ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳನ್ನು ಸೂಚಿಸಿ: ಎಎಪಿ
ಬೆಂಗಳೂರು, ಫೆಬ್ರವರಿ 04: ಆಮ್ ಆದ್ಮಿ ಪಕ್ಷವು ಬಿಬಿಎಂಪಿಯ 198 ವಾರ್ಡ್ ಗಳಲ್ಲಿಯೂ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಪ್ರಾಮಾಣಿಕ ಮತ್ತು ಜನಪರ ಕಾಳಜಿಯುಳ್ಳ ಸೂಕ್ತ ಅಭ್ಯರ್ಥಿಗಳ ಹೆಸರುಗಳನ್ನು ಪ್ರತಿ ವಾರ್ಡ್ ಗಳಲ್ಲಿಯೂ ಜನಸಾಮಾನ್ಯರಿಂದಲೇ ಸಂಗ್ರಹಿಸುವ ವಿಶೇಷ ಅಭಿಯಾನವನ್ನು ಈ ತಿಂಗಳಲ್ಲಿ ಹಮ್ಮಿಕೊಂಡಿದೆ.
ದೆಹಲಿಯ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ದೆಹಲಿಯಲ್ಲಿ ಕಳೆದ ಐದು ವರ್ಷಗಳಲ್ಲಿ ತಂದಿರುವ ಕ್ರಾಂತಿಕಾರದ ಬದಲಾವಣೆ ಮತ್ತು ಅಭಿವೃದ್ಧಿ ಮಾದರಿಯನ್ನು ಸ್ಪೂರ್ತಿಯಾಗಿಟ್ಟುಕೊಂಡು ಬೆಂಗಳೂರನ್ನು ವಿಶ್ವದರ್ಜೆಯ ಮಹಾನಗರವನ್ನಾಗಿ ಅಭಿವೃದ್ಧಿಪಡಿಸುವುದು ಪಕ್ಷದ ಧ್ಯೇಯವಾಗಿದೆ.
ಮನೆ ಬಾಗಿಲಿಗೆ ಪಡಿತರ ವಿತರಣೆ, ದೆಹಲಿಗಾಗಿ ಎಎಪಿ ಪ್ರಣಾಳಿಕೆ
ಕಳೆದ ಕೆಲವು ತಿಂಗಳುಗಳಲ್ಲಿ "ಮನೆ ಮನೆಗೆ ಆಮ್ ಆದ್ಮಿ" ಅಭಿಯಾನದ ಮೂಲಕ ಪಕ್ಷದ ಕಾರ್ಯಕರ್ತರು ಅನೇಕ ವಾರ್ಡ್ಗಳಲ್ಲಿ ಮನೆ ಮನೆಗೆ ಭೇಟಿನೀಡಿ ಪ್ರಚಾರವನ್ನು ನಡೆಸುತ್ತಿದ್ದಾರೆ. ಅಲ್ಲದೆ, ಇತ್ತೀಚಿಗೆ ಬಿಡುಗಡೆಯಾದ "ಹೊಸ ಬೆಂಗಳೂರು" ಕಿರುಚಿತ್ರ ಪ್ರದರ್ಶನ ಮತ್ತು ಜನಸಂವಾದಕ್ಕೆ ಜನರಿಂದ ಉತ್ತಮ ಸ್ಪಂದನೆ ದೊರಕುತ್ತಿದ್ದು, ಅನೇಕ ವಾರ್ಡ್ಗಳಲ್ಲಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಜನಪರ ಚಿಂತನೆಯುಳ್ಳ ನಾಗರಿಕರು ಮುಂದೆ ಬರುತ್ತಿದ್ದಾರೆ.
ಚುನಾವಣೆ ಸ್ಪರ್ಧಿಸಲು ಯಾರು ಅರ್ಹರು?
