆಯರು ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. 'ಮಹಿಳಾ ವಿರೋಧಿ ಸರ್ಕಾರ, ಅನೈತಿಕ ಸರ್ಕಾರಕ್ಕೆ ಧಿಕ್ಕಾರ, ಬ್ರೋಕರ್ ಸರ್ಕಾರ, ಲಜ್ಜೆಗೆಟ್ಟ ಮಂತ್ರಿಗಳು ಹಾದಿ ಬಿಟ್ಟ ಸರ್ಕಾರ' ಎಂಬೆಲ್ಲ ನಾಮಫಲಕ ಹಿಡಿದು ಪ್ರತಿಭಟಿಸಿ ಆಕ್ರೋಶ ಹೊರಹಾಕಿದ್ದು ಕಂಡು ಬಂತು.