ರಾಜಕೀಯದಲ್ಲಿ ಸದ್ಯದಲ್ಲಿರುವ ಅವ್ಯವಸ್ಥೆಯಿಂದಾಗಿ, ಹಣ, ತೋಳ್ಬಲ, ರಾಜಕೀಯ ಮನೆತನ ಮುಂತಾದ ಅಂಶಗಳಿರುವವರು ಮಾತ್ರ ಚುನಾವಣೆ ಸ್ಪರ್ಧಿಸಲು ಅರ್ಹರು ಎಂಬ ತಪ್ಪು ಕಲ್ಪನೆ ಪ್ರಚಲಿತವಾಗಿದ್ದು, ಅನೇಕ ಜನಪರ ಕಾಳಜಿಯುಳ್ಳ ಸಜ್ಜನರನ್ನು ರಾಜಕೀಯದಿಂದ ದೂರ ಉಳಿಯುವಂತೆ ಮಾಡಿದೆ. ಈ ದುರಾದೃಷ್ಟಕರ ತಪ್ಪು ಕಲ್ಪನೆಯನ್ನು ಹೋಗಲಾಡಿಸಿ, ಜನಪರ ಚಿಂತನೆಯುಳ್ಳ ನಾಗರಿಕರನ್ನು ಗುರುತಿಸಿ, ಕಣಕ್ಕಿಳಿಸಿ, ವಾರ್ಡಿನ ಅಭಿವೃದ್ಧಿಗಾಗಿ ದುಡಿಯುವಂತಹ ಕಾರ್ಪೊರೇಟರ್ಗಳನ್ನು ಬಿಬಿಎಂಪಿಗೆ ಕಳಿಸುವುದು "ಜನಸಾಮಾನ್ಯರಿಂದಲೇ ಅಭ್ಯರ್ಥಿಗಳ ಶಿಫಾರಸ್ಸು" ಅಭಿಯಾನದ ಉದ್ದೇಶ.
ವಾರ್ಡ್ ನ ಅಭಿವೃದ್ಧಿಗೆ ಯಾರು ಶ್ರಮಿಸಬಲ್ಲರು?
ತಮ್ಮ ವಾರ್ಡ್ ನ ಅಭಿವೃದ್ಧಿಗೆ ಯಾರು ಶ್ರಮಿಸಬಲ್ಲರು ಎಂದು ಸಾರ್ವಜನಿಕರಿಗೆ ಸೂಕ್ತ ಎನಿಸುವವರ ಹೆಸರನ್ನು 95388 99334 ನಂಬರಿಗೆ ಫೆಬ್ರುವರಿ 29 ರೊಳಗೆ ವಾಟ್ಸಾಪ್ ಮೂಲಕ ಶಿಫಾರಸ್ಸು ಮಾಡಬಹುದು. ಶಿಫಾರಸ್ಸು ಮಾಡುತ್ತಿರುವವರ ಹೆಸರಿನೊಂದಿಗೆ, ವಾರ್ಡ್ ಹೆಸರು, ಸಂಪರ್ಕಿಸುವ ವಿಧಾನ (ಫೋನ್ ನಂಬರ್, ಇಮೇಲ್, ವಿಳಾಸ ಇತ್ಯಾದಿ), ಕಿರು ಪರಿಚಯವನ್ನು ಸಹಾ ಜನಸಾಮಾನ್ಯರು ವಾಟ್ಸಾಪ್ ಮಾಡಿದಲ್ಲಿ, ಆಮ್ ಆದ್ಮಿ ಪಕ್ಷದ ಮುಖಂಡರು ಸಾಧ್ಯವಾದಷ್ಟು ಶೀಘ್ರವಾಗಿ ಭೇಟಿಯಾಗಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಶೇ. 50 ಮಹಿಳೆಯರಿಗೆ ಮೀಸಲಾಗಿರುತ್ತವೆ
ಬಿಬಿಎಂಪಿಯ ಚುನಾವಣೆಯಲ್ಲಿ ಮೀಸಲಾತಿಯಿಲ್ಲದ ವಾರ್ಡ್ಗಳಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿರುವುದರ ಜೊತೆಗೆ, ಹಲವಾರು ಸೀಟುಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ - ಕೆಟಗರಿ ಎ ಮತ್ತು ಕೆಟಗರಿ ಬಿ ವಿಭಾಗಕ್ಕೆ ಮೀಸಲಾಗಿರುತ್ತವೆ ಮತ್ತು ಈ ಪ್ರತೀ ವಿಭಾಗದಲ್ಲಿಯೂ ಶೇ. 50 ಮಹಿಳೆಯರಿಗೆ ಮೀಸಲಾಗಿರುತ್ತವೆ.
ಜನಸಾಮಾನ್ಯರಿಂದಲೇ ಅಭ್ಯರ್ಥಿಗಳ ಶಿಫಾರಸ್ಸು
ಇದನ್ನು ಗಮನಿಸಿ "ಜನಸಾಮಾನ್ಯರಿಂದಲೇ ಅಭ್ಯರ್ಥಿಗಳ ಶಿಫಾರಸ್ಸು" ಅಭಿಯಾನದಲ್ಲಿ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯಿದೆ. ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು, ಜನಪರ ಕಾಳಜಿಯುಳ್ಳ ಮಹಿಳೆಯರನ್ನು ಸ್ಪರ್ಧಿಸಲು ಉತ್ತೇಜಿಸಬಹುದು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಹೆಸರುಗಳನ್ನು ಶಿಫಾರಸ್ಸು ಮಾಡಬಹುದು.